- 2019-20ರಲ್ಲಿ ಹಿರಿಯ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಬಿಬಿಎಂಪಿ ಕಮಿಷನರ್ ಆಗಿದ್ದರು
- ಕೊಳವೆ ಬಾವಿಗಳ ಕಾಮಗಾರಿಗೆ ಬಿಬಿಎಂಪಿಯು ₹969 ಕೋಟಿ ಬಿಡುಗಡೆ ಮಾಡಿದೆ: ಬ್ರಿಜೇಶ್ ಕಾಳಪ್ಪ
ಕೊರಟಗೆರೆ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಆಗಿದ್ದ ಸಮಯದಲ್ಲಿ ಮೂರು ಪ್ರಮುಖ ಅಕ್ರಮಗಳು ನಡೆದಿವೆ. ಸುಮಾರು ₹1300 ಕೋಟಿ ಮೊತ್ತದ ಅಕ್ರಮಗಳು ನಡೆದಿವೆ. ಇವೆಲ್ಲವುಗಳ ತನಿಖೆಗಾಗಿ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ” ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ತಿಳಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಬ್ರಿಜೇಶ್ ಕಾಳಪ್ಪ, “2019-20ರಲ್ಲಿ ಹಿರಿಯ ಐಎಎಸ್ ಅಧಿಕಾರಿ ಅನಿಲ್ ಕುಮಾರ್ರವರು ಬಿಬಿಎಂಪಿ ಕಮಿಷನರ್ ಆಗಿದ್ದರು. ಈಗ ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಅವರು ಬಿಬಿಎಂಪಿ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ಮೂರು ಪ್ರಮುಖ ಅಕ್ರಮಗಳು ನಡೆದಿವೆ” ಎಂದರು.
“ಸ್ಮಾರ್ಟ್ ಪಾರ್ಕಿಂಗ್ಗೆ ₹31.6 ಕೋಟಿ ಮಂಜೂರು ಮಾಡಲಾಗಿತ್ತು. ಅಷ್ಟು ಹಣ ಖರ್ಚಾಗದಿದ್ದರೂ ಹೆಚ್ಚುವರಿಯಾಗಿ ₹2 ಕೋಟಿ ಬಿಡುಗಡೆಯಾಗಿದೆ. ಅನಿಲ್ ಕುಮಾರ್ರವರು ಗುತ್ತಿಗೆ ಸಂಸ್ಥೆಯಾದ ಬಿಲ್ಡಿಂಗ್ಸ್ ಕಂಟ್ರೋಲ್ ಸೊಲ್ಯೂಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಇದನ್ನು ಬಿಡುಗಡೆ ಮಾಡಿಸಿದ್ದಾರೆ” ಎಂದು ಆರೋಪಿಸಿದರು.
“ಮಳೆ ನೀರಿನ ಹೂಳು ತೆಗೆಯುವ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ. ಎಂಟು ವಲಯಗಳ ಗುತ್ತಿಗೆಯನ್ನು ಮೆಸರ್ಸ್ ಯೋಗ ಅಂಡ್ ಕಂಪನಿ ಎಂಬ ಒಂದೇ ಸಂಸ್ಥೆಗೆ ₹36 ಕೋಟಿ ಮೊತ್ತಕ್ಕೆ ನೀಡಲಾಗಿದೆ. ಈ ಕಾಮಗಾರಿ ಸರಿಯಾಗಿ ನಡೆಯದಿರುವುದರಿಂದ ಬೆಂಗಳೂರಿನಲ್ಲಿ ಪ್ರವಾಹ ನೋಡಬೇಕಾಯಿತು. ಅಗತ್ಯಕ್ಕಿಂತ ಹೆಚ್ಚು ಹಣ ಬಿಡುಗಡೆ ಮಾಡಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮದುವೆ, ಧಾರ್ಮಿಕ ಕಾರ್ಯಕ್ರಮಗಳ ದುರ್ಬಳಕೆ ಬಗ್ಗೆ ಕ್ರಮ: ಜಿಲ್ಲಾ ಚುನಾವಣಾಧಿಕಾರಿ
“ಕೊಳವೆ ಬಾವಿಗಳ ಕಾಮಗಾರಿಗೆ ಬಿಬಿಎಂಪಿಯು ₹969 ಕೋಟಿ ಬಿಡುಗಡೆ ಮಾಡಿದೆ. ಇಷ್ಟು ದೊಡ್ಡ ಪ್ರಮಾಣದ ಹಣವು ಹೇಗೆ ಬಳಕೆಯಾಗಬೇಕು ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು. ಇದರಲ್ಲಿ ಒಂದೇ ಕಡೆ ₹49 ಕೋಟಿ ಖರ್ಚು ಮಾಡಿರುವುದೂ ಇದೆ. ಇದಲ್ಲದೇ, ಕೋವಿಡ್ ಚಿಕಿತ್ಸೆಗಾಗಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಯಲಯದಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲಾಗಿತ್ತು. ಅಲ್ಲಿಗೆ ಹಾಸಿಗೆ ಮುಂತಾದವುಗಳಿಗೆ ಕೋಟ್ಯಾಂತರ ಹಣ ಖರ್ಚು ಮಾಡಿರುವುದರಲ್ಲಿಯೂ ಭಾರೀ ಪ್ರಮಾಣದ ಅಕ್ರಮ ನಡೆದಿದೆ” ಎಂದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷರಾದ ವಿಶ್ವನಾಥ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಉಪಸ್ಥಿತರಿದ್ದರು.