ಶನಿವಾರ ಬೆಳಿಗ್ಗೆ ಮತ ಎಣಿಕೆ ಆರಂಭವಾಗಿದೆ. ಎಲ್ಲ ಪಕ್ಷಗಳ ನಾಯಕರು ತಾವೇ ಗೆಲ್ಲುತ್ತೇವೆಂಬ ವಿಶ್ವಾಸದಲ್ಲಿ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಅಂತೆಯೇ ತಮ್ಮ ನಾಯಕರೇ ಗೆಲ್ಲುತ್ತಾರೆಂದು ಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರು ಬೆಟ್ಟಿಂಗ್ ದಂಧೆಗೆ ಇಳಿದಿದ್ದಾರೆ. ಹಲವೆಡೆ ನಗದು, ಆಭರಣಗಳು, ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು, ಜಮೀನು ಹಾಗೂ ಸಾಕುಪ್ರಾಣಿಗಳನ್ನು ಪಣಕ್ಕಿಟ್ಟಿರುವುದು ವರದಿಯಾಗಿದೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ಸಚಿವ ವಿ ಸೋಮಣ್ಣ ಸ್ಪರ್ಧಿಸುತ್ತಿರುವ ವರುಣಾದಲ್ಲಿ ಬೆಟ್ಟಿಂಗ್ ಭರಾಟೆ ಮುನ್ನೆಲೆಯಲ್ಲಿದೆ. ವ್ಯಕ್ತಿಯೊಬ್ಬ ಸೋಮಣ್ಣ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆಂದು ತನ್ನ 3,395 ಚದರ ಅಡಿ ಸೈಟ್ಅನ್ನು ಪಣಕ್ಕಿಟ್ಟು, ಬೆಟ್ಟಿಂಗ್ಗೆ ಆಹ್ವಾನಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇನ್ನೊಂದೆಡೆ, ಎಚ್ಡಿ ಕೋಟೆ ಭಾಗದಲ್ಲಿ ಮೂವರು ಸಹಿ ಹಾಕಿರುವ ‘ಬೆಟ್ಟಿಂಗ್ ಒಪ್ಪಂದ’ ಎಂಬ ಶೀರ್ಷಿಕೆಯ ಬಾಂಡ್ ಪೇಪರ್ ಫೋಟೋ ಕೂಡ ವೈರಲ್ ಅಗಿದೆ. ಎಸ್ಟಿ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಯಪ್ರಕಾಶ ಚಿಕ್ಕಣ್ಣ ಅವರ ಪರವಾಗಿ ಇಬ್ಬರು ವ್ಯಕ್ತಿಗಳು 5 ಲಕ್ಷ ರೂ. ಬೆಟ್ಟಿಂಗ್ ಕಟ್ಟಿದ್ದರೆ, ಮತ್ತೊಬ್ಬರು ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಅನಿಲ್ ಚಿಕ್ಕಮಾದು ಗೆಲ್ಲುತ್ತಾರೆಂದು ಬೆಟ್ ಮಾಡಿದ್ದಾರೆ.
ಪಿರಿಯಾಪಟ್ಟಣದಲ್ಲಿ ಐದು ಬಾರಿ ಮಾಜಿ ಶಾಸಕರಾಗಿರುವ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಪರವಾಗಿ ರೈತರೊಬ್ಬರು ತಮ್ಮ 1.37 ಎಕರೆ (ಸುಮಾರು 2 ಕೋಟಿ ರೂ. ಮೌಲ್ಯ) ಪಣಕ್ಕಿಡುವುದಾಗಿ ಹೇಳಿಕೊಂಡಿದ್ದರು.
ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಗೆಲ್ಲುತ್ತಾರೆಂದು ತಾರಿಹಾಳದ ರೈತ ಚಂದ್ರಪ್ಪ ಟ್ರ್ಯಾಕ್ಟರ್ ಪಣಕ್ಕಿಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚುನಾವಣೆ ಬೆಟ್ಟಿಂಗ್ | 1.37 ಎಕರೆ ಜಮೀನು ಪಣಕ್ಕಿಟ್ಟ ಕಾಂಗ್ರೆಸ್ ಮುಖಂಡ
“ಕಾಂಗ್ರೆಸ್ 112-130 ಸ್ಥಾನಗಳನ್ನು ಪಡೆದರೆ ಬೆಟ್ ಮಾಡಿದ ಹಣಕ್ಕೆ ದುಪ್ಪಟ್ಟು ಹಣ ಕೊಡುತ್ತೇನೆ” ಎಂದು ಬುಕ್ಕಿಯೊಬ್ಬ ಹೇಳಿದ್ದರೆ, “ಬಿಜೆಪಿ 100 ಸ್ಥಾನಗಳನ್ನು ಪಡೆದರೆ, ನೀವು 1,000 ರೂ.ಗೆ 4,000 ರೂ. ನೀಡುತ್ತೇನೆ” ಎಂದು ಮತ್ತೊಬ್ಬ ಬುಕ್ಕಿ ಹೇಳಿದ್ದಾರೆ.