- ಮಂಜನಾಥನ ದರ್ಶನಕ್ಕೆ ಬಂದಿದ್ದ ಡಿಕೆಶಿ ಕುಟುಂಬ
- ಹೆಲಿಕಾಪ್ಟರ್ ಪರಿಶೀಲಿಸಿದ ಚುನಾವಣಾಧಿಕಾರಿಗಳು
ಕರಾವಳಿ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಿದ್ದರಾಗುತ್ತಿದ್ದಾರೆ.
ಈ ಕಾರ್ಯಕ್ರಮ ಆರಂಭಕ್ಕೂ ಮುನ್ನ ಶಿವಕುಮಾರ್ ಕುಟುಂಬ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿ ದರ್ಶನ ಪಡೆದುಕೊಂಡಿತು.
ಡಿಕೆಶಿ ಕುಟುಂಬ ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭದಲ್ಲಿ ಚುನಾವಣಾಧಿಕಾರಿ ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಕರೆತಂದಿದ್ದ ಹೆಲಿಕಾಪ್ಟರ್ ಪೈಲೆಟ್ ನಡುವೆ ಮಾತಿನ ಚಕಮಕಿಯಾಗಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇಂತಹ ಸನ್ನಿವೇಶ ಸೃಷ್ಟಿಗೆ ಕಾರಣವಾಗಿದ್ದು ಡಿಕೆ ಶಿವಕುಮಾರ್ ಆಗಮಿಸಿದ್ದ ಚಾಪರ್ ಪರಿಶೀಲನೆಗೆ ಚುನಾವಣಾಧಿಕಾರಿಗಳು ಮುಂದಾಗಿದ್ದು.
ಧರ್ಮಸ್ಥಳಕ್ಕೆ ಶಿವಕುಮಾರ್ ಚಾಪರ್ ನಲ್ಲಿ ಬಂದಿಳಿಯವ ಅಧಿಕೃತ ಮಾಹಿತಿ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ಗೆ ಬಂದಿಳಿದ ಚುನಾವಣಾಧಿಕಾರಿಗಳು ನೀತಿ ಸಂಹಿತೆಯಂತೆ ಚಾಪರ್ ಪರಿಶೀಲನೆಗೆ ಮುಂದಾದರು.
ಆದರೆ ಇದು ಖಾಸಗಿ ಹೆಲಿಕಾಪ್ಟರ್, ಇದನ್ನು ತಪಾಸಣೆ ಮಾಡಲು ಅವಕಾಶವಿಲ್ಲ ಎಂದು ಪೈಲೆಟ್ ರಾಮ್ದಾಸ್ ಹೇಳಿದ್ದಾರೆ. ಈ ವೇಳೆ ಚುನಾವಣಾ ಅಧಿಕಾರಿ ಹಾಗೂ ಪೈಲೆಟ್ ನಡುವೆ ಮಾತಿನ ಚಕಮಕಿ ನಡೆದಿದೆ.
ಇಷ್ಟಾದರೂ ತಮ್ಮ ಕರ್ತವ್ಯ ನಿಷ್ಠೆ ಪ್ರದರ್ಶಿಸಿದ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್ ಜೊತೆಗೆ ಶಿವಕುಮಾರ್ ಕುಟುಂಬ ತೆರಳುತ್ತಿದ್ದ ಕಾರನ್ನೂ ತಪಾಸಣೆ ಮಾಡಿ ನಿಯಮ ಉಲ್ಲಂಘನೆಯಾಗದಿದ್ದನ್ನು ಖಾತರಿಪಡಿಸಿಕೊಂಡು ತೆರಳಿದ್ದಾರೆ.
ಅಂದಹಾಗೆ ಮಂಜುನಾಥನ ದರ್ಶನಕ್ಕಾಗಿ ಶಿವಕುಮಾರ್ ಪತ್ನಿ ಉಷಾ, ಮಗಳು ಮತ್ತು ಅಳಿಯ ಹಾಗೂ ಮಗ ಚಾಪರ್ನಲ್ಲಿ ಬಂದಿದ್ದರು. ಅಲ್ಲಿಂದ ದೇವಸ್ಥಾನ ತಲುಪಲು ಅವರು ಕಾರ್ ಬಳಸಿದ್ದರು.
ಈ ಸುದ್ದಿ ಓದಿದ್ದೀರಾ?:ನಮ್ಮ ಕುಟುಂಬ ಯಾವತ್ತೂ ಪ್ರಚಾರಕ್ಕೆ ಬಂದಿಲ್ಲ, ನಮಗೆ ಸೋಲಿನ ಭಯವಿಲ್ಲ: ಯತೀಂದ್ರ
ಸದ್ಯ ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಡಿ ಕೆ ಶಿವಕುಮಾರ್ ಬಳಿಕ ಚಿಕ್ಕಮಗಳೂರಿಗೆ ಭೇಟಿ ನೀಡಿ ಎರಡು ದಿನ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇಲ್ಲಿ ಕುಟುಂಬಸ್ಥರ ಜೊತೆ ಶಾರದಾ ಮಠದ ಯಾಗ ಶಾಲೆಯಲ್ಲಿ ಚಂಡಿಕಾ ಯಾಗ ನಡೆಸಲಿದ್ದಾರೆ.
ಶನಿವಾರ ಸಂಜೆ ಚಂಡಿಕಾ ಯಾಗದ ಸಂಕಲ್ಪ ಮಾಡಲಿರುವ ಡಿ ಕೆ ಶಿವಕುಮಾರ್, ಭಾನುವಾರ ಬೆಳಗ್ಗೆ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಯಾಗದ ಪೂರ್ಣಾಹುತಿ ನೆರವೇರಿಸಲಿದ್ದಾರೆ. ಚಂಡಿಕಾ ಯಾಗ ಪೂರ್ಣಗೊಂಡ ಬಳಿಕ ಅವರು ಬೆಂಗಳೂರಿಗೆ ತೆರಳಲಿದ್ದಾರೆ.