ಭಜರಂಗ ದಳ ಮತ್ತು ಪಿಎಫ್ಐ ಸಂಘಟನೆ ನಿಷೇಧಕ್ಕೆ ಬಲವಾದ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ತನ್ನ ‘ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆʼ ಹೆಸರಿನ ಪ್ರಣಾಳಿಕೆಯಲ್ಲಿ ಮಂಗಳವಾರ ಘೋಷಿಸುತ್ತಿದ್ದಂತೆ ಬಿಜೆಪಿ ನಾಯಕರು ಅಷ್ಟೇ ತೀವ್ರಗತಿಯಲ್ಲಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೋಭಾ ಕರಂದ್ಲಾಜೆ, “ದೇಶ, ವಿದೇಶದಲ್ಲಿ ದೇಶಭಕ್ತಿಯನ್ನು ಮೂಡಿಸುವ ಕೆಲಸವನ್ನು ಆರ್ಎಸ್ಎಸ್ ಮಾಡುತ್ತಿದೆ. ಬಿಜೆಪಿ ಪಕ್ಷ ಆರ್ಎಸ್ಎಸ್ನ ಭಾಗವಾದರೆ, ಭಜರಂಗದಳ ಕೂಡ ಆರ್ಎಸ್ಎಸ್ ಯುವಕರ ಭಾಗವಾಗಿದೆ. ಪಿಎಫ್ಐ ಜೊತೆಗೆ ಭಜರಂಗದಳ ಹೋಲಿಸುವುದು ತಪ್ಪು. ಇದು ನಿಮ್ಮ ವಿನಾಶಕ್ಕೆ ನೀವೇ ಮಾಡಿಕೊಂಡ ತಯಾರಿ. ತಾಕತ್ತು ಇದ್ದರೆ ಭಜರಂಗದಳ ನಿಷೇಧಿಸಿ” ಎಂದು ಸವಾಲು ಹಾಕಿದ್ದಾರೆ.
ಅತ್ತ ಬಿಜೆಪಿ ಕಚೇರಿಯಲ್ಲಿ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ, ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳ ಮುಖಪುಟದಲ್ಲಿ ʼನಾನೊಬ್ಬ ಕನ್ನಡಿಗ, ನನ್ನ ನಾಡು ಹನುಮ ಜನಿಸಿದ ನಾಡು, ನಾನೊಬ್ಬ ಭಜರಂಗಿʼ ಎಂದು ಬರೆದುಕೊಂಡಿರುವ ಪೋಸ್ಟರ್ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಈ ಫೊಸ್ಟರ್ ಅಭಿಯಾನದಲ್ಲಿ ಭಾಗಿಯಾಗಿ, “ನಾನು ಭಜರಂಗಿ, ನನ್ನ ನಾಡು ಹನುಮ ಜನಿಸಿದ ನಾಡು, ಕಾಂಗ್ರೆಸ್ಸಿಗೆ ಧೈರ್ಯವಿದ್ದರೆ ನನ್ನನ್ನು ಬ್ಯಾನ್ ಮಾಡಲಿ” ಎಂದು ಟ್ವೀಟ್ ಮಾಡಿದ್ದಾರೆ.
ಸಿ ಟಿ ರವಿ ಈ ಕೂಡ ಈ ಪೋಸ್ಟರ್ ಅಭಿಯಾನಕ್ಕೆ ಧ್ವನಿಗೂಡಿಸಿ, “ನಾನೊಬ್ಬ ಹೆಮ್ಮೆಯ ಹಿಂದೂ. ನಾನು ಭಜರಂಗಬಲಿಯನ್ನು ಪೂಜಿಸುತ್ತೇನೆ. ಕಾಂಗ್ರೆಸ್ಗೆ ತಾಕತ್ತು ಇದ್ದರೆ ನನ್ನನ್ನು ನಿಷೇಧಿಸಲಿ” ಎಂದು ಟ್ವೀಟ್ ಮಾಡಿದ್ದಾರೆ.
ಸಂಸದ ಪ್ರತಾಪ ಸಿಂಹ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಒಂದೇ ಮಾದರಿಯ ಪೋಸ್ಟರ್ಗಳನ್ನು ತಮ್ಮ ಪ್ರೊಫೈಲ್ಗೆ ಹಾಕಿಕೊಂಡು ಪೋಸ್ಟ್ ಮಾಡಿದ್ದಾರೆ.
ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಿರುವುದೇನು?
ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿಎಫ್ಐ ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧಕ್ಕೆ ಬಲವಾದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಕಾಂಗ್ರೆಸ್ ಘೋಷಿಸಿದೆ.