ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿಗೆ ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿದ್ದ ಮತ್ತು ಆಮಿಷವೊಡ್ಡಿದ ಆರೋಪದ ಮೇಲೆ ಸಚಿವ ವಿ ಸೋಮಣ್ಣ ಮತ್ತು ಇನ್ನಿಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚುನಾವಣಾ ಫ್ಲೈಯಿಂಗ್ ಸ್ಕ್ಯಾಡ್ನ ಮ್ಯಾಜಿಸ್ಟ್ರೇಟ್ ಡಾ.ಬಿ.ಆರ್.ಜಯಣ್ಣ ನೀಡಿರುವ ದೂರಿನ ಆಧಾರದ ಮೇಲೆ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅದರಲ್ಲಿ ಸೋಮಣ್ಣ ಅವರಿಗೆ ಸಂಬಂಧಿಸಿದ ವಿವರಗಳನ್ನು ಉಲ್ಲೇಖಿಸಲಾಗಿಲ್ಲ. ಅವರನ್ನು ಅಪರಿಚಿತನೆಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಸೋಮಣ್ಣ ಅವರದ್ದು ಎನ್ನಲಾದ ಆಡಿಯೋದಲ್ಲಿ ಸುದೀಪ್ ಮತ್ತು ನಟರಾಜು ಎಂಬ ಹೆಸರುಗಳೂ ಕೇಳಿಬಂದಿದ್ದು, ಆ ಎರಡು ಹೆಸರುಗಳನ್ನೂ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಇತ್ತೀಚೆಗೆ ಸೋಮಣ್ಣ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿತ್ತು ಮತ್ತು ಭಾರೀ ಸದ್ದು ಮಾಡಿತ್ತು. ಆ ಆಡಿಯೋ ನಾಮಪತ್ರ ಹಿಂಪಡೆಯುವ ಕೊನೆಯ ದಿನ ಸಂಭಾಷಣೆ ನಡೆಸಿದ್ದು ಎನ್ನಲಾಗಿತ್ತು. ಅದರಲ್ಲಿ, ಸೋಮಣ್ಣ ಅವರು ಮಲ್ಲಿಕಾರ್ಜುನ ಅವರಿಗೆ ನಾಮಪತ್ರ ವಾಪಸ್ ಪಡೆಯಲು ಆಮಿಷವೊಡ್ಡುವ ಮಾತುಗಳು ರೆಕಾರ್ಡ್ ಆಗಿದ್ದವು.
“ನೀನು ನಾಮಪತ್ರವನ್ನು ವಾಪಸ್ ಪಡೆದುಕೊ, ನಿನ್ನನ್ನು ನಾನು ನೋಡಿಕೊಳ್ಳುತ್ತೇನೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತದೆ. ನಿನಗೆ ಗೂಟದ ಕಾರು ಕೊಡಿಸುತ್ತೇನೆ” ಎಂದು ಸೋಮಣ್ಣ ಹೇಳಿರುವುದು ವೈರಲ್ ಆದ ಆಡಿಯೋದಲ್ಲಿ ಕೇಳಿಬಂದಿತ್ತು.
ಸೋಮಣ್ಣ ಅವರೇ ತಮಗೆ ಕರೆ ಮಾಡಿದ್ದಾಗಿ ಮಲ್ಲಿಕಾರ್ಜುನ ಸ್ವಾಮಿ ಅವರೂ ದೃಢಪಡಿಸಿದ್ದರು.