ಜೆಡಿಎಸ್ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿ ಕೊನೆ ಗಳಿಕೆಯಲ್ಲಿ ಟಿಕೆಟ್ ಕಳೆದುಕೊಂಡ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಶ್ರೀನಿವಾಸ್ ಪಕ್ಷ ತೊರೆದಿದ್ದಾರೆ. ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ಮೊದಲ ಪಟ್ಟಿಯಲ್ಲಿ ಶಾಸಕ ಎಂ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದರು. ಆದರೆ, ಏಪ್ರಿಲ್ 19ರಂದು ಬಿಡುಗಡೆಯಾದ ಅಂತಿಮ ಪಟ್ಟಿಯಲ್ಲಿ ಅವರ ಬದಲಿಗೆ, ಮನ್ಮುಲ್ ಅಧ್ಯಕ್ಷ ಬಿ.ಆರ್ ರಾಮಚಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಕೊನೆ ಗಳಿಗೆಯಲ್ಲಿ ತಮ್ಮಿಂದ ಟಿಕೆಟ್ ಕಸಿಕೊಂಡು ಮತ್ತೊಬ್ಬರಿಗೆ ಟಿಕೆಟ್ ನೀಡಿದ್ದಕ್ಕಾಗಿ ಶ್ರೀನಿವಾಸ್ ಪಕ್ಷದ ವಿರುದ್ಧ ಸಿಟ್ಟಿಗೆದ್ದಿದ್ದಾರೆ ಎಂದು ತಿಳಿದುಬಂದಿದೆ.
ಮಂಡ್ಯದಲ್ಲಿ ಸಂಸದೆ ಸುಮಲತಾ ಅವರು ಕಣಕ್ಕಿಳಿಯುತ್ತಾರೆ. ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಈ ಎಲ್ಲ ಕಾರಣಗಳಿಂದ ಎಂ ಶ್ರೀನಿವಾಸ್ ಅವರಿಗೆ ಟಿಕೆಟ್ ತಪ್ಪಬಹುದು ಎನ್ನಲಾಗಿತ್ತು. ಈ ನಡುವೆ, ಚೆನ್ನಪಟ್ಟಣ್ಣ ಬಿಟ್ಟು ಬೇರೆಲ್ಲೂ ಸ್ಪರ್ಧೆ ಮಾಡುವುದಿಲ್ಲವೆಂದು ಕುಮಾರಸ್ವಾಮಿ ಹೇಳಿದ್ದರು. ತಮ್ಮ ಟಿಕೆಟ್ ಗಟ್ಟಿಯೆಂದು ಶ್ರೀನಿವಾಸ್ ಭಾವಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಬಿಜೆಪಿಯಲ್ಲಿ ಲಿಂಗಾಯತರಿಗೆ ಸುಣ್ಣ ಆರೆಸ್ಸೆಸ್ಸಿಗರಿಗೆ ಬೆಣ್ಣೆ : ಕಾಂಗ್ರೆಸ್
ಇದೆಲ್ಲದರ ನಡುವೆ, ಬುಧವಾರ ಬಿಡುಗಡೆಯಾದ ಜೆಡಿಎಸ್ ಅಭ್ಯರ್ಥಿಗಳ ಮೂರನೇ (ಅಂತಿಮ) ಪಟ್ಟಿಯಲ್ಲಿ ಮಂಡ್ಯದಲ್ಲಿ ಶ್ರೀನಿವಾಸ್ ಬದಲು ರಾಮಚಂದ್ರ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು.
ಟಿಕೆಟ್ ಕೈತಪ್ಪಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶ್ರೀನಿವಾಸ್, “ಮಂಡ್ಯ ಕ್ಷೇತ್ರದ ಟಿಕೆಟ್ಅನ್ನು ಪಕ್ಷ ಹಣಕ್ಕೆ ಮಾರಿಕೊಂಡಿದೆ. ನನಗೆ ಟಿಕೆಟ್ ಕೈತಪ್ಪಲು ಜಿಲ್ಲೆಯ ಇತರ ಜೆಡಿಎಸ್ ಶಾಸಕರೇ ಕಾರಣ. ನನ್ನ ಕ್ಷೇತ್ರದಲ್ಲಿ ಬೇರೆ ಕ್ಷೇತ್ರದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ನಾನು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಪಕ್ಷ ತೊರೆಯುತ್ತೇನೆ” ಎಂದಿದ್ದಾಗಿ ತಿಳಿದುಬಂದಿದೆ.