- ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡಲಿದೆ ಎಂಬ ಭರವಸೆ ಇದೆ
- ನನ್ನ ಸ್ಪರ್ಧೆ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಚುನಾವಣಾ ರಾಜಕೀಯದ ನಿವೃತ್ತಿಗೂ ನನ್ನ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲ. ನನ್ನ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಾನು ಶಿವಮೊಗ್ಗ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ. ಬಿಜೆಪಿ ಹೈಕಮಾಂಡ್ ನನಗೆ ಟಿಕೆಟ್ ನೀಡಲಿದೆ ಎಂಬ ಭರವಸೆ ಈಗಲೂ ಇದೆ. ನನ್ನ ಸ್ಪರ್ಧೆ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಬಿಜೆಪಿ ಪಟ್ಟಿ ನೋಡಿದಾಗ ರಾಜಕಾರಣದ ಮಗ್ಗಲು ಬದಲಾಯಿಸುತ್ತಿದೆ ಎಂದು ಅನ್ನಿಸುತ್ತಿದೆ. ನನ್ನ ಸ್ಪರ್ಧೆಗೆ ಪೂರಕ ವಾತಾವರಣ ನಿರ್ಮಾಣ ಆಗುತ್ತಿದೆ. ನನ್ನ ನಿಲುವುಗಳಲ್ಲಿ ಬದಲಾವಣೆ ಇಲ್ಲ. ನಾನು ಸಾಗುತ್ತಿರುವ ಹಾದಿಯಲ್ಲಿ ಮಂಗಳವಾರ ನಡೆದಿದ್ದು, ಒಂದು ಸಣ್ಣ ಪ್ರಕರಣವಾಗಿದೆ. ಇಷ್ಟು ವರ್ಷದ ಒಂದೇ ತರಹದ ರಾಜಕಾರಣ ಹೊಂದಿದ್ದ ಶಿವಮೊಗ್ಗದ ಮಟ್ಟಿಗೆ ಈಗ ಒಂದು ಮಗ್ಗಲನ್ನು ಬದಲಾಯಿಸಿದಂತೆ ಆಗಿದೆ” ಎಂದು ತಿಳಿಸಿದ್ದಾರೆ.
“ದೀರ್ಘ ಕಾಲ ರಾಜಕಾರಣದಲ್ಲಿದ್ದ ಕೆ ಎಸ್ ಈಶ್ವರಪ್ಪ ಚುನಾವಣಾ ರಾಜಕಾರಣ ನಿವೃತ್ತಿ ಘೋಷಣೆ ಮಾಡಿದ್ದಾರೆ. ಶಿವಮೊಗ್ಗದ ರಾಜಕಾರಣದ ಮೇಲೆ ತನ್ನದೇ ಆದ ಪ್ರಭಾವ ಬೀರುತ್ತದೆ. ಸುದೀರ್ಘವಾದ ರಾಜಕಾರಣ ಮಾಡಿದ ಈಶ್ವರಪ್ಪ ಅವರಿಗೆ ವ್ಯಕ್ತಿಗತ ಶತ್ರು ಇಲ್ಲ. ಎಲ್ಲರ ಜತೆ ಆತ್ಮೀಯವಾಗಿ ಇರುವಂತಹವರು. ಇವತ್ತಿನ ನಿರ್ಗಮನ ಮತ್ತು ನಿರ್ಗಮನ ಆದ ರೀತಿ ನಿರಾಶಾದಾಯಕ ಹಾಗೂ ಆಘಾತಕಾರಿಯಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಹಾಕಿದಂಗಾಗಿದೆ: ಕಾಗೋಡು ತಿಮ್ಮಪ್ಪ ಬೇಸರ
“ಅವರಿಗೆ ಇಬ್ಬರೇ ಶತ್ರು ಇದ್ದಾರೆ. ನಿಯಂತ್ರಣ ಇಲ್ಲದ ಅವರ ಮಾತು ಅವರಿಗೆ ಮೊದಲ ಶತ್ರುವಾದರೆ, ಉತ್ತಮವಾಗಿ ಕೆಲಸ ಮಾಡಿದರೂ ಅವರಿಗೆ ಅಪಖ್ಯಾತಿ ಬರಲು, ಸಚಿವ ಸ್ಥಾನ ಕಳೆದುಕೊಳ್ಳಲು ಅವರ ಮನೆಯಲ್ಲಿಯೇ ಇರುವ ಶತ್ರು ಕಾರಣ. ಪುತ್ರ ವ್ಯಾಮೋಹ ಬಿಟ್ಟಿದ್ದರೆ ಸಚಿವ ಸ್ಥಾನ ಹೋಗುತ್ತಿರಲಿಲ್ಲ. ತನ್ನದಲ್ಲದ ತಪ್ಪಿಗೆ ಇಂದು ಚುನಾವಣಾ ಕಣದಿಂದ ನಿರ್ಗಮಿಸುತ್ತಿದ್ದಾರೆ. ಅವರ ನಿರ್ಗಮನಕ್ಕೆ ಯಾರೂ ಕಾರಣರಲ್ಲ ಇದೇ ಎರಡು ಅಂಶಗಳು ಕಾರಣ. ಈ ಅಂಶ ಅವರಿಗೆ ಗೋಚರವಾಗುತ್ತದೆ” ಎಂದಿದ್ದಾರೆ.