- ಕಾಂಗ್ರೆಸ್ ಸೇರಿದ ಶೆಟ್ಟರ್ ವಿರುದ್ಧ ಬಿಎಸ್ವೈ ವಾಗ್ದಾಳಿ
- ಶೆಟ್ಟರ್ ರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ
ಈ ಹಿಂದೆ ನಾನು ಕೆಜೆಪಿ ಸ್ಥಾಪನೆ ಮಾಡಿ ದೊಡ್ಡ ಅಪರಾಧ ಮಾಡಿದೆ. ಕೆಜೆಪಿ ಕಟ್ಟಿದ್ದಕ್ಕೆ ರಾಜ್ಯದ ಜನರ ಬಳಿ ಕ್ಷಮೆ ಕೇಳುತ್ತೇನೆ. ನಾನು ಭಾರತೀಯ ಜನತಾ ಪಾರ್ಟಿ ಬಿಟ್ಟು ಕೆಜೆಪಿ ಕಟ್ಟಿದ್ದೆ. ಆದರೆ ಜಗದೀಶ್ ಶೆಟ್ಟರ್ ರೀತಿ ಮಾಡಲಿಲ್ಲ ಎಂದು ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ( ಬಿಎಸ್ವೈ) ಹೇಳಿದರು.
ಬೆಂಗಳೂರಿನಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿಗೆ ದ್ರೋಹ ಬಗೆದು ಹೋಗಿರುವ ಜಗದೀಶ್ ಶೆಟ್ಟರ್ ಅವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಪಕ್ಷದಿಂದ ಎಲ್ಲವನ್ನೂ ಪಡೆದುಕೊಂಡು ಈಗ ಅದನ್ನೇ ಬಿಟ್ಟು ಹೊರನಡೆದಿದ್ದಾರೆ. ಇವರದ್ದು ಅವಕಾಶವಾದಿ ರಾಜಕಾರಣ ಎಂದು ಕಿಡಿಕಾರಿದರು.
ರಾಜಕೀಯ ಹಿತಾಸಕ್ತಿಗಾಗಿ ಕಾಂಗ್ರೆಸ್ ಸೇರಿರುವ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ, ಅವರು ನಿಂತಿರುವುದು ಬಿಜೆಪಿ ಕ್ಷೇತ್ರದಲ್ಲಿ ಇಲ್ಲಿ ಅವರ ಗೆಲುವು ಅಸಾಧ್ಯ ಎಂದರು.
ಅವರು ಮತ್ತೊಂದು ಪಕ್ಷ ಅಥವಾ, ಪಕ್ಷೇತರರಾಗಿ ನಿಂತಿದ್ದರೂ ಬೇಸರವಾಗುತ್ತಿರಲಿಲ್ಲ. ಆದರೆ ನಮ್ಮ ಕಡು ವಿರೋಧಿಗಳ ಗುಂಪು ಸೇರಿದ್ದು ನಿಜಕ್ಕೂ ಅಕ್ಷಮ್ಯ ಎಂದರು.
ಈ ಸುದ್ದಿ ಓದಿದ್ದೀರಾ? :ಹಳೇ ಮೈಸೂರು ಭಾಗದಲ್ಲಿ “ನಾಥ ಪರಂಪರೆ”ಯ ಅಸ್ತ್ರ ಬಿಟ್ಟ ಬಿಜೆಪಿ; ಮಂಡ್ಯದಲ್ಲಿ ಯೋಗಿ ಮತ ಭೇಟೆ
ಧಾರವಾಡದಲ್ಲಿ ನಮ್ಮ ಕಾರ್ಯಕರ್ತರ ಪಡೆ ಸಶಕ್ತವಾಗಿದೆ, ಜಗದೀಶ್ ಶೆಟ್ಟರ್ ಸೋಲಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ. ವಿಶ್ವಾಸದ್ರೋಹ ಮಾಡಿದವರನ್ನ ನಾವು ಕ್ಷಮಿಸುವುದಿಲ್ಲ ಎಂದು ಬಿಎಸ್ವೈ ಗುಡುಗಿದರು.
ನಮ್ಮ ಪಕ್ಷಕ್ಕೆ ದ್ರೋಹ ಮಾಡಿರುವ ಶೆಟ್ಟರ್ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ವಾಪಾಸ್ ಕರೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ಆ ಮೂಲಕ ಜಗದೀಶ್ ಶೆಟ್ಟರ್ ಮರಳಿ ಪಕ್ಷಕ್ಕೆ ಬರುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದ ಕೆ ಎಸ್ ಈಶ್ವರಪ್ಪ ಅವರ ಮಾತಿಗೆ ಯಡಿಯೂರಪ್ಪ ಪರೋಕ್ಷ ತಿರುಗೇಟು ನೀಡಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಮಾಜಿ ಡಿಸಿಎಂ ಈಶ್ವರಪ್ಪ, ಕಾಂಗ್ರೆಸ್ ಸೇರಿರುವ ಶೆಟ್ಟರ್ಗೆ ಭ್ರಮನಿರಸನವಾದಂತಾಗಿದೆ. ಹೀಗಾಗಿ ಅವರು ಆದಷ್ಟು ಬೇಗ ಮರಳಿ ಬಿಜೆಪಿ ಸೇರುತ್ತಾರೆ ಎಂದಿದ್ದರು.