- ಮಿಜೋರಾಂ, ಮಣಿಪುರ ಸೇರಿದಂತೆ ರಾಷ್ಟ್ರದ ಗಡಿಪ್ರದೇಶಗಳಲ್ಲಿ ಗಲಭೆ
- ದೇಶದ ರಕ್ಷಣೆ ಬಗ್ಗೆ ಗಮನಹರಿಸುವುದು ಪ್ರಧಾನಿಯ ಮೊದಲ ಕರ್ತವ್ಯ
ರಾಜ್ಯಕ್ಕೆ ಪ್ರಧಾನಿ ಮೋದಿ ಅವರು ಬರುವುದನ್ನು ನಾನು ವಿರೋಧಿಸುವುದಿಲ್ಲ. ಆದರೆ ಮಿಜೋರಾಂ, ಮಣಿಪುರ ಸೇರಿದಂತೆ ರಾಷ್ಟ್ರದ ಗಡಿಪ್ರದೇಶಗಳಲ್ಲಿ ಗಲಭೆ, ಪರಿಸ್ಥಿತಿ ಸರಿ ಇಲ್ಲದೆ ಇರುವಾಗ ದೇಶದ ಚುಕ್ಕಾಣಿ ಹಿಡಿದ ಪ್ರಧಾನಿ ಪದೇಪದೆ ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸುವುದು ಎಷ್ಟರ ಮಟ್ಟಿಗೆ ಸರಿ? ವಿದೇಶಾಂಗ ನೀತಿ, ದೇಶದ ರಕ್ಷಣೆ ಬಗ್ಗೆ ಗಮನಹರಿಸುವುದು ಪ್ರಧಾನಿಯಾದವರ ಮೊದಲ ಕರ್ತವ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಹೇಳಿದರು.
ತುಮಕೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಈಶಾನ್ಯ ರಾಜ್ಯಗಳ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿರುವಾಗ ಪ್ರಧಾನಿಯಾದವರು ರಾಷ್ಟ್ರದ ರಾಜಧಾನಿಯಲ್ಲಿದ್ದುಕೊಂಡು ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ರಾಜತಾಂತ್ರಿಕ ಮಾರ್ಗಗಳ ಪರಿಹಾರ ಚಿಂತಿಸಬೇಕೇ ವಿನಃ ಕೇವಲ ಒಂದು ರಾಜ್ಯದ ಚುನಾವಣೆಗೆ ಹೆಚ್ಚು ಸಮಯ ಮೀಸಲಿಡುವುದು ತರವಲ್ಲ” ಎಂದರು.
“ಮೋದಿ, ಶಾ ಎಷ್ಟೇ ಬಾರಿ ಬಂದರೂ ಈ ಬಾರಿ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದು, ನಮ್ಮ ಪ್ರಣಾಳಿಕೆಯ ಪ್ರಮುಖಾಂಶವೇ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿದೆ” ಎಂದು ಹೇಳಿದರು.
“ಕೊರಟಗೆರೆ ಕ್ಷೇತ್ರದಲ್ಲಿ ರಾಜಕೀಯ ಎದುರಾಳಿಗಳು ತಮ್ಮ ವಿರುದ್ಧ ವೈಟ್ಕಾಲರ್, ಕೈಗೆ ಸಿಗೋಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಕೊರಟಗೆರೆಯ ಮತದಾರರು ತಾವು ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ, ಜನತೆಯ ಸಮಸ್ಯೆಗಳ ಪರಿಹಾರಕ್ಕಾಗಿ ಮಾಡಿದ ಕೆಲಸಗಳನ್ನು ಗುರುತಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಮರೆತಿಲ್ಲ. ಚುನಾವಣೆಯಲ್ಲಿ ಕ್ಷೇತ್ರದ ಪ್ರಜ್ಞಾವಂತ ಮತದಾರರು ಮತ್ತೆ ತಮ್ಮ ಕೈ ಹಿಡಿಯುವ ವಿಶ್ವಾಸ ಅಚಲವಾಗಿದೆ” ಎಂದರು.
“ಮತ್ತೆ ಶಾಸಕರಾಗಿ ಆಯ್ಕೆಯಾಗುವುದರೊಂದಿಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವ ಜೊತೆಗೆ ಲಾಲ್ಬಾಗ್ ಮಾದರಿ ಉದ್ಯಾನ, ವಸಂತಾ ನರಸಾಪುರ ಕೈಗಾರಿಕಾ ಕಾರಿಡಾರ್ ಅನ್ನು 4 ಲಕ್ಷ ಮಂದಿಗೆ ಉದ್ಯೋಗ ದೊರಕಿಸುವ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ದೂರದೃಷ್ಟಿ ಹೊಂದಲಾಗಿದೆ. ಇದಕ್ಕಾಗಿಯೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಗ್ರೇಟರ್ ಬೆಂಗಳೂರು ಯೋಜನೆಯನ್ನು ಘೋಷಿಸಲಾಗಿದೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು ಜಿಲ್ಲೆ | ಕಾಂಗ್ರೆಸ್ – ಜೆಡಿಎಸ್ ಪ್ರಾಬಲ್ಯದ ನಡುವೆ ಗೆಲುವಿಗಾಗಿ ಬಿಜೆಪಿ ಕಸರತ್ತು
“ತುಮಕೂರಿನಲ್ಲಿ ಏಷ್ಯಯಾದ ಬೃಹತ್ ಕೈಗಾರಿಕಾ ಪ್ರದೇಶವಾದ ವಸಂತನರಸಾಪುರವಿದೆ. ಇಲ್ಲಿಗೆ ತುಮಕೂರಿನ ಮೂಲಕ ಮೆಟ್ರೋ ರೈಲು ತರಬೇಕು ಎಂಬ ಆಶಯ ತಮ್ಮದು, ಮೆಟ್ರೋ ರೈಲು ಬರುವುದರಿಂದ ತುಮಕೂರಿನ ಅಭಿವೃದ್ಧಿಯಾಗುತ್ತದೆ, ನವಿ ಮುಂಬಯಿಯಂತೆ ತುಮಕೂರು ಬೆಂಗಳೂರಿನ ಗ್ರೇಟರ್ ಆಗಿ ಬೆಳೆಸಬೇಕು ಎಂಬ ದೂರದೃಷ್ಠಿಯಿಂದ ಪ್ರಣಾಳಿಕೆಯಲ್ಲಿ ಮೆಟ್ರೋ ಅಂಶವನ್ನು ಸೇರ್ಪಡೆ ಮಾಡಿದ್ದೇನೆ” ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕಾ ಸಮಿತಿ ಅಧ್ಯಕ್ಷರೂ ಆಗಿರುವ ಪರಮೇಶ್ವರ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಬಂದಲ್ಲಿ ತಮಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ, ಎಲ್ಲವನ್ನು ಪಕ್ಷದ ಹೈಕಮಾಂಡ್ ಅಣತಿಯಂತೆ ಶಾಸಕಾಂಗ ಸಭೆಯಲ್ಲಿ ಶಾಸಕರು ನಿರ್ಧರಿಸಲಿದ್ದಾರೆ. ಮೊದಲು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಹಾಗೂ ಇತರರಿದ್ದರು.