ಹುಮನಾಬಾದ್ ಕ್ಷೇತ್ರ | ಕಾಂಗ್ರೆಸ್ ಹಣಿಯಲು ಬಿಜೆಪಿ-ಜೆಡಿಎಸ್ ಕಸರತ್ತು

Date:

ಬೀದರ್ ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ ಹುಮನಾಬಾದ್. ಪ್ರತಿಬಾರಿ ಚುನಾವಣೆಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಕ್ಷೇತ್ರ, ಈ ಬಾರಿಯ ಚುನಾವಣೆಯಲ್ಲೂ ಸದ್ದು ಮಾಡುತ್ತಿದೆ. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ನಡೆಸುತ್ತಿದ್ದು, ಕೈ ಪಡೆಯನ್ನು ಹಣಿಯಲು ಉಳಿದೆರಡು ಪಕ್ಷಗಳು ಕಸರತ್ತು ನಡೆಸುತ್ತಿವೆ.

ಒಂದು ಉಪಚುನಾವಣೆ ಸೇರಿದಂತೆ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಕಾಂಗ್ರೆಸ್‌ ಶಾಸಕ ರಾಜಶೇಖರ ಪಾಟೀಲ ಐದನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯಲ್ಲೇ ಕೆಂಪು ಬಾವುಟ ಹಾರಿಸಿದ ಈ ಏಕೈಕ ಕ್ಷೇತ್ರ, ಬಿಜೆಪಿ, ಜೆಡಿಎಸ್, ಜನತಾದಳ ಸೇರಿದಂತೆ ಎಲ್ಲ ಪಕ್ಷಗಳಿಗೂ ಮನ್ನಣೆ ನೀಡಿತ್ತು. ಕಳೆದ ಎರಡು ದಶಕಗಳಿಂದ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ.

ನಿರಂತರವಾಗಿ ಗೆಲುವು ಸಾಧಿಸುತ್ತಿರುವ ಪಾಟೀಲ್‌ ಅವರ ಓಟಕ್ಕೆ ಲಗಾಮು ಹಾಕಲು ಬಿಜೆಪಿ ತಂತ್ರ ರೂಪಿಸಿದೆ. ಹಾಲಿ ಶಾಸಕ ರಾಜಶೇಖರ ಪಾಟೀಲ ಅವರ ಸಹೋದರ ಸಂಬಂಧಿ ಡಾ.ಸಿದ್ದು ಪಾಟೀಲ್ ಅವರನ್ನು ಕೇಸರಿ ಪಡೆ ಕಣಕ್ಕಿಳಿಸಿ, ಅಚ್ಚರಿ ಮೂಡಿಸಿದೆ. ಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ ಮಗ ಸಿಎಂ ಫೈಜ್ ಮತ್ತು ಎಎಪಿ ಅಭ್ಯರ್ಥಿ ಬ್ಯಾಂಕ್ ರೆಡ್ಡಿ ಕಣದಲ್ಲಿದ್ದಾರೆ.

ಹುಮನಾಬಾದ್ ಕ್ಷೇತ್ರದಲ್ಲಿ ಪಾಟೀಲ್ ಪರಿವಾರದ ಬಸವರಾಜ ಪಾಟೀಲ ಅವರು ಕಟ್ಟಿದ ಕಾಂಗ್ರೆಸ್ ಕೋಟೆ ಭದ್ರವಾಗಿ ಕಾಪಿಟ್ಟುಕೊಳ್ಳುವಲ್ಲಿ ಮಕ್ಕಳು ಯಶಸ್ವಿಯಾಗಿದ್ದಾರೆ.‌ ರಾಜಶೇಖರ ಪಾಟೀಲ ಶಾಸಕರಾಗಿದ್ದರೆ, ಅವರ ಇಬ್ಬರು ಸಹೋದರರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಹೀಗಾಗಿ, ಹುಮನಾಬಾದ್ ಕ್ಷೇತ್ರದ ಕಾಂಗ್ರೆಸ್ ಕೋಟೆ ಭೇದಿಸುವುದು ಇತರ ಪಕ್ಷಗಳಿಗೆ ಸುಲಭದ ಮಾತಲ್ಲವೆಂದು ಹೇಳಲಾಗುತ್ತಿದೆ.

