- ‘ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ’
- ‘ಕ್ರಿಮಿನಲ್ನಿಂದ ಎಚ್ಡಿಕೆಗೆ ಬೆದರಿಕೆ’
ಸಾತನೂರಿನಲ್ಲಿ ನಡೆದ ಜಾನುವಾರು ವ್ಯಾಪಾರಿ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಇನ್ನೂ ಬಂಧಿಸದ ಕುರಿತು ಜೆಡಿಎಸ್ ಅನುಮಾನ ವ್ಯಕ್ತಪಡಿಸಿದೆ.
ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು ಸಹ ಇನ್ನೂ ಆತನ ಬಂಧನವಾಗಿಲ್ಲ. ಪ್ರಮುಖ ಆರೋಪಿ ಫೇಸ್ಬುಕ್ ಲೈವ್ ಮೂಲಕ ಕಾಣಿಕೊಳ್ಳುತ್ತಿದ್ದಾನೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
“ಜಾನುವಾರು ವ್ಯಾಪಾರಿಯ ಕೊಲೆ ನಡೆದು ಇಷ್ಟು ದಿನಗಳಾದರೂ ಆರೋಪಿಯ ಬಂಧನವಾಗಿಲ್ಲ. ಆದರೆ ಕ್ರಿಮಿನಲ್ ಮಾತ್ರ ಸ್ವಚ್ಛಂದವಾಗಿ ತಿರುಗಾಡುತ್ತಾ ಮಾಜಿ ಸಿಎಂಗಳಾದ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬೆದರಿಕೆ ಹಾಕುತ್ತಿದ್ದಾನೆ” ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆಯಾ ಆರಗ ಜ್ಞಾನೇಂದ್ರ ಅವರೇ?: ಕಾಂಗ್ರೆಸ್ ಕಿಡಿ
“ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿರುವುದಕ್ಕೆ ಇದು ಸಾಕ್ಷಿ” ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದೆ.
“ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಎಲ್ಲಿದ್ದೀರಿ ನೀವು? ನಿಮಗಿನ್ನೂ ಈ ಸುದ್ದಿ ಮುಟ್ಟಿಲ್ಲವೆ? ಅಥವಾ ಕ್ರಿಮಿನಲ್ಗೆ ನಿಮ್ಮ ಮನೆಯಲ್ಲೆ ಅಡಗಿಸಿಟ್ಟಿದ್ದೀರಾ?” ಎಂದು ಜೆಡಿಎಸ್ ಪ್ರಶ್ನಿಸಿದೆ.
“ಬಿಜೆಪಿ ಸರ್ಕಾರ ರಾಜ್ಯದಾದ್ಯಂತ ಕ್ರಿಮಿನಲ್ಗಳನ್ನು ಮೂಳೆ ಹಾಕಿ ಸಾಕಿದ ಪರಿಣಾಮ, ರಾಜ್ಯವೀಗ ‘ಜಂಗಲ್ ರಾಜ್ಯ’ವಾಗಿದೆ” ಎಂದು ಕಿಡಿಕಾರಿದೆ.
“ಕೊಲೆ ಆರೋಪಿ ಮಾಜಿ ಸಿಎಂಗೆ ಬೆದರಿಕೆ ಹಾಕುತ್ತಾನೆಂದರೆ, ಜನಸಾಮಾನ್ಯರ ಗತಿಯೇನು? ಸರ್ವ ಜನಾಂಗದ ಶಾಂತಿಯ ತೋಟವನ್ನು ಓಟುಗಳಿಗಾಗಿ ಒಡೆದಿದ್ದೆ ಸರ್ಕಾರದ ಸಾಧನೆ. ಜನರಿಗೆ ರಾಜ್ಯ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇಲ್ಲವಾಗುತ್ತಿದೆ. ಇನ್ನಾದರೂ ಪೊಲೀಸ್ ಇಲಾಖೆ ತನ್ನ ಘನತೆ ಕಾಪಾಡಿಕೊಳ್ಳಲಿ, ಕ್ರಿಮಿನಲ್ಗಳನ್ನು ಜೈಲಿಗೆ ತಳ್ಳಿ” ಎಂದು ಜೆಡಿಎಸ್ ಆಗ್ರಹಿಸಿದೆ.