- ಚರ್ಚೆಗೆ ಗ್ರಾಸವಾದ ಎಸ್ಸೆಸ್ಸೆಲ್ಸಿ ಜಿಲ್ಲಾವಾರು ಫಲಿತಾಂಶ
- 2020-21ನೇ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆ ಈಗ ದ್ವಿತೀಯ
2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಣೆಯಾಗಿದ್ದು, ಬರಗಾಲ ಪೀಡಿತ ಪ್ರದೇಶವಾದ ಚಿತ್ರದುರ್ಗ ಜಿಲ್ಲೆ ಮೊದಲನೇ ಸ್ಥಾನ ಪಡೆದಿದೆ.
ಚಿತ್ರದುರ್ಗ ಜಿಲ್ಲೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರಲ್ಲಿ ಸಂಪತ್ಭರಿತವಾಗಿದೆ. ಇದರಲ್ಲಿ ಯಾವುದೇ ಬರವಿಲ್ಲ. ಅದಲ್ಲದೇ ಪ್ರಸಕ್ತ ವರ್ಷ ಚುನಾವಣೆ ಕಾಲವಾದ ಕಾರಣ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ಕೋಚಿಂಗ್ ಸೌಲಭ್ಯ, ಶಿಕ್ಷಕರ ಶ್ರಮ ಅದಕ್ಕೆ ವಿದ್ಯಾರ್ಥಿಗಳ ಪರಿಶ್ರಮದಿಂದ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ.
ಪ್ರತಿಬಾರಿಯು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಕೋಮು ಗಲಭೆಗೆ ಹೆಸರಾದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗದಂತಹ ಜಿಲ್ಲೆಗಳೇ ಮೇಲುಗೈ ಸಾಧಿಸುತ್ತಿದ್ದವು. ಈ ಬಾರಿ ಚಿತ್ರದುರ್ಗ ಅಗ್ರಸ್ಥಾನ ಪಡೆದಿರುವುದು ಎಲ್ಲರಿಗೂ ಅಚ್ಚರಿಯ ಸಂಗಂತಿಯಾಗಿದೆ.
ಹೆಚ್ಚಾಗಿ ಪ್ರಥಮ ಸ್ಥಾನ ಪಡೆಯುತ್ತಿದ್ದ ಉಡುಪಿ ಜಿಲ್ಲೆ ಈ ಬಾರಿ 18 ನೇ ಸ್ಥಾನ ಪಡೆದಿದೆ. ಪಿಯುಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ದಕ್ಷಿಣ ಕನ್ನಡ ಜಿಲ್ಲೆ, ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ 19ನೇ ಸ್ಥಾನ ಪಡೆದಿರುವುದು ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯ ಮಧ್ಯೆ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.
ನಾಲ್ಕನೇ ಸ್ಥಾನದಿಂದ ಮೊದಲನೇ ಸ್ಥಾನ
2021-22ನೇ ಸಾಲಿನಲ್ಲಿ ಶೇ 94.31ರಷ್ಟು ಫಲಿತಾಂಶ ಪಡೆದು ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಈ ವರ್ಷ ಶೇ 2.5ರಷ್ಟು ಫಲಿತಾಂಶ ಎರಿಕೆ ಕಂಡಿದ್ದು, ಉತ್ತಮ ಸ್ಥಾನಕ್ಕೆ ಏರಿದೆ. 2019- 20ರಲ್ಲಿ ಶೇ 88.66 ಹಾಗೂ 2020-21ರಲ್ಲಿ ಶೇ 100 ರಷ್ಟು ಫಲಿತಾಂಶ ದಾಖಲಿಸಿತ್ತು.
ಈ ಸುದ್ದಿ ಓದಿದ್ದೀರಾ?: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ: ಅರ್ಜಿ ಸಲ್ಲಿಸಲು ಮೇ 15 ಅಂತಿಮ ದಿನ
ಜಿಲ್ಲಾವಾರು ಫಲಿತಾಂಶ
ಜಿಲ್ಲೆಯಲ್ಲಿ 23,428 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ವಿಷಯವಾರು ಪರಿಣಿತರನ್ನು ಗುರುತಿಸಿ ವಿಶೇಷ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿತ್ತು. ಅಧ್ಯಯನ ಸಾಮಗ್ರಿ, ಪರೀಕ್ಷಾ ಉತ್ತೀರ್ಣಕ್ಕೆ ಅಗತ್ಯ ಸಾಮಗ್ರಿಗಳನ್ನು ಸಿದ್ಧಪಡಿಸಿ ಮಕ್ಕಳಿಗೆ ನೀಡಲಾಗಿತ್ತು. ಪರೀಕ್ಷಾ ಭಯ ನಿವಾರಣೆಗೆ ಮಕ್ಕಳೊಂದಿಗೆ ಸಂವಾದ ನಡೆಸಲಾಗಿತ್ತು. 2020-21ನೇ ಸಾಲಿನಲ್ಲಿ, ನಾಲ್ಕನೇ ಸ್ಥಾನದಲ್ಲಿದ್ದ ಸಕ್ಕರೆ ಜಿಲ್ಲೆ ಮಂಡ್ಯ ಇದೀಗ ಎರಡನೇ ಸ್ಥಾನ ಅಲಂಕರಿಸಿದೆ.
ಹಾಸನ ಜಿಲ್ಲೆ ಒಂಭತ್ತನೇ ಸ್ಥಾನದಲ್ಲಿತ್ತು ಈ ಬಾರಿ ಮೂರನೇ ಸ್ಥಾನಕ್ಕೇರಿದೆ. ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈಗ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಇನ್ನೂ ವಿಜಯನಗರಕ್ಕೆ 2020-21ನೇ ಸಾಲಿನಲ್ಲಿ ಶೇ 86ರಷ್ಟು ಫಲಿತಾಂಶ ಬಂದಿತ್ತು. ಈ ಸಾಲಿಗೆ ಶೇ 91ರಷ್ಟು ಫಲಿತಾಂಶ ಬಂದಿದೆ. ಕಳೆದ ಸಾಲಿಗೆ ಹೋದರೆ ಶೇ 5ರಷ್ಟು ಫಲಿತಾಂಶದಲ್ಲಿ ಏರಿಕೆ ಆಗಿದೆ.