ಪಾಟೀಲ್ ಪರಿವಾರದ ಮಧ್ಯೆ ಜಿದ್ದಾಜಿದ್ದಿ

ಹುಮನಾಬಾದ್ ಕ್ಷೇತ್ರದಲ್ಲಿ ನಡೆದ ಒಟ್ಟು ಚುನಾವಣೆಯಲ್ಲಿ ಹೆಚ್ಚು ಬಾರಿ ಅಧಿಕಾರ ದಕ್ಕಿದ್ದು ಪಾಟೀಲ್ ಪರಿವಾರಕ್ಕೆ. ಇದೀಗ ಪಾಟೀಲ್ ಮನೆತನದ ಸಹೋದರ ಸಂಬಂಧಿ ಡಾ.ಸಿದ್ದು ಪಾಟೀಲ್ ಅವರು ಎರಡು ವರ್ಷಗಳ ಹಿಂದೆ ಭಿನ್ನಮತದ ಕಾರಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಹೀಗಾಗಿ, ಪಾಟೀಲ್ ಪರಿವಾರವೇ ಎರಡು ಪಕ್ಷಗಳಲ್ಲಿದ್ದು, ಕ್ಷೇತ್ರದಲ್ಲಿ ಹೊಸ ರಾಜಕೀಯ ಪರ್ವ ಶುರುವಾಗಿದೆ.

ಕ್ಷೇತ್ರದಲ್ಲಿ 1999ರಲ್ಲಿ ಮೊದಲ ಬಾರಿಗೆ ಗೆದ್ದಿದ್ದ ಬಿಜೆಪಿಗೆ ಮತ್ತೆ ಗೆಲುವು ಕಾಣಲಾಗಿಲ್ಲ. ಡಾ. ಸಿದ್ದು ಪಾಟೀಲ್ ಅವರನ್ನು ಕಣಕ್ಕಿಳಿಸಿ ಈ ಬಾರಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆದುಕೊಳ್ಳಲು ಕೇಸರಿ ಪಡೆ ಯತ್ನಿಸುತ್ತಿದೆ. ಎಪ್ರಿಲ್ 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹುಮನಾಬಾದ್ ಕ್ಷೇತ್ರದಿಂದಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದರು. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ ಡಾ.ಸಿದ್ದು ಪಾಟೀಲ್ ಅವರಿಗೆ ರಾಜಕೀಯ ಅನುಭವಿದೆ, ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ.‌ ಯುವ ಪಡೆಯೊಂದಿಗೆ ಪ್ರಚಾರ ಕೈಗೊಂಡು ಕ್ಷೇತ್ರದಲ್ಲಿ ಕಮಲ ಅರಳಿಸುವ ಪ್ರಯತ್ನದಲ್ಲಿದ್ದಾರೆ.

ಹಾಲಿ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಇಬ್ಬರು ಸಹೋದರರಿಗೆ ಕ್ಷೇತ್ರ ಉಳಿಸಿಕೊಳ್ಳುವುದು ಪ್ರತಿಷ್ಠೆ ಎನ್ನುವಂತಾಗಿದೆ. ಶಾಸಕ ರಾಜಶೇಖರ ಪಾಟೀಲ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆಸಿ ಶಕ್ತಿ ಪ್ರದರ್ಶಿಸಿದ್ದಾರೆ.‌

ಈ ಸುದ್ದಿ ಓದಿದ್ದೀರಾ?: ರೋಣ ಕ್ಷೇತ್ರ | ನೂರೆಂಟು ಸಮಸ್ಯೆಗಳು – ಫಲಿಸದ ಯೋಜನೆಗಳು; ಬದಲಾವಣೆಯತ್ತ ಮತದಾರ

