- ಕಾಂಗ್ರೆಸ್ ಲಿಂಗಾಯತ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಪ್ರಯೋಗಿಸಲು ಮುಂದಾದ ಬಿಜೆಪಿ
- ಎಸ್ ಆರ್ ಪಾಟೀಲ್ ಅವರನ್ನು ಬಿಜೆಪಿಗೆ ಸೆಳೆಯಲು ಸಿಎಂ ಬೊಮ್ಮಾಯಿ ತಂತ್ರ
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಬಿಜೆಪಿ ಕೂಡ ಕಾಂಗ್ರೆಸ್ ಒಳಗಿನ ಲಿಂಗಾಯತ ನಾಯಕರಿಗೆ ಗಾಳ ಹಾಕಿದೆ.
ಟಿಕೆಟ್ ವಂಚಿತರನ್ನು ತಮ್ಮತ್ತ ಸೆಳೆದುಕೊಳ್ಳಲು ಎಲ್ಲ ಪಕ್ಷದ ನಾಯಕರು ಒಳಗೊಳಗೆ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ನಲ್ಲಿ ವಿಧಾನ ಪರಿಷತ್ನ ಮಾಜಿ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದೆ. ಬಿಜೆಪಿ ಈ ಲಿಂಗಾಯತ ನಾಯಕನನ್ನು ಸೆಳೆಯಲು ಮುಂದಾಗಿದೆ.
ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ಉತ್ತರ ಕರ್ನಾಟಕದ ಹಿರಿಯ ಲಿಂಗಾಯತ ನಾಯಕ ಎಸ್ ಆರ್ ಪಾಟೀಲ್ ಅವರನ್ನು ಸಚಿವರೊಬ್ಬರ ಮೂಲಕ ಸೆಳೆಯಲು ಸಿಎಂ ಬಸವರಾಜ ಬೊಮ್ಮಾಯಿ ತಂತ್ರ ರೂಪಿಸಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಧಾನ ಪರಿಷತ್ಗೆ ಪುನರಾಯ್ಕೆ ಮಾಡದಿದ್ದಕ್ಕೆ ಮೊದಲೇ ಕಾಂಗ್ರೆಸ್ ನಾಯಕರ ವಿರುದ್ಧ ಎಸ್ ಆರ್ ಪಾಟೀಲ್ ಮುನಿಸಿಕೊಂಡಿದ್ದರು. ಅಲ್ಲದೇ ಪಕ್ಷದ ಕಾರ್ಯಚಟುವಟಿಕೆಗಳಿಂದ ಪಾಲ್ಗೊಳ್ಳದೇ ದೂರ ಉಳಿದುಕೊಂಡಿದ್ದರು.
ನಂತರದಲ್ಲಿ ಮುನಿಸು ಮರೆತ ಎಸ್ ಆರ್ ಪಾಟೀಲ್ ಅವರು ಬೀಳಗಿ ಅಥವಾ ದೇವರ ಹಿಪ್ಪರಗಿ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆದ್ರೆ, ಕಾಂಗ್ರೆಸ್ ಈಗ ಮಣೆ ಹಾಕಿಲ್ಲ. ಇದರಿಂದ ಎಸ್ ಆರ್ ಪಾಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತಷ್ಟು ಆಕ್ರೋಶಗೊಂಡಿದ್ದಾರೆ.
ಸೋಮವಾರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದ್ದಾರೆ. ಈ ಭೇಟಿ ಯಾವುದು ಫಲ ನೀಡದ ಹಿನ್ನೆಲೆಯಲ್ಲಿ ಇದೀಗ ಪಕ್ಷ ತೊರೆಯಲು ಪಾಟೀಲರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಸಚಿವರೊಬ್ಬರ ಮೂಲಕ ಎಸ್ ಆರ್ ಪಾಟೀಲ್ ಅವರನ್ನು ಬಿಜೆಪಿಗೆ ಸೆಳೆಯಲು ಬೊಮ್ಮಾಯಿ ಮುಂದಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಲಿಂಗಾಯತ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.