- ಕರಗ ಹೊತ್ತ ಜ್ಞಾನೇಂದ್ರ ಅವರ ಮೈ ಮೇಲೆ ಸುಟ್ಟ ಗಾಯ
- ಆದಿನಾರಾಯಣ ವಿರುದ್ಧ ಕೊಲೆ ಯತ್ನ ಆರೋಪ; ಎಫ್ಐಆರ್ ದಾಖಲು
ರಾಜಧಾನಿ ಬೆಂಗಳೂರಿನಲ್ಲಿ ವಿಶ್ವವಿಖ್ಯಾತ ಬೆಂಗಳೂರು ಕರಗ ಏ. 6ರಂದು ನಡೆದಿದ್ದು. ಈ ವೇಳೆ, ಕರಗಕ್ಕೆ ಅಪಚ್ಯುತಿ ತರಲು ಕೆಲವು ಕಿಡಿಗೇಡಿಗಳು ಉತ್ಸವಕ್ಕೆ ಬಳಸುವ ಹೂವಿಗೆ ಖಾರದ ಪುಡಿ ಹಾಗೂ ಕೆಲವು ರಾಸಾಯನಿಕಗಳನ್ನು ಮಿಶ್ರಣ ಮಾಡಿ ಎರಚಿದ್ದಾರೆ ಎಂದು ಕರಗ ಹೊತ್ತ ಅರ್ಚಕ ಜ್ಞಾನೇಂದ್ರ ಆರೋಪಿಸಿದ್ದಾರೆ.
ಕರಗ ಹೊತ್ತ ಜ್ಞಾನೇಂದ್ರ ಅವರ ಮೈ ಮೇಲೆ ಸುಟ್ಟ ಗಾಯಗಳಾಗಿದ್ದು, ರಾಸಾಯನಿಕ ವಸ್ತು ಎರಚಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
“ಕರಗ ಉತ್ಸವದ ವೇಳೆ ಜ್ಞಾನೇಂದ್ರ ಮೇಲೆ ಆದಿನಾರಾಯಣ ಎಂಬ ವ್ಯಕ್ತಿ ಯಾವುದೋ ವಸ್ತು ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜ್ಞಾನೇಂದ್ರ ನೀಡಿದ ದೂರಿನ ಮೇರೆಗೆ ಜಯನಗರದ ಆದಿನಾರಾಯಣ ವಿರುದ್ಧ ಕೊಲೆ ಯತ್ನ ಆರೋಪದಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜಧಾನಿಯಲ್ಲಿ ದೇಶದ ಮೊದಲ 3‘ಡಿ’ ತಂತ್ರಜ್ಞಾನದ ಅಂಚೆ ಕಚೇರಿ
“ಈ ಘಟನೆಯಿಂದ ಜ್ಞಾನೇಂದ್ರ ಅವರ ಕುತ್ತಿಗೆ, ಎದೆ, ಹೊಟ್ಟೆಭಾಗ ಸೇರಿದಂತೆ ನಾನಾ ಕಡೆಗಳಲ್ಲಿ ಸುಟ್ಟಗಾಯಗಳಾಗಿವೆ. ಹಲವು ವರ್ಷಗಳಿಂದ ಕರಗ ಹೊರುವ ವಿಚಾರವಾಗಿ ಆದಿನಾರಾಯಣ ಹಾಗೂ ಜ್ಞಾನೇಂದ್ರ ನಡುವೆ ಮನಸ್ತಾಪವಿದೆ. ಈ ಕಾರಣಕ್ಕಾಗಿ ಆತ ಕೃತ್ಯ ಎಸಗಿರಬಹುದು” ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.