ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಪತ್ನಿ-ಪತಿ ಇಬ್ಬರೂ ಚುನಾವಣಾ ಕಣಕ್ಕಿಳಿದಿದ್ದು, ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ. ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಕಟ್ಟಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ಪಿಪಿ) ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ನೆಕ್ಕಂಟಿ ನಾಮಪತ್ರ ಸಲ್ಲಿಸಿದ್ದರೆ, ಅವರ ಪತ್ನಿ ಎನ್ ರಮ್ಯಾ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಪತ್ನಿ-ಪತಿ ಇಬ್ಬರೂ ನಾಮಪತ್ರ ಸಲ್ಲಿಸಲು ಸಿಂಧನೂರು ತಹಶೀಲ್ದಾರ್ ಕಚೇರಿಗೆ ಒಟ್ಟಿಗೆ ಬಂದಿದ್ದಾರೆ. ಮಲ್ಲಿಕಾರ್ಜುನ ಮೊದಲು ನಾಮಪತ್ರ ಸಲ್ಲಿಸಿದ್ದು, ಅವರ ಬಳಿಕ ರಮ್ಯಾ ಅವರು ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೆ, ನಾಮಪತ್ರ ಸಲ್ಲಿಕೆಗೂ ಮುನ್ನ ಇಬ್ಬರೂ ಜೊತೆಯಾಗಿಯೇ ರ್ಯಾಲಿ ನಡೆಸಿದ್ದಾರೆ.
ಹೀಗಾಗಿ, ಇಬ್ಬರೂ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದಾರೆಯೇ ಅಥವಾ ಒಂದು ವೇಳೆ ಒಬ್ಬರ ನಾಮಪತ್ರ ರಿಜೆಕ್ಟ್ ಆದರೆ, ಮತ್ತೊಬ್ಬರು ಕಣದಲ್ಲಿರಲಿ ಎಂದು ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆಯೇ ಎಂಬ ಅನುಮಾನವನ್ನು ಕ್ಷೇತ್ರದ ಜನರು ವ್ಯಕ್ತಪಡಿಸಿದ್ದಾರೆ.
ಸಿಂಧನೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ವೆಂಟರಾವ ನಾಡಗೌಡ, ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ, ಬಿಜೆಪಿ ಅಭ್ಯರ್ಥಿ ಕೆ ಕಾರಿಯಪ್ಪ, ಎಎಪಿ ಅಭ್ಯರ್ಥಿ ಸಂಗ್ರಾಮ ನಾರಾಯಣ ಕಣದಲ್ಲಿದ್ದಾರೆ.
Owesome,,,