- ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿಯಾಗಿದ್ದರು ಬೆಸ್ತರ್
- ಬಿಜೆಪಿಯಿಂದ ಯೋಗೇಶ್ ಬೆಸ್ತರ್ ಕಣಕ್ಕಿಳಿಯುವ ಸಾಧ್ಯತೆ
ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ ಎಸ್ ಯೋಗೇಶ ಬೆಸ್ತರ್ ಇಂದು (ಏಪ್ರಿಲ್ 5) ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಯಿತೇ ಎನ್ನುವ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹಿನ್ನೆಲೆಯಲ್ಲಿ ಕುತೂಹಲಕಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಪಕ್ಷಾಂತರ ಪರ್ವವೂ ಜೋರಾಗಿದೆ.
ಕಾಂಗ್ರೆಸ್ ನಾಯಕರು ಮತ್ತು ಸ್ಥಳೀಯ ಮುಖಂಡರೊಂದಿಗೆ ಗುರುತಿಸಿಕೊಂಡಿದ್ದ ಯೋಗೇಶ್ ಬೆಸ್ತರ್ ದಿಡೀರನೇ ಬಿಜೆಪಿ ಪಾಳಯ ಸೇರಿದ್ದು, ಕ್ಷೇತ್ರದ ಜನರಲ್ಲಿ ಕುತೂಹಲ ಕೆರಳಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಸಮ್ಮುಖದಲ್ಲಿ, ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಂಡ್ಯದ ಮಾಜಿ ಸಂಸದ ಎಲ್ ಆರ್ ಶಿವರಾಮೇ ಗೌಡ, ಯೋಗೇಶ್ ಬೆಸ್ತರ್, ರಾಮಪ್ಪ, ಮಂಜು ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಸ್ಮಶಾನದಿಂದ ಚುನಾವಣಾ ಪ್ರಚಾರ ಆರಂಭಿಸುತ್ತೇವೆ: ಸತೀಶ್ ಜಾರಕಿಹೊಳಿ
ಕಳೆದ ಅನೇಕ ತಿಂಗಳಿಂದ ಯೋಗೇಶ್ ಬೆಸ್ತರ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸಲು ಯತ್ನಿಸುತ್ತಿದ್ದ ಅವರು ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸಹ ಭೇಟಿಯಾಗಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರ ಭದ್ರಕೋಟೆ ಗುರುಮಠಕಲ್ ಮತಕ್ಷೇತ್ರ ಇದೀಗ ಪಕ್ಷಾಂತರ ಪರ್ವಕ್ಕೆ ಸಾಕ್ಷಿಯಾಗಿದೆ. ಬಿಜೆಪಿಯಿಂದ ಸ್ಪರ್ಧಿಸಿ ಸೋಲನನುಭವಿಸಿದ್ದ ಸಾಯಬಣ್ಣ ಬೋರಬಂಡ ಅವರು ಕಾಂಗ್ರೆಸ್ ಸೇರಿದ್ದರು. ಬೆನ್ನಲ್ಲೆ ಬಿಜೆಪಿ ತೊರೆದ ಬಾಬುರಾವ್ ಚಿಂಚನಸೂರು ಮತ್ತೆ ‘ಕೈ’ ಹಿಡಿದಿದ್ದರು.
ಇದೀಗ ಕಾಂಗ್ರೆಸ್ನ ಪ್ರಬಲ ಟಿಕೆಟ್ ಆಕಾಂಕ್ಷಿ ಯೋಗೇಶ್ ಬೆಸ್ತರ್ ತಮ್ಮ ಪಕ್ಷ ಬದಲಿಸಿದ್ದಾರೆ. ಇದರೊಂದಿಗೆ ಬಿಜೆಪಿಯಿಂದ ಅಖಾಡಕ್ಕೆ ಇಳಿಯಲು ಪ್ರಯತ್ನಿಸುವ ಸಾಧ್ಯತೆಗಳಿವೆ. ಈಗಾಗಲೇ ಲಲಿತಾ ಅನಪುರ ಮತ್ತು ನಾಗರತ್ನ ಕುಪ್ಪಿ ಸೇರಿದಂತೆ ಸ್ಥಳೀಯ ಪ್ರಭಾವಿ ನಾಯಕರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಇದೀಗ ಬೆಸ್ತರ್ ಅವರು ಸಹ ಬಿಜೆಪಿಯ ಟಿಕೆಟ್ಗಾಗಿ ಪೈಪೋಟಿ ನಡೆಸಲಿದ್ದಾರೆ.
ಚಿಂಚನಸೂರ್ಗೆ ಟಿಕೆಟ್ ಫಿಕ್ಸ್?
ಬಾಬುರಾವ್ ಚಿಂಚನಸೂರ ಅವರು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಬೆಸ್ತರ್ ಅವರು ಪಕ್ಷ ತೊರೆದಿರುವುದು ಇಂತಹದೊಂದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಗುರುಮಠಕಲ್ ಕ್ಷೇತ್ರದ ಪ್ರಭಾವಿ ನಾಯಕ ಚಿಂಚನಸೂರು ಅವರಿಗೆ ಟಿಕೆಟ್ ಖಚಿತವಾದ ಸುಳಿವಿನ ಮೇಲೆಯೇ ಯೋಗೇಶ್ ಬೆಸ್ತರ್ ಪಕ್ಷ ತೊರೆದರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಹರಿಹಾಡುತ್ತಿವೆ.