- ‘ಬಿ ಎಲ್ ಸಂತೋಷ್ ಚುನಾವಣೆಗೆ ಸ್ಪರ್ಧಿಸಿ ಸಾಮರ್ಥ್ಯ ತೋರಲಿ’
- ‘ಬಿಜೆಪಿಯೊಳಗಿನ ಕಿತ್ತಾಟ ಅಶೋಕರನ್ನು ಬಲಿಪಶು ಮಾಡಲಿದೆʼ
ಕನಕಪುರ ಮತ್ತು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿ ಎಲ್ ಸಂತೋಷ್ ಹಾಗೂ ಪ್ರಲ್ಹಾದ್ ಜೋಶಿ ಅವರನ್ನು ಸ್ಪರ್ಧೆಗೆ ಆಹ್ವಾನಿಸುತ್ತೇವೆ. ಅವರು ಪಂಥಾಹ್ವಾನ ಸ್ವೀಕರಿಸುವರೇ? ಎಂದು ಕಾಂಗ್ರೆಸ್ ಸವಾಲು ಹಾಕಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ನಾಗಪುರದ ವಂಶದವರು ಇತರರನ್ನು ಹೊಂಡಕ್ಕೆ ತಳ್ಳಿ ಆಳ ನೋಡುವ ಬದಲು ತಾವೇ ಮುಂದೆ ನಿಂತು ಸಾಮರ್ಥ್ಯ ತೋರಲಿ. ಬಿ ಎಲ್ ಸಂತೋಷ್ ತೆರೆಮರೆಯಿಂದ ಹೊರಬಂದು ಚುನಾವಣೆಗೆ ಸ್ಪರ್ಧಿಸಿ ಸಾಮರ್ಥ್ಯ ನಿರೂಪಿಸಲಿ” ಪಂಥಾಹ್ವಾನ ನೀಡಿದೆ.
“ಆರ್. ಅಶೋಕ್ ಅವರಿಗೆ ಎರಡು ಟಿಕೆಟ್, ಎನ್.ಆರ್ ರಮೇಶ್ಗೆ ಒಂದೂ ಟಿಕೆಟ್ ಇಲ್ಲ. ಬಿಜೆಪಿಯ ಪ್ರಯೋಗವು ಆರ್. ಅಶೋಕ್ರವರಿಗೆ “ಖೆಡ್ಡಾ”ವಾಗಿ ಪರಿಣಮಿಸಲಿದೆ. ಪದ್ಮನಾಭನಗರದಲ್ಲಿ ಬಂಡಾಯವೆದ್ದ ಎನ್.ಆರ್ ರಮೇಶ್ ಬಿಜೆಪಿಗೇ ಮುಳುವಾಗುವುದು ನಿಶ್ಚಿತ. ಬಿಜೆಪಿಯೊಳಗಿನ ಕಿತ್ತಾಟ ಅಶೋಕರನ್ನು ಬಲಿಪಶು ಮಾಡಲಿದೆ” ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ನಡೆ ಬೇಸರ ತರಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್ ಶಂಕರ್
“ಬಿಜೆಪಿ ಈಗ ಏಕಕಾಲಕ್ಕೆ ಎಲ್ಲವನ್ನೂ ಎದುರಿಸುತ್ತಿದೆ. ಕಣ್ಣೀರು ಪರ್ವ, ಬಂಡಾಯ ಪರ್ವ, ನಿವೃತ್ತಿ ಪರ್ವ, ಆಕ್ರೋಶ ಪರ್ವ, ರಾಜೀನಾಮೆ ಪರ್ವ! ಇಷ್ಟು ದಿನ ಒಳಗೊಳಗೇ ಕುದಿಯುತ್ತಿದ್ದ ಬಿಜೆಪಿಯೊಳಗಿನ ಕಿತ್ತಾಟ ಈ ಚುನಾವಣೆಯಲ್ಲಿ ಜ್ವಾಲಾಮುಖಿಯಾಗಿ ಸ್ಪೋಟಿಸುವುದು ನಿಶ್ಚಿತ. “ನಂಬಿಸಿ ಕತ್ತು ಕುಯ್ಯುವುದು” ಎಂಬ ಮಾತಿಗೆ ಬಿಜೆಪಿಯೇ ಬ್ರಾಂಡ್ ಅಂಬಾಸಿಡರ್” ಎಂದು ಕುಟುಕಿದೆ.
“ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದಲ್ಲೇ ಗಡಿಪಾರು ಆಗಿದ್ದ, ಅನ್ನಭಾಗ್ಯದ ಅಕ್ಕಿ ಕಳ್ಳಸಾಗಣೆಯ ಆರೋಪಿ ರೌಡಿ ಶೀಟರ್ಗೆ ಟಿಕೆಟ್ ಕೊಡುವ ಮೂಲಕ ಬಿಜೆಪಿ ರೌಡಿ ಮೋರ್ಚಾಕ್ಕೂ ಮನ್ನಣೆ ನೀಡಿದೆ. ಬಿಜೆಪಿಯ ಟಿಕೆಟ್ಗೆ “ಗಡಿಪಾರು” ಆಗಿರುವುದೇ ಬಹುಮುಖ್ಯ ಮಾನದಂಡ ಎಂಬುದನ್ನು ದಿಲ್ಲಿಯಿಂದ ಇಲ್ಲಿಯವರೆಗೆ ನಿರೂಪಿಸಿದೆ” ಎಂದು ಜರಿದಿದೆ.
“ಮಾಜಿ ಪೊಲೀಸ್ ಕಮಿಷನರ್ ಒಬ್ಬರು ಮೋಸ್ಟ್ ವಾಂಟೆಡ್ ರೌಡಿ ಶೀಟರ್ ಒಬ್ಬನ ಮುಂದೆ ನಿಂತು ಕೈಮುಗಿದು ಬೆಂಬಲ ಕೋರುವುದು ಈ ವ್ಯವಸ್ಥೆಯ ದುರಂತ. ಇದು ಬಿಜೆಪಿ ಮಹಿಮೆ. ಈ ಚುನಾವಣೆಯಲ್ಲಿ ಬಿಜೆಪಿ ರೌಡಿ ಮೋರ್ಚಾ ಪ್ರಬಲವಾಗಿ ಕೆಲಸ ಮಾಡುತ್ತಿದೆ ಎಂದರೆ ಮುಂದೆ ಬಿಜೆಪಿ ಕ್ರಿಮಿನಲ್ಗಳ ಸಾಮ್ರಾಜ್ಯ ಸ್ಥಾಪಿಸುತ್ತದೆ ಎಂದೇ ಅರ್ಥ. ಮತದಾರರು ಎಚ್ಚರವಾಗಬೇಕು” ಎಂದು ಹೇಳಿದೆ.