- ನಾನು ಟಿಕೆಟ್ ಕೇಳಿರಲಿಲ್ಲ, ಕೈ ತಪ್ಪಿದೆ ಎನ್ನುವುದು ಅಪಪ್ರಚಾರ
- ಪ್ರಜಾಪ್ರಭುತ್ವ ಬಲಾಢ್ಯರ ಪಾಲಾಗುತ್ತಿದೆ, ಯೋಗ್ಯರಿಗಿದು ಕಾಲವಲ್ಲ
ಹಾಸನ ವಿಧಾನಸಭೆ ಚುನಾವಣೆಯಲ್ಲಿ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ. ನನಗೆ ಟಿಕೆಟ್ ಕೈತಪ್ಪಿದೆ ಎಂಬ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ ಎಂದು ಮಾಜಿ ಶಾಸಕ ಎ.ಟಿ ರಾಮಸ್ವಾಮಿ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.
ಹಾಸನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ನಾನು ಬಿಜೆಪಿ ಸೇರಿದ್ದು ಯಾವುದೇ ಅಧಿಕಾರದ ಆಸೆಗಾಗಿ ಅಲ್ಲವೆಂದು ಈಗಾಗಲೇ ಎಲ್ಲೆಡೆ ಹೇಳಿದ್ದೇನೆ. ನಾನು ಟಿಕೆಟ್ ಅಪೇಕ್ಷಿತ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ವರಿಷ್ಠರೂ ಕೂಡ ಬಹಳ ಒತ್ತಡ ಹಾಕಿ ಅಭ್ಯರ್ಥಿ ಆಗಲು ಹೇಳಿದ್ದರು. ನಾನು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲವೆಂದು ಅವರಿಗೆ ಹೇಳಿದ್ದೆ” ಎಂದಿದ್ದಾರೆ.
“ನಾನು ಮಾತಿನಂತೆ ನಡೆದುಕೊಂಡಿದ್ದೇನೆ. ರಾಮಸ್ವಾಮಿ ಅವರು ಬಿಜೆಪಿಗೆ ಹೋದರೂ ಟಿಕೆಟ್ ಸಿಗಲಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ನಾನು ಆಡಿದ ಮಾತಿನಂತೆ ನಡೆದುಕೊಂಡಿದ್ದೇನೆ. ನನ್ನ ನಡೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ” ಎಂದು ಮನವಿ ಮಾಡಿದರು.
“ಈಗ ರಾಜಕಾರಣದಲ್ಲಿ ಮೌಲ್ಯ ಇಲ್ಲದಂತಾಗಿದೆ. ರಾಜಕೀಯ ಈಗ ವ್ಯಾಪಾರ ಆಗಿದೆ. ಕೆಲವರು 50 ಕೋಟಿ ರೂಪಾಯಿವರೆಗೂ ಬಂಡವಾಳ ಹೂಡಲು ಹೊರಟಿದ್ದಾರೆ. ಬಂಡವಾಳ ಹೂಡಿದ ಮೇಲೆ ಅದನ್ನು ಹಿಂಪಡೆಯಬೇಕಾಗುತ್ತದೆ. ಹಾಗಿದ್ದಲ್ಲಿ ಒಳ್ಳೆಯವರು, ಪ್ರಾಮಾಣಿಕರು, ಯೋಗ್ಯರು ರಾಜಕಾರಣಕ್ಕೆ ಬರಲು ಹೇಗೆ ಸಾಧ್ಯವಾಗುತ್ತದೆ?” ಎಂದು ಪ್ರಶ್ನಿಸಿದರು.
“ಈ ರಾಜಕೀಯ ವ್ಯವಸ್ಥೆ ಬದಲಾಗಬೇಕಿದೆ. ರಾಜಕಾರಣದಲ್ಲಿ ಮೌಲ್ಯ ಉಳಿಸಬೇಕಾಗಿದೆ. ಚುನಾವಣಾ ಆಯೋಗ ಕೂಡ ಕಟ್ಟು ನಿಟ್ಟಿನ ಕ್ರಮ ವಹಿಸಬೇಕಿದೆ. ಇಲ್ಲವಾದರೆ ಪ್ರಜಾಪ್ರಭುತ್ವ ಬಲಾಢ್ಯರ ಪಾಲಾಗುತ್ತದೆ. ಸತ್ಯ, ಧರ್ಮ, ನ್ಯಾಯದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಅದರೆ, ಆಳವಡಿಸಿಕೊಳ್ಳಲು ಹಿಂದೆ ಸರಿಯುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಹಾಕಿದಂಗಾಗಿದೆ: ಕಾಗೋಡು ತಿಮ್ಮಪ್ಪ ಬೇಸರ
“ಮಾಜಿ ಸಿಎಂ ಯಡಿಯೂರಪ್ಪ, ಶೋಭ ಕರಂದ್ಲಾಜೆ ಅವರೆಲ್ಲಾ ನನಗೆ ಟಿಕೆಟ್ ಕೊಡುತ್ತೇವೆಂದು ಹೇಳಿದ್ದರು. ನನಗೆ ಅಗತ್ಯವಿಲ್ಲ. ʼಕೆಲವರು ನನಗೆ ಕೊಡಿ, ಮಕ್ಕಳಿಗೂ ಕೊಡಿ ಎಂದು ಕೇಳ್ತಾರೆ, ಆದರೆ, ನಿಮ್ಮದು ವಿಶೇಷ ಸ್ವಭಾವʼವೆಂದಿದ್ದರು” ಎಂದರು.
“ನಾನು ರಾಜಕೀಯದಿಂದ ತಟಸ್ಥನಾಗಿರಬೇಕು ಎನ್ನೋ ಭಾವನೆ ಇತ್ತು. ಆದರೆ, ನನ್ನ ಹಿತೈಷಿಗಳು, ಬೆಂಬಲಿಗರ ರಕ್ಷಣೆಗಾಗಿ ಕೆಲಸ ಮಾಡಲು ಒಂದು ಪಕ್ಷ ಬೇಕೆಂದು ಈ ನಿರ್ಧಾರ ಕೈಗೊಂಡಿದ್ದೇನೆ” ಎಂದರು.