- ಶಿರಾ ಕ್ಷೇತ್ರದ ಬಿಜೆಪಿ ಶಾಸಕನ ನಡೆಗೆ ವ್ಯಾಪಕ ಟೀಕೆ
- ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಚುನಾವಣೆ ಹೊಸ್ತಿಲಲ್ಲಿ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಮತ್ತು ಅಭ್ಯರ್ಥಿ ಡಾ. ಸಿ.ಎಂ ರಾಜೇಶ್ಗೌಡ ಅಧಿಕಾರ ದರ್ಪ ಮೆರೆದಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದ ವೃದ್ಧರೊಬ್ಬರನ್ನು ಅಮಾನುಷವಾಗಿ ಪೊಲೀಸರಿಂದ ಹೊರಗೆ ದಬ್ಬಿಸಿದ್ದಾರೆ.
ರಾಜಕಾರಣಿಗಳಿಗೆ ಚುನಾವಣೆ ಬಂದಾಗ ಮಾತ್ರವೇ ಮತದಾರರು ನೆನಪಾಗುತ್ತಾರೆ. ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆ ಸಂದರ್ಭದಲ್ಲಿ ಮತಯಾಚನೆಗೆ ಬರುವ ಅಪರೂಪದ ಅತಿಥಿಗಳಿಗೆ ಮತದಾರರು ಹಲವೆಡೆ ಮಂಗಳಾರತಿ ಮಾಡುವುದು ಸಾಮಾನ್ಯ ಸಂಗತಿಯಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರ ಮನವೊಲಿಸಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಇಲ್ಲಿ ಜನಪ್ರತಿನಿಧಿ ಬಳಿ ಸಮಸ್ಯೆ ಹೇಳಿ ಕೊಳ್ಳಲು ಬಂದ ವೃದ್ಧನ ಮೇಲೆ ದರ್ಪ ತೋರಿಸುವುದು ಎಷ್ಟು ಸರಿ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
ಘಟನೆಯ ವಿಡಿಯೋವನ್ನು ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಅಹವಾಲು ಹೇಳಲು ಬಂದ ಹಿರಿಯ ವೃದ್ದರೂಬ್ಬರ ಬಳಿ ದರ್ಪ ಮತ್ತು ಅಹಂಕಾರದಿಂದ ಮಾತನಾಡಿದ್ದಲ್ಲದೆ, ಪೋಲಿಸ್ ಕಾನ್ಸ್ಟೆಬಲ್ಗಳ ಮುಖೇನ ಹಿರಿಯ ನಾಗರಿಕರನ್ನು ಹೊರ ದಬ್ಬಿಸಿದ ಶಿರಾ ಕ್ಷೇತ್ರದ ಶಾಸಕ ರಾಜೇಶ್ ಗೌಡರು. ಇಂತಹ ಶಾಸಕ ಬೇಕಾ? ತಪ್ಪು ಏನೇ ಇರಲಿ ಕೆಲಸ ಆಗಲಿ ಬಿಡಲಿ ಸೌಜನ್ಯದಿಂದ ಆದರೂ ನಡೆದುಕೊಳ್ಳಬೇಕಲ್ಲವೇ” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಮಾಜಿ ಡಿಸಿಎಂ ಜಿ ಪರಮೇಶ್ವರ್ ಮೇಲೆ ಕಲ್ಲು ತೂರಾಟ; ತಲೆಗೆ ಗಾಯ