- 40 ವರ್ಷಗಳಿಂದ ಶಾಸಕರಾಗಿರುವ ಅಂಗಾರ ವಿರುದ್ಧ ಆಕ್ರೋಶ
- ಶಿಥಿಲಾವಸ್ಥೆಗೆ ತಲುಪಿ, ಬೀಳುವ ಹಂತದಲ್ಲಿರುವ ತೂಗು ಸೇತುವೆ
ಕಾಡಿನ ಮಧ್ಯ ಭಾಗದಲ್ಲಿರುವ ತಮ್ಮ ಗ್ರಾಮಕ್ಕೆ ಶಾಶ್ವತ ಸೇತುವೆ ನಿರ್ಮಿಸಿಕೊಡಬೇಕು ಎಂದು ಹಲವು ದಶಕಗಳಿಂದ ಮನವಿ ಮಾಡುತ್ತಿದ್ದರೂ ಅದನ್ನು ಕಾರ್ಯರೂಪಕ್ಕೆ ತರದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂತ್ರಸ್ಥರು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬ್ಯಾನರ್ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅರಮನೆಯ ಎಂಬಲ್ಲಿ ಸುಳ್ಯ ಕಡೆ ಹರಿದು ಬರುವ ಹೊಳೆಗೆ ಶಾಶ್ವತ ಸೇತುವೆ ನಿರ್ಮಿಸಿಕೊಡಬೇಕು ಎಂದು ಇಲ್ಲಿನ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸ್ಥಳೀಯ ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದರು.
ಅಂಬೇಡ್ಕರ್ ರಕ್ಷಣಾ ಸಮಿತಿಯ ಅಧ್ಯಕ್ಷ ಸುಂದರ ಪಾಟಾಜೆ ಮಾತನಾಡಿ, “ಇಲ್ಲಿನ ದಾರಿಯನ್ನು ಅವಲಂಭಿಸಿಕೊಂಡು 40ಕ್ಕೂ ಹೆಚ್ಚು ದಲಿತ ಕುಟುಂಬಗಳಿದ್ದು, ಇವರ ಸಮಸ್ಯೆ ಪರಿಹರಿಸಲು ಇದುವರೆಗೂ ಯಾವುದೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿಲ್ಲ. ಈ ಭಾಗದ ಗರ್ಭಿಣಿಯರು ಆಸ್ಪತ್ರೆಗೆ ಹೋಗಲು, ಮಹಿಳೆಯರು ಅಂಗಡಿಗೆ ಹೋಗಲು, ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪರದಾಡುವಂತಾಗಿದೆ” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಮ್ಮ ಸಮಸ್ಯೆ ಬಗೆಹರಿಸುವಂತೆ ಅಂಬೇಡ್ಕರ್ ರಕ್ಷಣಾ ಸಮಿತಿ ನೇತೃತ್ವದಲ್ಲಿ ಇಲ್ಲಿನ ನಿವಾಸಿಗಳು ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಸಂಸದರಿಗೆ ಹಾಗೂ 40 ವರ್ಷಗಳಿಂದ ಶಾಸಕರಾಗಿರುವ ಹಾಲಿ ಸಚಿವರಾ ಎಸ್ ಅಂಗಾರ ಅವರಿಗೆ ತಮ್ಮ ಸಮಸ್ಯೆ ಮನವರಿಕೆ ಮಾಡಿಕೊಟ್ಟರು ಸ್ಪಂದಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? : ಗದಗ | ವಿದ್ಯಾದಾನ ಶಿಕ್ಷಣ ಸಮಿತಿ ಮೈದಾನದ ಸಮಸ್ಯೆ ಬಗೆಹರಿಸುವಂತೆ ಮನವಿ
ಅರಂತೋಡು ಗ್ರಾಮ ಪಂಚಾಯಿತಿ ವತಿಯಿಂದ ತಾತ್ಕಾಲಿಕವಾಗಿ ಸಂಚಾರಿಸಲು ತೂಗು ಸೇತುವೆ ನಿರ್ಮಿಸಿಕೊಡಲಾಗಿದೆ. ಆದರೆ, ಈ ತೂಗು ಸೇತುವೆಯು ಸಾಮಾನ್ಯ ಸೇತುವೆಯಾಗಿದ್ದು, ಎರಡು ಕಡೆಗಳಲ್ಲಿ ಪಿಲ್ಲರ್ಗಳಿಲ್ಲದೇ ಮರಗಳಿಗೆ ನೇತು ಹಾಕಲಾಗಿದೆ. ಈ ತಾತ್ಕಾಲಿಕ ತೂಗು ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಈ ಸೇತುವೆ ಮೇಲೆ ಹೊಳೆ ದಾಟುವುದು ಅಪಾಯಕಾರಿಯಾಗಿದೆ. ಇದರಿಂದ ಈ ಭಾಗದ ಜನರು ನಿತ್ಯ ಸಮಸ್ಯೆ ಸಮಸ್ಯೆ ಅನುಭವಿಸುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದ ಬಳಿಕ ಗ್ರಾಮಗಳ ಸಮಸ್ಯೆಗಳತ್ತ ಗಮನಹರಿಸದಿರುವುದರಿಂದ ಇಲ್ಲಿನ ನಿವಾಸಿಗಳು ಚುನಾವಣೆ ಬಹಿಷ್ಕರಿಸುವುದಾಗಿ ತೀರ್ಮಾನಿಸಿ, ಗ್ರಾಮದ ಹಲವೆಡೆ ಬ್ಯಾನರ್ ಅಳವಡಿಸಿ, ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.