- ವಿವಾದ ಹುಟ್ಟಿಸಿದ ಸಿದ್ದರಾಮಯ್ಯ ಹೇಳಿಕೆ
- ಸ್ಪಷ್ಟೀಕರಣ ನೀಡಿದ ಮಾಜಿ ಮುಖ್ಯಮಂತ್ರಿ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವಿಚಾರದಲ್ಲಿ ತಾವು ನೀಡಿದ್ದರೆನ್ನಲಾದ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದೆ. ಅಲ್ಲಿ ನಾನು ಹಾಗೂ ಶಿವಕುಮಾರ್ ಸಿಎಂ ಸ್ಥಾನದ ಆಕಾಂಕ್ಷಿಗಳು ಎಂದು ಹೇಳಿದ್ದೆ. ಅದನ್ನು ಬಿಟ್ಟು ಬೇರೇನನ್ನೂ ನಾನು ಹೇಳಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಿನಿಂದಿದ್ದೇವೆ. ಇದನ್ನು ಒಡೆಯುವ ಹುನ್ನಾರವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದು ನನ್ನ ಕೊನೆಯ ಚುನಾವಣೆ ಹೀಗಾಗಿ ಮಗ ಯತೀಂದ್ರ ಸಿದ್ದರಾಮಯ್ಯ ನನಗೆ ಕ್ಷೇತ್ರ ಬಿಟ್ಟುಕೊಟ್ಟು ಚುನಾವಣೆಯಿಂದ ಹಿಂದೆ ಸರಿದಿದ್ದಾನೆ. ನನ್ನ ಬೆಂಬಲಿಗರು, ಹಿತೈಷಿಗಳು ನೀವು ಮತ್ತೊಮ್ಮೆ ಸಿಎಂ ಆಗಲೇಬೇಕು ಎಂದು ಬಯಸಿದ್ದಾರೆ. ಅವರ ಆಸೆಯಂತೆ ನಾನೂ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಇದನ್ನೇ ನಾನು ಸಂದರ್ಶನದ ವೇಳೆ ಸಿಎಂ ರೇಸ್ನಲ್ಲಿ ಇದ್ದೇನೆ ಎಂದಷ್ಟೇ ಹೇಳಿದ್ದೇನೆ ಎಂದು ವಿಪಕ್ಷ ನಾಯಕರು ತಿಳಿಸಿದರು.
ದಿನದ ಹಿಂದಷ್ಟೇ ಖಾಸಗಿ ಮಾಧ್ಯಮವೊಂದಕ್ಕೆ ವಿಪಕ್ಷ ನಾಯಕರು ಸಂದರ್ಶನ ನೀಡಿದ್ದರು. ಈ ವೇಳೆ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶವನ್ನು ಹೈಕಮಾಂಡ್ ನೀಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದರೆಂದು ಆ ಮಾಧ್ಯಮ ವರದಿ ಮಾಡಿತ್ತು.
ಈ ಸುದ್ದಿ ಓದಿದ್ದೀರಾ?:ಬಿಜೆಪಿಗೆ ಟಿಕೆಟ್ ಆಕಾಂಕ್ಷಿಗಳ ತಲೆ ಬಿಸಿ; ಅಭ್ಯರ್ಥಿಗಳ ಪಟ್ಟಿ ಶಿಫಾರಸಿಗೆ ಇನ್ನಿಲ್ಲದ ಕಸರತ್ತು
ದೆಹಲಿ ಭೇಟಿ;
ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ಇಂದು ನವದೆಹಲಿಯಲ್ಲಿ ನಡೆಯಲಿದೆ.
ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಇತರ ಕಾಂಗ್ರೆಸ್ ನಾಯಕರುಗಳು ದೆಹಲಿಗೆ ತೆರಳಿದ್ದಾರೆ. ಈ ವೇಳೆ ತಮ್ಮ ಎರಡನೇ ಕ್ಷೇತ್ರ ಕೋಲಾರ ಸ್ಪರ್ಧೆ ಬಗೆಗೂ ಮಾಜಿ ಸಿಎಂ ಹೈಕಮಾಂಡ್ ನಿರ್ಧಾರ ಕೇಳಲಿದ್ದಾರೆ ಎನ್ನಲಾಗಿದೆ.
ಉಳಿದಂತೆ ಇನ್ನೆರಡು ದಿನಗಳಲ್ಲಿ ಉಮೇದುವಾರರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳನ್ನು ಹೊಂದಿರುವ ಹಾಗೂ ಇನ್ನೂ ಹೆಸರು ಅಂತಿಮಗೊಳಿಸಲು ಸಾಧ್ಯವಾಗದೇ ಇರುವ ಕ್ಷೇತ್ರಗಳ ಬಗ್ಗೆ ಕಮಿಟಿ ಚರ್ಚೆ ನಡೆಸಲಿದೆ.