ಪ್ರತಿ ಕ್ಷೇತ್ರ ಮರುವಿಂಗಣೆ ಸಂದರ್ಭದಲ್ಲಿಯೂ ಬದಲಾಗುತ್ತಲೇ ಬಂದದ್ದು, ಬಂಗಾರಪೇಟೆ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರವು 1967ರಲ್ಲಿ ಬೇತಮಂಗಲ ಕ್ಷೇತ್ರವಾಗಿ ಮರುನಾಮಕರಣವಾಗಿತ್ತು. ಅ ನಂತರ, 1972ರಲ್ಲಿ ಬೇತಮಂಗಲ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲು ಕ್ಷೇತ್ರವಾಗಿ ಬದಲಾಯಿತು. ಬಳಿಕ, 2008ರಲ್ಲಿ ಬಂಗಾಪೇಟೆ ಮೀಸಲು ಕ್ಷೇತ್ರವಾಯಿತು.
ಕೆ.ಸಿ.ರೆಡ್ಡಿಯವರು ಈ ಕ್ಷೇತ್ರದಿಂದ ಆಯ್ಕೆಯಾಗಿ, ರಾಜ್ಯದ ಮೊದಲ ಮುಖ್ಯಮಂತ್ರಿಯೂ ಆಗಿದ್ದರು. ಅಂದಿನಿಂದ ಇಂದಿನವರೆಗೂ ಹಲವರಿಗೆ ಅವಕಾಶ ನೀಡಿದರೂ, ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿ ಉಳಿದಿದೆ. ಕಳೆದ ಎರಡು ಚುನಾವಣೆಗಳಲ್ಲಿ ಗೆಲುವು ಕಂಡಿರುವ ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್ ನಾರಾಯಣಸ್ವಾಮಿ, ತಮ್ಮ ಮೂರನೇಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಸದ್ಯ ಅವರ ವಿರುದ್ಧ ಭೂಮಿ ಒತ್ತುವರಿ ಆರೋಪ ಕೇಳಿ ಬಂದಿವೆ. ಆದರೂ, ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳಿಂದ ಜನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಅಲ್ಲದೆ, ತಮ್ಮ ವಿರುದ್ಧದ ಆರೋಪವನ್ನು ಸಂಸದ ಮುನಿಸ್ವಾಮಿ ಸಾಬೀತು ಪಡಿಸಿದರೆ, ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದಾಗಿ ಸವಾಲು ಹಾಕಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿಯಾದ ಮಾಜಿ ಶಾಸಕ ಎಂ ನಾರಾಯಣಸ್ವಾಮಿ ಭೋವಿ ಸಮುದಾಯದವರಾಗಿದ್ದು ಈ ಮೊದಲು ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಈಗ ಐದನೇ ಬಾರಿಗೆ ಆಯ್ಕೆಯಾಗಬೇಕೆಂಬ ಉತ್ಸಾಹದಲ್ಲಿದ್ದಾರೆ. ಇತ್ತೀಚೆಗೆ ಅವರು ಕೇಸರಿ ಪಾಳಯವನ್ನು ತೊರೆಯುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಪಕ್ಷ ಕೊನೆಗೂ ಅವರಿಗೆ ಮಣೆ ಹಾಕಿದೆ. ಅವರ ಪರವಾಗಿ ನಟ ದರ್ಶನ್ ಕೂಡ ರೋಡ್ ಶೋ ನಡೆಸಿ, ಮತಚಾಯನೆ ಮಾಡಿದ್ದಾರೆ.
ಜೆಡಿಎಸ್ ಕೂಡ ಭೋವಿ ಸಮುದಾಯದ ಮಲ್ಲೇಶ್ ಬಾಬು ಅವರನ್ನು ಕಣಕ್ಕಿಳಿಸಿದೆ. ಕಳೆದ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದ ಮಲ್ಲೇಶ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈ ಬಾರಿ, ಅವರಿಗೆ ಕ್ಷೇತ್ರದ ಮತದಾರರು ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳೂ ಇವೆ.
ಈ ಸುದ್ದಿ ಓದಿದ್ದೀರಾ?: ಮಾಲೂರು ಕ್ಷೇತ್ರ | ಕಾಂಗ್ರೆಸ್ಗೆ ನಿರಾಯಾಸದ ಗೆಲುವು ಸಾಧ್ಯತೆ!
ಜೆಡಿಎಸ್-ಬಿಜೆಪಿ ಭೋವಿ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಹಾಗಾಗಿ, ಆ ಸಮುದಾಯದ ಮತಗಳು ವಿಭಜನೆಯಾಗುತ್ತವೆ ಎಂಬ ಅಭಿಪ್ರಾಯವಿದೆ. ಇದನ್ನು, ಕಳೆದ ಮೂರು ಚುನಾವಣೆಗಳ ಫಲಿತಾಂಶ ಸಾಬೀತುಪಡಿಸಿದೆ. ಈ ಬಾರಿಯೂ ಭೋವಿ ಮತಗಳು ವಿಭಜನೆಗೊಂಡು, ಕ್ಷೇತ್ರವು ಕಾಂಗ್ರೆಸ್ ತೆಕ್ಕೆಗೆ ಹೋಗುವ ಸಾಧ್ಯತೆಗಳಿವೆ.
ಬಂಗಾರಪೇಟೆ ಕ್ಷೇತ್ರದಲ್ಲಿ ಭೋಮಿ ಸಮುದಾಯವೂ ಸೇರಿದಂತೆ 70-80 ಸಾವಿರ ದಲಿತ ಮತದಾರರಿದ್ದಾರೆ. ಎರಡನೇ ಸ್ಥಾನದಲ್ಲಿ ಒಕ್ಕಲಿಗರಿದ್ದು, 40 ಸಾವಿರ ಮತಗಳಿವೆ. ಕುರುಬರು, ಪಳ್ಳೀಗ ಎಂದು ಕರೆಯುವ ತಿಗಳ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ಸುಮಾರು 50 ಸಾವಿರ ಮತಗಳಿವೆ.