- ಬಿಜೆಪಿಯ ಬೆಂಗಳೂರು ಕೇಂದ್ರ ಜಿಲ್ಲೆಯ ಸಂಚಾಲಕ ಯಶವಂತರಿಂದ ದೂರು
- ದೂರಿನ ಮೇರೆಗೆ ಮೈಸೂರು ನಗರ ಪೊಲೀಸರಿಂದ ದಿಲೀಪ್ ಗೌಡ ಬಂಧನ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ವಿರುದ್ಧ ಸುಳ್ಳುಸುದ್ದಿ ಸೃಷ್ಟಿಸಿ ವೈರಲ್ ಮಾಡಿರುವ ಆರೋಪದ ಮೇಲೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ಮಟ್ಟು ಸೇರಿದಂತೆ ಐವರ ಮೇಲೆ ಬಿಜೆಪಿ ದೂರು ದಾಖಲಿಸಿದೆ.
ಭಾರತೀಯ ಜನತಾ ಪಕ್ಷದ ಕಾನೂನು ವಿಭಾಗದ ಬೆಂಗಳೂರು ಕೇಂದ್ರ ಜಿಲ್ಲೆಯ ಸಂಚಾಲಕ ಯಶವಂತ ಎಂ ಅವರು, ದಿನೇಶ್ ಅಮಿನ್ಮಟ್ಟು, ಬೈರಪ್ಪ ಹರೀಶ್ಕುಮಾರ್, ಹೇಮಂತ್ ಕುಮಾರ್, ದಿಲೀಪ್ ಗೌಡ ಹಾಗೂ ಬಿಂದು ಗೌಡ ಅವರ ಮೇಲೆ ಬೆಂಗಳೂರು ಉತ್ತರ ವಿಭಾಗದ ಸಿಇಎಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಮೇ 5ರಂದು ದಿನಪತ್ರಿಕೆಯಲ್ಲಿ ಬಂದಿರುವ ಹಾಗೇ ಸುಳ್ಳು ಸುದ್ದಿಯಾದ ‘ನಾವು ಹಿಂದುತ್ವದಲ್ಲಿ ಮುಂದುವರಿಯುತ್ತೇವೆ, ಲಿಂಗಾಯತರ ಅಗತ್ಯವಿಲ್ಲ: ಬಿ ಎಲ್ ಸಂತೋಷ್’ ಎಂಬ ಒಂದು ವರದಿ ಬಂದಿರುವ ಹಾಗೇ ಸೃಷ್ಟಿಸಿ, ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಲಿಂಗಾಯತ ಸಮುದಾಯವನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟುವ ಸಲುವಾಗಿ ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ” ಎಂದು ಯಶವಂತ ಎಂ ದೂರಿನಲ್ಲಿ ಆರೋಪಿಸಿದ್ದಾರೆ.
ಬಿಜೆಪಿ ನೀಡಿದ ದೂರಿನ ಮೇರೆಗೆ ದಿಲೀಪ್ ಗೌಡ ಅವರನ್ನು ಈಗಾಗಲೇ ಮೈಸೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಿ ಎಲ್ ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಗೆ ದಿಲೀಪ್ ಗೌಡ ಬಂಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಹಿರಿಯ ಪತ್ರಕರ್ತೆ ಹೇಮಾ ವೆಂಕಟ್ ಬಿಜೆಪಿಯ ನಡೆಯನ್ನು ಟೀಕಿಸಿ ಪೋಸ್ಟ್ ಹಾಕಿದ್ದು, “ಸುಳ್ಳು ಸುದ್ದಿ ಹರಡುವುದನ್ನು, ಸತ್ಯವನ್ನು ತಿರುಚುವುದನ್ನು ನಾನು ಬೆಂಬಲಿಸಲ್ಲ. ಆದರೆ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ, ಮತ್ತವರ ಇಡೀ ಕುಟುಂಬವನ್ನು ಕತ್ತರಿಸಿ ಹಾಕುತ್ತೇನೆ ಎಂದು ಹೇಳಿಕೆ ನೀಡಿರುವ ರೌಡಿ, ಮೇಲಾಗಿ ‘ಸಂಸ್ಕೃತಿ ರಕ್ಷಕರ ಪಕ್ಷ’ ಬಿಜೆಪಿಯ ಅಭ್ಯರ್ಥಿ ಮಣಿಕಂಠ ರಾಥೋಡ್ನ ಬಂಧನವಾಗದಿದ್ದರೆ, ಚುನಾವಣಾ ಕಣದಿಂದ ಅನರ್ಹಗೊಳಿಸದಿದ್ದರೆ ಅದು ಈ ನೆಲದ ಕಾನೂನಿಗೆ ಮಾಡುವ ಘೋರ ಅವಮಾನ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿಯಿಂದ ಖರ್ಗೆ ಕುಟುಂಬ ಹತ್ಯೆಗೆ ಸಂಚು, ಮೋದಿ ಮೌನಕ್ಕೆ ಶರಣು : ಸುರ್ಜೇವಾಲ ಗಂಭೀರ ಆರೋಪ
ಮುಂದುವರಿದು, “ಇದೇ ಬೆದರಿಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮೇಲೆ ಬಂದಿದ್ದರೆ, ಸರ್ಕಾರ ಸುಮ್ಮನಿರುತ್ತಿತ್ತೇ? ಸುಳ್ಳು ಸುದ್ದಿ ಹರಡಿದವನ ಬಂಧನ ಮಾಡುವಲ್ಲಿ ಪೊಲೀಸರಿಗೆ ಇರುವ ಅದೇ ಬದ್ಧತೆ, ಕೊಲೆ ಬೆದರಿಕೆ ಹಾಕಿದವನನ್ನು ಬಂಧಿಸುವಲ್ಲಿಯೂ ಇರಬೇಕಲ್ಲ? ಬೆಂಗಳೂರಿನ ಆರ್ ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ತನ್ನ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಮೇಲೆ ನಡೆಸುತ್ತಿರುವ ದಾಳಿ ನೋಡಿಯೂ ಸುಮ್ಮನಿರುವ ಚುನಾವಣಾ ಆಯೋಗದ ಅಧಿಕಾರಿಗಳು ಯಾವ ಸಂದೇಶ ರವಾನಿಸುತ್ತಿದ್ದಾರೆ? ನಿನ್ನೆ ರಾತ್ರಿ ಪುಂಡನೊಬ್ಬ ಕೆಲವೇ ಬೆಂಬಲಿಗರ ಜೊತೆಗಿದ್ದ ಕುಸುಮಾ ಅವರನ್ನು ನಡು ರಸ್ತೆಯಲ್ಲಿ ತಳ್ಳಿರುವ ದೃಶ್ಯ ಹರಿದಾಡುತ್ತಿದೆ. ಮತದಾನ ಮುಗಿಯುವ ಮುನ್ನ ಅಭ್ಯರ್ಥಿಗಳ ಕೊಲೆ ನಡೆದರೂ ಅಚ್ಚರಿಯಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.