- ಅಂಬೇಡ್ಕರ್ ಪ್ರತಿಮೆಗೆ ಮಾಲೆ ಹಾಕಲು ನಿರಾಕರಣೆ ಆರೋಪ
- ಗಾಂಧಿ ವೃತ್ತದಲ್ಲಿ ಪ್ರತಿಭಟನೆ; ಯತ್ನಳ್ ಭಾವಚಿತ್ರಕ್ಕೆ ಬೆಂಕಿ
ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ ಈಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕೊಪ್ಪಳ ಜಿಲ್ಲೆ ಹನುಮಸಾಗರದದಲ್ಲಿ ಚುನಾವಣಾ ಪ್ರಚಾರದ ವೇಳೆ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ನಿಂದಿಸಿ ಅಗೌವರವ ತೋರಿದ್ದಾರೆ ಎಂದು ಆರೋಪಿಸಿ ಗದಗ ಪಟ್ಟಣದ ಗಾಂಧಿ ವೃತ್ತದಲ್ಲಿ ಭಾನುವಾರ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ, ಅಲ್ಪ ಸಂಖ್ಯಾತರ ಸಂಘಟನೆಗಳು, ಹಿಂದುಳಿದ ಸಂಘಟನೆಗಳು ಸಾತ್ ನೀಡಿ, ಯತ್ನಾಳ್ ಹೇಳಿಕೆಯನ್ನು ಖಂಡಿಸಿದರು. ಇದೇ ಸಂದರ್ಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ ಭಾವಚಿತ್ರ ಸುಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ದಲಿತ ಮುಖಂಡ ಶರೀಫ್ ಬಿಳಿಯಲಿ ಮಾತನಾಡಿ, “ಚುನಾವಣಾ ಪ್ರಚಾರ ಸಭೆಯಲ್ಲಿ ಯತ್ನಾಳ್, ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ನಿರಾಕರಿಸಿ “ಅವಂಗ ಯಾಕ್ ಹಾರ ಹಾಕಬೇಕು?” ಎಂದು ಸಂವಿಧಾನ ಶಿಲ್ಪಿಯ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಂವಿಧಾನ ಒಪ್ಪದ, ಒಡೆದಾಳುವ ನೀತಿಯನ್ನು ಅನುಸರಿಸಿಕೊಂಡು ಬಂದಿರುವ ಬಿಜೆಪಿಯ ಕೋಮುವಾದಿ ಯತ್ನಾಳ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಏಕವಚನದಿಂದ ನಿಂದಿಸಿ, ಅವಮಾನಿಸಿ ಉದ್ದಟತನದ ಮಾತುಗಳನ್ನಾಡಿದ್ದಾರೆ. ಇಂತಹ ಅವಿವೇಕಿತನದ ಹೇಳಿಕೆ ನೀಡಿರುವ ಯತ್ನಾಳನಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬಾರದು. ಕೂಡಲೇ ಯತ್ನಾಳ್ ಅವರನ್ನು ಬಂಧಿಸಬೇಕು” ಎಂದು ಚುನಾವಣಾ ಅಧಿಕಾರಿಗಳನ್ನು ಆಗ್ರಹಿಸಿದರು.
“ಬಿಜೆಪಿ ಮತ್ತು ಅದರ ಆರ್.ಎಸ್.ಎಸ್ ಸ್ವಾತಂತ್ರ್ಯ ಪೂರ್ವದಲ್ಲಿಯೂ ಅಂಬೇಡ್ಕರ್ ಅವರು ಸಂವಿಧಾನ ಬರೆಯುವ ಸಂದರ್ಭದಲ್ಲಿಯೂ ವಿರೋಧ ಮಾಡಿದವರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದಲ್ಲಿ ಇವತ್ತಿಗೂ ಸಂವಿಧಾನ ವಿರೋಧಿಸುತ್ತಲೇ ಬಂದವರು. ಅದಕ್ಕೆ ಉದಾಹರಣೆಯಾಗಿ ಅನಂತಕುಮಾರ ಹೆಗಡೆ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅಂತಹವರು” ಎಂದು ದೂರಿದರು.
ಆರ್.ಎಸ್.ಎಸ್ ಮತ್ತು ಬಿಜೆಪಿ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ವಿರೋದಿಸುತ್ತಲೇ ಬಂದಿದ್ದಾರೆ. ಈ ಸಲ ಜನರು ಎಚ್ಚರವಾಗಿದ್ದಾರೆ, ಪ್ರಜ್ಞೆವಂತರಾಗಿದ್ದಾರೆ. ಎಲ್ಲರೂ ಈ ಚುನಾವಣೆಯಲ್ಲಿ ಮನುವಾದಿ ಸರ್ಕಾರವನ್ನು ತೋಲಗಿಸಿ, ದೇಶವನ್ನು ಕಾಪಾಡುವಂತ, ಸಂವಿಧಾನ ಕಾಪಾಡುವಂತವರಿಗೆ ಮತ ಚಲಾಯಿಸೋಣ ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ ಜಿಲ್ಲೆ | ಬಿಜೆಪಿ ಭದ್ರಕೋಟೆಯನ್ನು ಭೇದಿಸಲಿದ್ದಾರೆಯೇ ಕಾಂಗ್ರೆಸ್ ಕಲಿಗಳು?
ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಬಾಲರಾಜ್ ಅರ್ಬರ್ ಮಾತನಾಡಿ, “ಯತ್ನಾಳ್ ಇಂದು ಶಾಸಕ ಸ್ಥಾನಕ್ಕೆ ಬರಲು ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಕಾರಣ, ಅಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರಿಗೆ ಅವಮಾನಿಸಿದ ಯತ್ನಾಳ್ ಅವರಿಗೆ ಶಿಕ್ಷೆ ಆಗಲೇಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ರಮೇಶ ಬಾಳಮ್ಮನವರ, ಶಿವಾನಂದ, ಆನಂದ ಸಿಂಗಾಡಿ, ಪರಶು ಕಾಳೆ, ಯೂಸೂಪ್, ವಿಜಯ್ ಕಲಮನಿ, ಪೂಜಾ ಸಿಂಧೆ ಹಾಗೂ ದಲಿತ ಸಂಘರ್ಷ ಸಮಿತಿ ಸಂಘಟಕರು, ಅಲ್ಪಸಂಖ್ಯಾತ ಸಂಘಟಕರು ಭಾಗವಹಿಸಿದ್ದರು.