- ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
- ಖರ್ಗೆ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿರುವ ಆರೋಪ
ಖರ್ಗೆ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿರುವ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡನನ್ನು ಕೂಡಲೇ ಬಂಧಿಸಬೇಕು ಮತ್ತು ಚುನಾವಣೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ಮತ್ತು ದಲಿತ ಸಂಘಟನೆಗಳ ಮುಖಂಡರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಖರ್ಗೆ ಕುಟುಂಬಕ್ಕೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಜೀವ ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆಗಿದ್ದು. ಆಡಿಯೋ ದಲ್ಲಿ ಮಣಿಕಂಠ ರಾಠೋಡ ಬಿಜೆಪಿ ಕಾರ್ಯಕರ್ತ ರವಿ ಜೊತೆಗೆ ಮಾತನಾಡುವಾಗ ‘ಖರ್ಗೆ ಹೆಂಡತಿ ಮಕ್ಕಳನ್ನು ಸಾಫ್ ಮಾಡ್ತೀನಿ’ ಎಂದು ಹೇಳಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮುಖಂಡ ಸುರೇಶ್ ಹಾದಿಮನಿ ಮಾತನಾಡಿ, ”ಇಡೀ ದೇಶ ಮತ್ತು ರಾಜ್ಯದ ಶಾಂತಿ ನಾಶ ಮಾಡಿದ ಬಿಜೆಪಿಗೆ ಜನರ ಮತ ಕೇಳುವ ನೈತಿಕತೆ ಇಲ್ಲ. ಬಿಜೆಪಿಗೆ ಯಾವ ಒಳ್ಳೆಯ ಅಭ್ಯರ್ಥಿ ಸಿಗದೇ ಕಾರಣ ಒಬ್ಬ ರೌಡಿಶೀಟರ್ಗೆ ಟೀಕೆಟ್ ನೀಡಿದೆ. ಇದರಿಂದ ಬಿಜೆಪಿಗೆ ನಾಚಿಕೆ ಆಗುವುದಿಲ್ಲವೆ?” ಎಂದು ಟೀಕಿಸಿದರು.
“ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಜನರಿಗೆ ಬರಿ ಸುಳ್ಳನೇ ಹೇಳಿಕೊಂಡು ಬರುತ್ತಿದೆ. ಬದಲಾವಣೆ ಮಾಡುತ್ತೇವೆ, ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ, ಪೆಟ್ರೊಲ್, ಡಿಸೇಲ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಸುಳ್ಳು ಹೇಳಿ ನಂಬಿಸಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಕರ್ನಾಟಕದ ಜನ ನಿರ್ಧಾರ ಮಾಡಿದ್ದಾರೆ. ಬಿಜೆಪಿ ಯಾವುದೇ ಕುತಂತ್ರ ಮಾಡಿದರೂ ಈ ಬಾರಿ ರಾಜ್ಯದಿಂದ ಕಿತೋಗೆಯುವುವ ಕೆಲಸ ಮಾಡುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಣಿಕಂಠ ರಾಠೋಡ ವಿರುದ್ಧ ನಾಳೆ ‘ಡಿಜಿ’ಗೆ ದೂರು; ಪ್ರಿಯಾಂಕ್ ಖರ್ಗೆ
“ಚಿತ್ತಾಪುರ ಅಭಿವೃದ್ಧಿಯ ಹರಿಕಾರ, ಕರ್ನಾಟಕದ ಅಭಿವೃದ್ಧಿ ಬಗ್ಗೆ ಒಳ್ಳೆಯ ಕನಸು ಕಂಡಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಯಾವ ವಿಷಯದಲ್ಲೂ ಮಣಿಕಂಠ ರಾಠೋಡ ಸರಿಸಮನಲ್ಲ. ವಯಸ್ಸು ಇನ್ನೂ 26 ಆದರೆ, ಅತನ ಮೇಲೆ ಇರುವ ಕೇಸು 40. ನೀನು ಯಾವ ರೀತಿ ಸಮಾಜ ಸೇವೆ ಮಾಡ್ತಿಯಾ?” ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಸುರೇಶ ಹಾದಿಮನಿ, ಅಶ್ವಿನಿ ಮದನಕರ್, ಕೆ ನೀಲಾ, ಮೀನಾಕ್ಷಿ ಬಾಳಿ, ಹಣಮಂತ ಯಲಸಂಗಿ ಹಾಗೂ ಪ್ರಗತಿಪರ ಸಂಘಟನೆ ಮುಖಂಡರು, ದಲಿತ ಮುಖಂಡರು ಭಾಗವಹಿಸಿದ್ದರು.