- 6 ಲಕ್ಷ ಮೌಲ್ಯದ ಚಿನ್ನಾಭರಣ, 2 ಬೈಕ್ಗಳನ್ನು ವಶಕ್ಕೆ ಪಡೆದ ಪೊಲೀಸರು
- ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ
ಬೆಂಗಳೂರಿನಲ್ಲಿ ಇಬ್ಬರು ಅಂತಾರಾಜ್ಯ ಕಳ್ಳರನ್ನು ಗಿರಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಬಾಷಾ (34), ಶೇಕ್ ಅಯೂಬ್ (32) ಬಂಧಿತರು. ಇವರಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ, 2 ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಸೈಯದ್ ಎಂಬುವವನು ಆಂಧ್ರದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ‘ಮಿಸ್ಟರ್ ಆಂಧ್ರ’ ಪ್ರಶಸ್ತಿ ಪಡೆದಿದ್ದಾನೆ. ಆಂಧ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದ ಇತ ಬೆಂಗಳೂರಿನಲ್ಲಿ ಕಳ್ಳತನ ಮಾಡುವಲ್ಲಿ ಕುಖ್ಯಾತಿ ಪಡೆದಿದ್ದಾನೆ. ಸೈಯದ್ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಜಾಲಿ ರೈಡ್ಗೆಂದು ಬಂದು ಲಾಡ್ಜ್ ಮಾಡಿ ಪಾರ್ಟಿ ಮಾಡುತ್ತಿದ್ದನು. ಜತೆಗೆ ಸರಗಳ್ಳತನ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಇತ್ತೀಚೆಗೆ, ಈ ಇಬ್ಬರು ಬಂಧಿತರು ಜಾನಕಿ ಎಂಬುವವರ ಸರ ಕದ್ದು, ಪರಾರಿಯಾಗಿದ್ದರು. ಜಾನಕಿ ಅವರು ಸರಕಳ್ಳತನವಾದ ಬಗ್ಗೆ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ, ಪೊಲೀಸರು ಸಿಸಿಟಿವಿ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಯತ್ನ ಮಾಡಿದರು. ಈ ವೇಳೆ, ಸೈಯದ್ ಕದ್ದ ಬೈಕ್ ಸಿಕ್ಕಿತ್ತು. ಬೈಕ್ ಬಿಟ್ಟು ಹೋದವನು ಮತ್ತೆ ಬರುತ್ತಾನೆ ಎಂದು ಪೊಲೀಸರು ಬೈಕ್ಗೆ ಜಿಪಿಎಸ್ ಅಳವಡಿಸಿದ್ದರು.
ಹದಿನೈದು ದಿನಗಳ ಬಳಿಕ ಜಿಪಿಎಸ್ ಆಕ್ಟೀವ್ ಆಗಿತ್ತು. ಜಿಪಿಎಸ್ನ ಫಾಲೋ ಮಾಡಿದರಿಂದ ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಮತ್ತೊಬ್ಬ ಆರೋಪಿ ಶೇಕ್ ಅಯೂಬ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರ್ಯಾಪಿಡೋ ಬೈಕ್ ಸವಾರನಿಂದ ಕಿರುಕುಳ ; ರಕ್ಷಣೆಗಾಗಿ ಚಲಿಸುತ್ತಿದ್ದ ಬೈಕ್ನಿಂದ ಜಿಗಿದ ಮಹಿಳೆ
ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವು
ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್ನಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡದೆ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಟಿವಿಎಸ್ ಎಕ್ಸ್ಎಲ್ ಸ್ಕೂಟರಿನಲ್ಲಿ ಬರುತ್ತಿದ್ದ ಇಬ್ಬರು ಯುವಕರಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ, ಲಾರಿ ಕೆಳಗೆ ಸಿಲುಕಿ ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ.
ಮೃತನ ವಿವರ ಇನ್ನೂ ಲಭ್ಯವಾಗಿಲ್ಲ. ಅಪಘಾತದ ಬೆನ್ನಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದು, ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.