- ವಜಾಗೊಳಿಸದಿದ್ದಲ್ಲಿ ಹೈಕೋರ್ಟ್ನಲ್ಲಿ ಕಾನೂನು ಹೋರಾಟ
- ಶಿವರಾಜ ಪಾಟೀಲ ಅವರಿಂದ ಮತದಾರರಿಗೆ ಸುಳ್ಳು ಮಾಹಿತಿ ಆರೋಪ
ಮತದಾರರಿಗೆ ಸುಳ್ಳು ಮಾಹಿತಿ ನೀಡಿ ಅಧಿಕಾರ ದುರುಪಯೋಗ ಪಡಿಸಿಕೊಂಡ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಶಿವರಾಜ ಪಾಟೀಲ ಅವರನ್ನು ಚುನಾವಣಾ ಕಣದಿಂದ ಕೂಡಲೇ ವಜಾಗೊಳಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಡಾ. ಬಸವರಾಜ ಕಳಸ ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಪ್ರಚಾರ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ಡಾ. ಶಿವರಾಜ ಪಾಟೀಲರು ಮತದಾರರ ಬಳಿ ಹೋಗಿ ತಾವು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದ್ದೇನೆ ಮತ್ತು ನಗರದಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯಡಿ 33,198 ಮನೆಗಳಿಗೆ ನಳ ಸಂಪರ್ಕ ನೀಡಿ ನೀರು ಸರಬರಾಜು ಮಾಡಿದ್ದೇನೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯ ನಗರ ಅಧ್ಯಕ್ಷ ಬಿ ಗೋವಿಂದ ಅವರು ಡಾ. ಶಿವರಾಜ ಪಾಟೀಲ ಪರ ಕರ ಪತ್ರ ಹಂಚಿದ್ದು ಇದರಲ್ಲಿಯೂ ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಮತ್ತು 24/7 ಯೋಜನೆಯಡಿ 33,198 ಮನೆಗಳಿಗೆ ನೀರಿನ ಸೌಲಭ್ಯ ನೀಡಲಾಗಿದೆ ಎಂದು ಮುದ್ರಿಸಿದ ಕರಪತ್ರಗಳನ್ನು ನಗರದಲ್ಲಿ ಮನೆಮನೆಗೆ ತೆರಳಿ ಕಾರ್ಯಕರ್ತರು ಹಂಚಿದ್ದಾರೆ ಎಂದು ಹೇಳಿದರು.
ನಗರಸಭೆ ಮೇಲ್ದರ್ಜೆಗೆ ಏರಿಸಿದ ಬಗ್ಗೆ ಯಾವುದೇ ಗೆಝೆಟ್ ನೋಟಿಫಿಕೇಶನ್ ಇಲ್ಲದೇ ಸುಳ್ಳು ಮಾಹಿತಿ ನೀಡಿ ಮತದಾರರಿಗೆ ಮೋಸ ಮಾಡಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯ್ದೆಯಡಿ ಅಪರಾಧವಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡನೆ ವೇಳೆ ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡಲು ಪ್ರಸ್ತಾವನೆ ಬಂದಿದೆ ಅದನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ ಹೊರತು ಘೋಷಣೆ ಮಾಡಿಲ್ಲ. ಆದರೆ, ಶಾಸಕ ಡಾ. ಶಿವರಾಜ ಪಾಟೀಲ್ ಅಧಿಕೃತವಾಗಿ ಕರಪತ್ರವನ್ನು ಮುದ್ರಿಸಿ ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ದಿಕ್ಕು ತಪ್ಪಿಸಿದ್ದಾರೆ ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಮಲ್ಲಿಕಾರ್ಜುನ ಖರ್ಗೆಯ ಸಾವು ಬಯಸಿದ ಬಿಜೆಪಿ ನಾಯಕ; ಮೋದಿ ಕ್ಷಮೆಗೆ ಕಾಂಗ್ರೆಸ್ ಆಗ್ರಹ
ಈ ಬಗ್ಗೆ ವಿಡಿಯೋ, ಕರ ಪತ್ರ ಹಾಗೂ ಇತರೆ ದಾಖಲೆಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗೆ ದೂರು ನೀಡಲಾಗಿದ್ದು, ಚುನಾವಣಾ ಸ್ಪರ್ಧಾಕಣದಿಂದ ವಜಾಗೊಳಿಸಬೇಕು. ಅಧಿಕಾರಿಗಳು ನಿರ್ಲಕ್ಷಿಸಿದ್ದಲ್ಲಿ ಹೈಕೋರ್ಟ್ ಮೊರೆ ಹೋಗಿ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎನ್ ಮಹಾವೀರ, ಜಾನ್ ವೆಸ್ಲಿ, ಪ್ರಭುನಾಯಕ, ಬಸವರಾಜ, ತುಂಗಾ ಹಿರೇಮಠ, ವಿನಯಕುಮಾರ ಚಿತ್ರಗಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.