ಕಾಂಗ್ರೆಸ್‌ಅನ್ನು ಮಣಿಸಬೇಕೆಂದು ಜೆಡಿಎಸ್‌ ಕೂಡ ಯತ್ನಿಸುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪುತ್ರ ಸಿಎಂ ಫೈಜ್ ಅವರನ್ನು ಕಣಕ್ಕಿಳಿ‌ಸಿದೆ. ಬಿಎಸ್ಪಿ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದ ಅಂಕುಶ ಗೋಖಲೆ ಅವರು ಪಕ್ಷ ತೊರೆದು ಜೆಡಿಎಸ್ ಸೇರಿದ್ದು, ಜೆಡಿಎಸ್‌ಗೆ ಮತ್ತಷ್ಟು ಬಲ ಬಂದಂತಾಗಿದೆ. ಇದರಿಂದ ಕ್ಷೇತ್ರ ತ್ರಿಕೋನ ಸ್ಪರ್ಧೆಯ ಕಣವಾಗಿ ಮಾರ್ಪಟ್ಟಿದ್ದು, ಬಿರುಸಿನ ಪ್ರಚಾರ ಮುಂದುವರೆದಿದೆ.

ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ ಬ್ಯಾಂಕ್ ರೆಡ್ಡಿ ಕ್ಷೇತ್ರದಲ್ಲಿ ತಮ್ಮದೇ ಆದ ಬೆಂಬಲಿಗರ ಯುವ ಪಡೆ ಹೊಂದಿದ್ದಾರೆ. ಕಳೆದ ಎರಡು ತಿಂಗಳಿಂದ ಕ್ಷೇತ್ರದಲ್ಲಿ ಸುತ್ತಾಟ ಆರಂಭಿಸಿದ್ದರು. ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷಗಳಿಗೆ ಸೋಲಿಸಲು ‘ಆಮ್ ಆದ್ಮಿಗೆ’ ‘ಕೇಜ್ರಿವಾಲ್ ಮಾದರಿ’ ತೋರಿಸಿ ಪ್ರಚಾರ ನಡೆಸುತ್ತಿದ್ದಾರೆ.

ಜಾತಿಬಲ ಮತದಾರರು:

ಲಿಂಗಾಯತ ಮತ್ತು ಮುಸ್ಲಿಂ ಮತಗಳು ನಿರ್ಣಾಯಕ ಪಾತ್ರ ವಹಿಸುವ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ರೆಡ್ಡಿ ಸೇರಿದಂತೆ ಇತರೆ ಸಮುದಾಯಗಳ ಮತದಾರರು ಇದ್ದಾರೆ. ಒಂದೇ ಕುಟುಂಬದ ಒಂದೇ ಪಕ್ಷವನ್ನು ಬಹುತೇಕ ಸಲ ಗೆಲ್ಲಿಸಿದ ಕ್ಷೇತ್ರದ ಮತದಾರರು ಈ ಬಾರಿ ಯಾರಿಗೆ ಮಣೆ ಹಾಕುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಕ್ಷೇತ್ರದಲ್ಲಿ 1,21,884 ಪುರುಷರು, 1,11,681 ಮಹಿಳೆಯರು ಹಾಗೂ 12 ತೃತೀಯ ಲಿಂಗಿ ಮತದಾರರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ; ಬೇಕಿದೆ ಮಾರುಕಟ್ಟೆ ಸೌಲಭ್ಯ

ಸೀತಾಫಲ ಹಣ್ಣು ತಿನ್ನಲು ತುಂಬಾ ರುಚಿಕರ ಹಾಗೂ ಅಷ್ಟೇ ಸ್ವಾದಿಷ್ಟ, ರೋಗ...

ಕಾವೇರಿ ವಿವಾದ | ತಮಿಳು ನಟ ಸಿದ್ಧಾರ್ಥ್‌ ಕ್ಷಮೆ ಕೇಳಿದ ನಟ ಶಿವರಾಜ್‌ಕುಮಾರ್

ತಮಿಳು ನಟ ಸಿದ್ಧಾರ್ಥ್‌ ಅವರ ಸುದ್ದಿಗೋಷ್ಠಿಗೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ...

ಕರ್ನಾಟಕ ಬಂದ್ | ದಾವಣಗೆರೆ: ತಮಿಳುನಾಡಿ ನೀರು ಹರಿಸದಂತೆ ಒತ್ತಾಯಿಸಿ ಕರವೇ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಕಾವೇರಿ ನಿರ್ವಹಣಾ...

ಹಾವೇರಿ | ಕಾವೇರಿ ನೀರು ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಲಿ

ರಾಜ್ಯ ಸರ್ಕಾರ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯ ವಿವಿಧ ಸಂಘಟನೆಗಳ...