- ‘ಬಸ್ ಸ್ಟ್ಯಾಂಡ್ ಹುಡುಕಿ ಕೊಡಿ’ ಎಂದು ಠಾಣೆಗೆ ದೂರು
- ಬಳಕೆ ಇಲ್ಲದ ಬಸ್ ಸ್ಟ್ಯಾಂಡ್ಗಳ ತೆರುವು ಕಾರ್ಯಾಚರಣೆ
ರಾಜಧಾನಿ ಬೆಂಗಳೂರಿನಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ ತಂಗುದಾಣಗಳು ಒಂದೊಂದಾಗಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತಿವೆ. ಇದೀಗ ಚಾಮರಾಜಪೇಟೆಯ ರಾಯನ್ ಸರ್ಕಲ್ನಲ್ಲಿ ನೆನ್ನೆ ಇದ್ದ ಬಸ್ ತಂಗುದಾಣ ಇವತ್ತು ಕಾಣೆಯಾಗಿದೆ.
ಈ ಹಿಂದೆ, ನಗರದ ಹೆಚ್ಎಸ್ಆರ್ ಲೇಔಟ್ನಲ್ಲಿರುವ ಲಯನ್ಸ್ ಬಸ್ ತಂಗುದಾಣ ರಾತ್ರೋರಾತ್ರಿ ಮಾಯವಾಗಿತ್ತು.
ಬಸ್ ಸ್ಟಾಪ್ ಕಣ್ಮರೆಯಾಗಿರುವ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ವಂದೆ ಮಾತರಂ ಸಂಘಟನೆಯ ರಾಜ್ಯಾದ್ಯಕ್ಷ ಸಿಎಂ ಶಿವಕುಮಾರ್ ನಾಯ್ಕ, “ಚಾಮರಾಜಪೇಟೆಯ ರಾಯನ್ ಸರ್ಕಲ್ನಲ್ಲಿ ನೆನ್ನೆ ಇದ್ದ ಬಸ್ ನಿಲ್ದಾಣ ಇವತ್ತು ಇಲ್ಲವಾಗಿದೆ. ಆದ್ದರಿಂದ, ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಚಾಮರಾಜಪೇಟೆಯ ಪೊಲೀಸ್ ಠಾಣೆಗೆ ‘ಬಸ್ ಸ್ಟ್ಯಾಂಡ್ ಹುಡುಕಿ ಕೊಡಿ’ ಎಂದು ದೂರು ದಾಖಲಿಸಲಾಗುವುದು. ಬಸ್ ನಿಲ್ದಾಣ ಬಳಕೆಯಲ್ಲಿತ್ತು. ಯಾವುದೇ ಸೌಕರ್ಯದ ಕೊರತೆ ಇರಲಿಲ್ಲ” ಎಂದರು.
“ಬೆಂಗಳೂರಿನಲ್ಲಿ ಬಳಕೆ ಇಲ್ಲದ ಕೆಲವು ಬಸ್ ಸ್ಟ್ಯಾಂಡ್ಗಳನ್ನು ತೆರುವು ಮಾಡಲಾಗುತ್ತಿದೆ. ಈ ಹಿಂದೆ ಹೆಚ್ಎಸ್ಆರ್ ಲೇಔಟ್ನಲ್ಲಿರುವ ಲಯನ್ಸ್ ಬಸ್ ನಿಲ್ದಾಣವನ್ನು ತೆರುವು ಮಾಡಲಾಗಿದೆ. ಅದು ಬಳಕೆಯಿಲ್ಲದ ಕಾರಣ ತೆರುವು ಮಾಡಲಾಗಿತ್ತು. ಇನ್ನುಳಿದಂತೆ, ಕೆಲವು ಬಸ್ ನಿಲ್ದಾಣಗಳಿಂದ ಫುಟ್ಪಾತ್ ಒತ್ತುವರಿಯಾಗಿದ್ದರೆ, ಅವುಗಳನ್ನು ತೆರುವು ಮಾಡಲಾಗುತ್ತಿದೆ” ಎಂದು ಬಿಬಿಎಂಪಿ ಸಾರ್ವಜನಿಕ ಸಂಪರ್ಕಾಧಿಕಾರಿ ಸುರೇಶ್ ಈ ದಿನ.ಕಾಮ್ಗೆ ಹೇಳಿದರು.