- ಹಾಸನ ಜಿಲ್ಲೆ ಬಿಜೆಪಿ ಪಾಲಿಗೆ ಭದ್ರಕೋಟೆಯಾಗಬೇಕು ಎಂದ ಸಿ.ಟಿ ರವಿ
- ʼಪಕ್ಷದ ಎಲ್ಲ ಮುಖಂಡರ ಅಭಿಪ್ರಾಯ ಪಡೆದು ಏ.17ರಂದು ನಾಮಪತ್ರ ಸಲ್ಲಿಸುತ್ತೇನೆʼ
ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲವರಿಗೆ ನಿರಾಸೆ ಮೂಡಿರಬಹುದು. ಆದರೆ, ವರಿಷ್ಟರು ನೀಡಿದ ಸಂದೇಶವನ್ನು ಪ್ರತಿ ಆಕಾಂಕ್ಷಿಗಳು ಪಾಲಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಹೇಳಿದರು.
ಹಾಸನ ಜಿಲ್ಲೆ ಬೇಲೂರಿನ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಅವರನ್ನು ಭೇಟಿ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದರು. “ಈಗಾಗಲೇ 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎರಡನೇ ಪಟ್ಟಿ ಶೀಘ್ರವೇ ಬಿಡುಗಡೆಯಾಗುತ್ತದೆ. ಹಾಸನ ಜಿಲ್ಲೆ ಬಿಜೆಪಿ ಪಾಲಿಗೆ ಭದ್ರಕೋಟೆಯಾಗಬೇಕು ಎಂಬ ಕಾರಣದಿಂದಲೇ ಆಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅಂತಯೇ, ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಹುಲ್ಲಹಳ್ಳಿ ಸುರೇಶ್ ಹೆಸರು ಅಂತಿಮವಾಗಿದೆ” ಎಂದು ಹೇಳಿದರು.
“ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಳೆದ ಐದು ವರ್ಷದಿಂದ ಇಡೀ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದು, 189 ಅಭ್ಯರ್ಥಿಗಳ ಪಟ್ಟಿಯಲ್ಲಿ ಹುಲ್ಲಹಳ್ಳಿ ಸುರೇಶ್ ಹೆಸರು ಬಂದಿದೆ. ಅವರ ಬೆಂಬಲ ಪಡೆಯುವ ಮೂಲಕ ಬೇಲೂರಿನಲ್ಲಿ ಬಿಜೆಪಿ ಜಯಭೇರಿಗೆ ಹುಲ್ಲಹಳ್ಳಿ ಸುರೇಶ್ ಮುಂದಾಗಬೇಕಿದೆ” ಎಂದು ಹೇಳಿದರು.
“ನಾನೂ ಕೂಡ ನಿಮ್ಮ ಪಕ್ಕದ ಜಿಲ್ಲೆ, ಇದೇ ತಾಲೂಕಿನ ಅಳಿಯ, ನಿಮ್ಮಗಳ ಬೆಂಬಲ ನನ್ನ ಮೇಲೆ ಇರಬೇಕು” ಎಂದು ತಿಳಿಸಿದ್ದು, ಇದೇ ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸುವ ಬಗ್ಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಕೈ ತಪ್ಪಿದ ಬಿಜೆಪಿ ಟಿಕೆಟ್; ಜೆಡಿಎಸ್ನತ್ತ ಸೂರ್ಯಕಾಂತ ನಾಗಮಾರಪಳ್ಳಿ?
ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಮಾತನಾಡಿ, “ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಪಕ್ಷದ ಗೆಲುವು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ನಮ್ಮ ಬಗ್ಗೆ ಇಟ್ಟ ನಂಬಿಕೆಯನ್ನು ಪ್ರಾಮಾಣಿಕವಾಗಿ ಉಳಿಸಿಕೊಳ್ಳಲಾಗುತ್ತದೆ. ನಾನು ಕೂಡ ಪಕ್ಷದ ಎಲ್ಲ ಮುಖಂಡರು, ವಿಶೇಷವಾಗಿ ಆಕಾಂಕ್ಷಿಗಳ ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದು ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸುತ್ತೇನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್, ಜೆ.ಕೆ.ಕುಮಾರ್, ಮಂಜುನಾಥ್, ರೇಣುಕಾ ಕುಮಾರ್, ತೆಂಡೇಕೆರೆ ರಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.