- ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಯಚೂರಿಗೆ ಏಮ್ಸ್ ಭರವಸೆಗೆ ಮನವಿ
- ಏಮ್ಸ್ಗಾಗಿ 384 ದಿನಗಳ ಕಾಲ ನಡೆದಿರುವ ಹೋರಾಟ
ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ನಂತರ, ರಾಜ್ಯ ಕೇಸರಿ ಪಕ್ಷದಲ್ಲಿ ಸದ್ದು-ಗದ್ದಲ ಹೆಚ್ಚಾಗಿದೆ. ಬಿಜೆಪಿಯ ಬಂಡಾಯವನ್ನು ಬಳಸಿಕೊಂಡು ಚುನಾವಣೆ ಗೆಲ್ಲಲು ಕಾಂಗ್ರೆಸ್ ಕೂಡ ಕಸರತ್ತು ನಡೆಸುತ್ತಿದೆ. ಈ ನಡುವೆ, ರಾಯಚೂರು ಕಾಂಗ್ರೆಸ್ನ ಪ್ರಭಾವಿ ನಾಯಕ, ಎಐಸಿಸಿ ಕಾರ್ಯದರ್ಶಿ ಎನ್.ಎಸ್ ಭೋಸರಾಜು ಮತ್ತು ಅವರ ಪುತ್ರ ರವಿ ಭೋಸರಾಜು ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಮುಖ್ಯವಾಗಿ, ರಾಯಚೂರಿಗೆ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಂಜೂರು ಮಾಡುವ ಕುರಿತು ಪ್ರಣಾಳಿಕೆ ಸೇರಿಸಬೇಕೆಂದು ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವ ಅಪ್ಪ-ಮಗ, “ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ರಾಯಚೂರು ರಾಜಕೀಯವಾಗಿಯೂ, ಅಭಿವೃದ್ಧಿಯ ದೃಷ್ಟಿಯಿಂದಲೂ ಮಹಾತ್ವಕಾಂಕ್ಷೆಯ ಜಿಲ್ಲೆ. ರಾಯಚೂರಿಗೆ ಏಮ್ಸ್ ಮಂಜೂರು ಮಾಡಬೇಕೆಂದು ಅಲ್ಲಿನ ಜನರು 384 ದಿನಗಳ ಕಾಲ ಹೋರಾಟ ನಡೆಸಿದ್ದಾರೆ. ಆದರೂ, ಬಿಜೆಪಿ ಸುಳ್ಳು ಹೇಳುತ್ತಾ ಜನರಿಗೆ ಮೋಸ ಮಾಡುತ್ತಿದೆ. ಆ ಜಿಲ್ಲೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕಡೆಗಣಿಸಬಾರದು. ಪ್ರಣಾಳಿಕೆಯಲ್ಲಿ ಏಮ್ಸ್ ಮಂಜೂರಾತಿ ಭರವಸೆ ನೀಡಬೇಕು” ಎಂದು ಭೋಸರಾಜು ಹೇಳಿದ್ದಾರೆ.
ಚರ್ಚೆಯ ಬಳಿಕ, ‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಯಚೂರಿಗೆ ಏಮ್ಸ್ ಭರವಸೆಯನ್ನು ಸೇರಿಸಲು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರಿಗೆ ಸೂಚಿಸುತ್ತೇವೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ?: ಚಿಕ್ಕಮಗಳೂರು | ಮೂಡಿಗೆರೆ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ರಾಜೀನಾಮೆ
ಕೆಲವು ತಿಂಗಳ ಹಿಂದೆ ರಾಯಚೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ‘ಜಿಲ್ಲೆಗೆ ಏಮ್ಸ್ ಮಂಜೂರು ಮಾಡುತ್ತೇವೆ’ ಎಂದು ಭರವಸೆ ನೀಡಿದ್ದರು. ಆದರೆ, ಬಜೆಟ್ನಲ್ಲಿ ಏಮ್ಸ್ಅನ್ನು ಧಾರವಾಡಕ್ಕೆ ನೀಡಿ, ಏಮ್ಸ್ ರೀತಿಯ ಆಸ್ಪತ್ರೆಯನ್ನು ರಾಯಚೂರಿನಲ್ಲಿ ನಿರ್ಮಿಸುತ್ತೇವೆಂದು ಹೇಳುವ ಮೂಲಕ ಮಾತು ತಪ್ಪಿದ್ದರು. ಮಾತ್ರವಲ್ಲದೆ, ಬಜೆಟ್ನಲ್ಲಿ ರಾಯಚೂರಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನವನ್ನೇ ಮೀಸಲಿಟ್ಟಿರಲಿಲ್ಲ. ಇದೆಲ್ಲವೂ ರಾಯಚೂರಿಗರ ಕೋಪಕ್ಕೆ ಕಾರಣವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಜಿಲ್ಲೆಯ ಜನರು ಆಕ್ರೋಶಗೊಂಡಿದ್ದಾರೆ. ಜನಾಕ್ರೋಶದ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.