- ಮೋದಿ ಅವರ ಚುನಾವಣಾ ಗಿಮಿಕ್ ಮತ್ತೆ ಬಯಲಾಗಿದೆ
- ನಿಲ್ದಾಣದ ಒಳಗೋಡೆ ಮತ್ತು ಬದಿಗಳಲ್ಲಿ ನೀರು ಸುರಿಯುತ್ತಿದೆ
ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ದಿನದ ಹಿಂದೆ ಚಾಲನೆ ನೀಡಿದ್ದ ವೈಟ್ಫೀಲ್ಡ್-ಕೆ.ಆರ್.ಪುರ ಮಾರ್ಗದ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣ ಮಂಗಳವಾರ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ.
ನೂತನ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಒಳಗೆ ಪ್ಲಾಟ್ಫಾರ್ಮ್ನಲ್ಲಿ ಹಾಗೂ ಟಿಕೆಟಿಂಗ್ ಕೌಂಟರ್ ಬಳಿ ಮಳೆ ನೀರು ಸಂಪೂರ್ಣವಾಗಿ ಒಳಗೆ ನುಗ್ಗಿದೆ. ಮೆಟ್ರೋ ನಿಲ್ದಾಣದ ಒಳಗೆ ನೀರು ನುಗ್ಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಹಲವರು ಟ್ವೀಟ್ ಮಾಡುತ್ತಿದ್ದಾರೆ.
“ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ಚುನಾವಣೆಗಳಲ್ಲಿ ಲಾಭ ಪಡೆಯಲು ಆತುರವಾಗಿ ಉದ್ಘಾಟನೆ ಮಾಡಿದ್ದಾರೆ. ಚುನಾವಣೆಗಳಲ್ಲಿ ಲಾಭ ಪಡೆಯುವುದು ಒಂದೇ ಗುರಿಯಾಗಿದೆ. ಇಂತಹ ಕೆಲಸವನ್ನು ನಮ್ಮ ಪ್ರಧಾನಿ ಮಾತ್ರ ಮಾಡಬಹುದು. ಇದು ವೈಟ್ಫೀಲ್ಡ್ ಮೆಟ್ರೋ ಯೋಜನೆಯ ಪರಿಸ್ಥಿತಿ. ನಾವು ವಿದ್ಯಾವಂತ ಪ್ರಧಾನಿ, ಮುಖ್ಯಮಂತ್ರಿ ಅಥವಾ ಯಾವುದೇ ಸಾರ್ವಜನಿಕ ಪ್ರತಿನಿಧಿಯನ್ನು ಹೊಂದಿರಬೇಕು” ಎಂದು ನಿತೇಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.
“ಪ್ರಧಾನಿ ಮೋದಿ ಅವರು ಉದ್ಘಾಟಿಸಿದ ಬೆಂಗಳೂರಿನ ವೈಟ್ಫೀಲ್ಡ್ ಮೆಟ್ರೋ ನಿಲ್ದಾಣವು ಮೊದಲ ಮಳೆಯಿಂದಲೂ ಕೂಡಾ ರಕ್ಷಿಸಲಾಗಿಲ್ಲ. ಮಳೆ ನೀರಿನ ಸೋರಿಕೆಯಿಂದಾಗಿ ಪ್ಲಾಟ್ಫಾರ್ಮ್ನಲ್ಲಿ ನೀರು ನಿಂತಿದೆ. ಚುನಾವಣಾ ಸ್ಟಂಟ್ಗಳು ಎಲ್ಲ ಸಮಯದಲ್ಲೂ ಕೆಲಸ ಮಾಡುವುದಿಲ್ಲ. ಮೋದಿಯವರ ಚುನಾವಣಾ ಗಿಮಿಕ್ ಮತ್ತೆ ಬಯಲಾಗಿದೆ” ಎಂದು ಆಶಿಕ್ ಎಂಬುವವರು ಹೇಳಿದ್ದಾರೆ.
“ಪ್ಲಾಟ್ಫಾರ್ಮ್ ಮಟ್ಟದಲ್ಲಿ ಛಾವಣಿಯ ಅಂತರದಿಂದ ನೀರು ಜಿನುಗುತ್ತಿದೆ. ಟಿಕೆಟಿಂಗ್ ಪ್ರದೇಶದ ಬಳಿ ನೆಲವು ಕೆಟ್ಟದಾಗಿದೆ. ನಿಲ್ದಾಣದ ಒಳಗೋಡೆ ಮತ್ತು ಬದಿಗಳಲ್ಲಿ ನೀರು ಸುರಿಯುತ್ತಿದೆ. ಕಟ್ಟಡ ಹೊಚ್ಚ ಹೊಸದಾಗಿದ್ದಾಗ ಒಂದು ಅಥವಾ ಎರಡು ಕಡೆ ನೀರು ಸೋರಿಕೆ ಆಗಬಹುದು. ಆದರೆ ಈ ನಿಲ್ಧಾಣದಲ್ಲಿ ಹಲವು ಕಡೆಗಳಿಂದ ನೀರು ಸೊರಿಕೆಯಾಗುತ್ತಿದೆ. ಪ್ರಯಾಣಿಕರು ರೈಲನ್ನು ಹಿಡಿಯಲು ಓಡುತ್ತಿರುತ್ತಾರೆ. ಪ್ರಯಾಣಿಕರಿಗೆ ಇದು ಖಂಡಿತವಾಗಿಯೂ ಸುರಕ್ಷಿತ ಪ್ರದೇಶವಲ್ಲ” ಎಂದು ವೈಟ್ಫೀಲ್ಡ್ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿರುಗಾಳಿ ಸಹಿತ ಮಳೆ; ವಿಮಾನ ಹಾರಾಟದಲ್ಲಿ ವ್ಯತ್ಯಯ
“ಚುನಾವಣೆಗಳಿಗೆ ಮುನ್ನ ಕೆಲವು ಕೆಲಸಗಳನ್ನು ಮಾಡಿದ ಮಾತ್ರಕ್ಕೆ ಕುರುಡಾಗಿ ಮತ ಚಲಾಯಿಸಬೇಡಿ. ಚುನಾವಣೆಯ ಸಲುವಾಗಿ ಅರೆಬೆಂದ ಕಾಮಗಾರಿಗಳನ್ನು ಉದ್ಘಾಟಿಸಿದಾಗ ಹೀಗಾಗುತ್ತದೆ. ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಉತ್ತಮ ಪಕ್ಷವನ್ನು ಈಗಲಾದರೂ ಜನರು ಅರಿತು ಮತ ಚಲಾಯಿಸಬೇಕು” ಎಂದು ಎಎಪಿಯ ಪ್ರತಿನಿಧಿ ಅಶೋಕ್ ಮೃತ್ಯುಂಜಯ ಟ್ವೀಟ್ ಮಾಡಿದ್ದಾರೆ.