- ಹಿರಿಯ ನಾಯಕರನ್ನು ಹೆದರಿಸಿ ರಾಜಕಾರಣ ಮಾಡುತ್ತಿರುವ ಪ್ರಲ್ಹಾದ್ ಜೋಶಿ
- ಈ ಬಾರಿಯ ಚುನಾವಣೆ ಒಳ ಹೊಡೆತದ ಚುನಾವಣೆಯಾಗಿರಲಿದೆ: ಶೆಟ್ಟರ್
ಪ್ರಲ್ಹಾದ್ ಜೋಶಿ ಅವರೇ ಕ್ಷೇತ್ರದಲ್ಲಿ ಪ್ರಾಮಾಣಿಕ ರಾಜಕಾರಣ ಮಾಡಿ. ಅದನ್ನು ಬಿಟ್ಟು ಹಿರಿಯ ನಾಯಕರನ್ನು ಹೆದರಿಸಿ ರಾಜಕಾರಣ ಮಾಡಬೇಡಿ. ನೀವು ನಮ್ಮ ನಾಯಕರಿಗೆ ಧಮ್ಕಿ ಹಾಕಿರುವ ಕಾಲ್ ರೆಕಾರ್ಡಿಂಗ್ ಕೇಳಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿ ಕಾರಿದರು.
ಕಾಂಗ್ರೆಸ್ ಸೇರಿದ ಬಳಿಕ ಎರಡನೇ ಸುದ್ದಿಗೋಷ್ಠಿ ಕರೆದು ಸೋಮವಾರ ಮಾತನಾಡಿದ ಅವರು, “ಪ್ರಲ್ಹಾದ್ ಜೋಶಿ ಹೆದರಿಸಿ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಬೆಂಬಲಿಗರನ್ನು ಹೆದರಿಸಿ ಬಿಜೆಪಿಯಲ್ಲಿ ಉಳಿಸಿಕೊಂಡಿದ್ದಾರೆ. ಕೆಲವರಿಗೆ ಧಮ್ಕಿ ಕೂಡ ಹಾಕುತ್ತಿದ್ದಾರೆ” ಎಂದು ಆರೋಪಿಸಿದರು.
“ಕ್ಯಾಬಿನೇಟ್ ಮಿನಿಸ್ಟರ್ ಆದ ಪ್ರಲ್ಹಾದ್ ಜೋಶಿ ಅವರು ಚುನಾವಣೆ ಘೋಷಣೆಯಾದ ಇಲ್ಲಿಯೇ ಠಿಕಾಣಿ ಹೂಡಿ ನನ್ನ ಸೋಲಿಸಲು ಒಳಗೊಳಗೆ ತಂತ್ರ ಹೆಣೆಯುತ್ತಿದ್ದಾರೆ. ನನ್ನ ಕ್ಷೇತ್ರದ ಜನ ಇದನ್ನೆಲ್ಲ ನೋಡುತ್ತಿದ್ದಾರೆ. ತಕ್ಕ ಉತ್ತರವೇ ಕೊಡಲಿದ್ದಾರೆ. ಇಡೀ ರಾಜ್ಯದಲ್ಲಿ ನನ್ನ ಮೇಲೆ ಕಳಕಳಿ ಮೂಡಿದೆ. ಬೇರೆ ಬೇರೆ ಜಿಲ್ಲೆಗಳಿಂದ ಜನ ವಾಲೆಂಟರಿ ಆಗಿ ಬಂದು ನನ್ನ ಪರ ಕಾಂಪೇನ್ ಮಾಡುತ್ತಿದ್ದಾರೆ. ಇದು ಒಳ ಹೊಡೆತದ ಚುನಾವಣೆ” ಎಂದರು.
“ಹಿರಿಯ ರಾಜಕಾರಣಿಗಳನ್ನು ಮುಗಿಸುವ ಷಡ್ಯಂತ್ರ ಬಿಜೆಪಿಯಲ್ಲಿ ಇನ್ನೂ ನಿಂತಿಲ್ಲ. ಯಡಿಯೂರಪ್ಪ ಚುನಾವಣೆ ಪ್ರಚಾರಕ್ಕೆ ಬೇಕು? ಅದರೆ ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು. ಅವರ ಉದ್ದೇಶ ಸ್ಪಷ್ಟವಾಗಿದೆ. ಇದಕ್ಕೆಲ್ಲ ಬಿ ಎಲ್ ಸಂತೋಷ್ ಕಾರಣ ಎಂಬುದು ಬೇರೆ ಹೇಳಬೇಕಿಲ್ಲ” ಎಂದು ಹೇಳಿದರು.
“ಬಿ ಎಲ್ ಸಂತೋಷ್ ಲಿಂಗಾಯತ ವಿರೋಧಿ ಎಂಬುದು ಈಗಾಗಲೇ ಹೇಳಿರುವೆ. ಮೊನ್ನೆ ಅವರು ಲಿಂಗಾಯತ ವಿರೋಧಿ ಎಂಬುದು ಸುದ್ದಿ ರೂಪದಲ್ಲಿ ಬಂತು. ಅವರ ಮೇಲೆ ದೂರು ಕೊಟ್ಟು ಹೆದರಿಸಿದರು. ತಮಗೆ ಅನಾನುಕೂಲ ಆಗುವ ಸಂಗತಿಗಳೆಲ್ಲ ಬಿಜೆಪಿ ಮತ್ತು ಬಿ ಎಲ್ ಸಂತೋಷ್ಗೆ ಫೇಕ್. ನಳೀನ್ ಕುಮಾರ್ ಕಟೀಲ ಅವರ ಆಡಿಯೋ ಸಂಭಾಷಣೆ ಫೇಕಾ? ನಾವೇನು ದಡ್ಡರಾ”ಎಂದು ಪ್ರಶ್ನಿಸಿದರು.
“ಬಿಜೆಪಿಯವರ ನೀತಿಯನ್ನು ಧಿಕ್ಕರಿಸಿ ಹೊರಗೆ ಬಂದಿದ್ದೇನೆ. ಗುಲಾಮಗಿರಿ ಮನಸ್ಥಿತಿ ನನ್ನದಲ್ಲ. ಸದ್ಯದ ಬಿಜೆಪಿಗೆ ಯಾವ ಸಿದ್ಧಾಂತವೂ ಇಲ್ಲ. ಜನರ ಬಿರುಗಾಳಿಯಲ್ಲಿ ಬಿಜೆಪಿ ಬಾರಿ ಕೊಚ್ಚಿ ಹೋಗಲಿದೆ” ಎಂದು ಭವಿಷ್ಯ ನುಡಿದರು.
“ಬಿಜೆಪಿ ನಾಯಕರು ನಾನು ಸೋಲಬೇಕು ಅಂತ ಬಹಳ ಕನಸು ಕಾಣುತ್ತಿದ್ದಾರೆ. ಜನರು ಅವರ ಆಸೆಯನ್ನು ನಿರಾಸೆ ಮಾಡುತ್ತಾರೆ. ಕಾಂಗ್ರೆಸ್ ಸೇರಿದ್ದು ಒಳ್ಳೆಯದು ಅಂತ ತುಂಬಾ ಜನ ಮಾತನಾಡಿದ್ದಾರೆ. ಇದು ನನ್ನ ಕೊನೆ ಚುನಾವಣೆ. 70 ವರ್ಷದ ನಂತರ ರಾಜಕೀಯದಿಂದ ದೂರ ಇರುವೆ. ಇದು ನನ್ನ ವೈಯಕ್ತಿಕ ತೀರ್ಮಾನ” ಎಂದರು.