- ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಗಾಯಗೊಂಡು ಸ್ಥಳದಲ್ಲೆ ಸಾವು
- ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಂಗಳೂರಿನ ಮಡಿವಾಳ ಸಮೀಪದ ಮೈಕೋಬಂಡೆ ಬಳಿ ವೇಗವಾಗಿ ಬಂದ ಕಂಟೇನರ್ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಘಟನೆ ಗುರುವಾರ ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ. ವೇಗವಾಗಿ ಬಂದ ಕಂಟೇನರ್ ಲಾರಿಯಿಂದ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕ ಅಪಘಾತದ ಬಳಿಕ ಪರಾರಿಯಾಗಿದ್ದಾನೆ. ಕಂಟೇನರ್ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಗಾಯಗೊಂಡು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ಸಾವನ್ನಪ್ಪಿದ ಬೈಕ್ ಸವಾರನ ಹೆಸರು ಹಾಗೂ ವಿಳಾಸ ತಿಳಿದು ಬಂದಿಲ್ಲ. ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿಯ ಪತ್ತೆಗಾಗಿ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮತದಾರರ ದತ್ತಾಂಶ ಮಾರಾಟ: ಖಾಸಗಿ ಸಂಸ್ಥೆಯ ವೆಬ್ಸೈಟ್ ದೆಹಲಿ ವಿಳಾಸದಲ್ಲಿ ನೋಂದಣಿ
ಅಪಾರ್ಟ್ಮೆಂಟ್ ಒಳಗೆ ಪ್ರವೇಶಿಸುವ ಮುನ್ನ ಸಹಿ ಹಾಕಿ ಎಂದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಬ್ಲಿಂಕಿಟ್ನ ಡೆಲಿವೆರಿ ಬಾಯ್
ಈಶಾನ್ಯ ಬೆಂಗಳೂರಿನ ಚೊಕ್ಕನಹಳ್ಳಿಯ ನಕ್ಷತ್ರ ಅಪಾರ್ಟ್ಮೆಂಟ್ನ ಒಳಗೆ ಪ್ರವೇಶಿಸುವ ಮುನ್ನ ಸಹಿ ಮಾಡಿ ತೆರಳಿ ಎಂದು ಹೇಳಿದ್ದ ಭದ್ರತಾ ಸಿಬ್ಬಂದಿ ಮೇಲೆ ಬ್ಲಿಂಕಿಟ್ನ ಡೆಲಿವೆರಿ ಬಾಯ್ ಹಲ್ಲೆ ಮಾಡಿದ್ದಾನೆ.
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಏ.26 ರಂದು ಅಪಾರ್ಟ್ಮೆಂಟ್ ಒಳಗಡೆ ಸ್ಕೂಟಿಯಲ್ಲಿ ಬ್ಲಿಂಕಿಟ್ ಬಾಯ್ ಸೇರಿದಂತೆ ಇಬ್ಬರು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ, ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಗಾರ್ಡ್ ಎಂಟ್ರಿ ಬುಕ್ನಲ್ಲಿ ಸಹಿ ಮಾಡಿ ತೆರಳುವಂತೆ ಹೇಳಿದ್ದಾರೆ. ಈ ವೇಳೆ, ಕೋಪಗೊಂಡ ಯುವಕರು ಮಾತಿಗೆ ಮಾತು ಬೆಳೆದು ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಕುರಿತು ಪಾರ್ತಿಬನ್ ಮಧಿವಾನನ್ ಎಂಬುವವರು ಸಿಸಿಟಿವಿಯ ವಿಡಿಯೋ ಸಮೇತ ಟ್ವೀಟ್ ಮಾಡಿದ್ದು, “ಆತ್ಮೀಯ ಬ್ಲಿಂಕಿಟ್, ನಿಮ್ಮ ಡೆಲಿವರಿ ಬಾಯ್ಗಳೆಲ್ಲರೂ ಶಿಸ್ತಿನ ವ್ಯಕ್ತಿಗಳಲ್ಲ. ನಮ್ಮ ಅಪಾರ್ಟ್ಮೆಂಟ್ಗೆ ಕೆಲವು ರೌಡಿಗಳು ಭೇಟಿ ನೀಡಿದ್ದರು. ಅಪಾರ್ಟ್ಮೆಂಟ್ ಪ್ರವೇಶ ಮಾಡಿರುವುದಕ್ಕೆ ಸಹಿ ಹಾಕಿ ಎಂದ ನಮ್ಮ ಸೆಕ್ಯುರಿಟಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಸಮಸ್ಯೆ ಏನು ಎಂದು ಕೇಳಲು ಅವರನ್ನು ಕರೆದಿದ್ದಕ್ಕೆ ಅವರು 10 ರಿಂದ 15 ಜನರನ್ನು ಕರೆದುಕೊಂಡು ಬಂದು ನಮಗೆ ಎಚ್ಚರಿಕೆ ನೀಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
“ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ನಗರದಲ್ಲಿರುವ ಎಲ್ಲ ಅಪಾರ್ಟ್ಮೆಂಟ್ಗಳಿಗೆ ಬ್ಲಿಂಕಿಟ್ ಅನ್ನು ಕಟ್ಟಡಕ್ಕೆ ಪ್ರವೇಶಿಸಲು ಬಿಡುವುದಿಲ್ಲ” ಎಂದಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸರು, “ಅಗತ್ಯ ಕ್ರಮಕ್ಕಾಗಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತಿಳಿಸಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.