ಕೆ.ಜಿ.ಎಫ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 4.05 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹಂಚಾಳ ಬಳಿ ಇರುವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ರೆಸಾರ್ಟ್ನ ವಿಲ್ಲಾ ದಲ್ಲಿರಿಸಿದ್ದ ಹಣ ಪತ್ತೆಯಾಗಿದ್ದು, ಹಣವನ್ನು ವಶಕ್ಕೆ ಪಡೆದಿದ್ದಾರೆ. ಹಣ ಪತ್ತೆಯಾದ ವಿಲ್ಲಾ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬುವವರಿಗೆ ಸೇರಿದ್ದೆಂದು ಪೊಲೀಸರು ತಿಳಿಸಿದ್ದಾರೆ.
ಬಂಗಾರಪೇಟೆ ಪಂಚಾಯತಿವಾರು ಹೆಸರು ಬರೆದು ಬಂಡಲ್ ಮಾಡಿಟ್ಟಿದ್ದ ಹಣ ಇದಾಗಿದ್ದು, ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದು ಎಂದು ತಿಳಿದುಬಂದಿದೆ. ಕೆಜಿಎಫ್ ಎಸ್ಪಿ ಧರಣಿದೇವಿ ಖಾಸಗಿ ಕಾರ್ನಲ್ಲಿ ತೆರಳಿ, ದಾಳಿ ಮಾಡಿದ್ದಾರೆ.
ದಾಳಿ ವಿಚಾರ ತಿಳಿಯುತ್ತಿದ್ದಂತೆ ರಮೇಶ್ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಚುನಾವಣಾ ವೀಕ್ಷಕರ ತಂಡ ಮೊಕ್ಕಾಂ ಹೂಡಿದೆ. ತಾಲ್ಲೂಕು ಚುನಾವಣಾಧಿಕಾರಿಗಳು, ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಹಣವನ್ನ ವಶಕ್ಕೆ ಪಡೆದಿದ್ದಾರೆ.