- ಕರ್ನಾಟಕವನ್ನು ಶಕ್ತಿಶಾಲಿ ರಾಜ್ಯವಾಗಿಸುವ ಗುರಿ: ಬಸವರಾಜ ಬೊಮ್ಮಾಯಿ
- ರೈತ ಹಾಗೂ ಗ್ರಾಮೀಣ ಜನರ ಶ್ರೇಯೋಭಿವೃದ್ದಿ ಪ್ರಣಾಳಿಕೆ ಎಂದ ಸಿಎಂ
ಜನರ ಭಾವನೆ ಹಾಗೂ ಧ್ವನಿಯನ್ನು ಗ್ರಹಿಸಿ ಕರ್ನಾಟಕದಲ್ಲಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರೊಂದಿಗೆ ಅವರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಅವರು, “ಕೋವಿಡ್ ಬಗ್ಗೆ ನಾವು ಯಾರೂ ಯೋಚಿಸಿರಲಿಲ್ಲ. ಅಲ್ಲಿನ ಏಳುಬೀಳಿನ ಅನುಭವದ ಆಧಾರದ ಮೇಲೆ ಈ ಪ್ರಣಾಳಿಕೆ ಮಾಡಿದ್ದೇವೆ” ಎಂದರು.
“ಕೃಷಿಗೆ ಪ್ರಣಾಳಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ರೈತರಿಗೆ ಈಗಾಗಲೇ ಬಜೆಟ್ನಲ್ಲಿ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ಇದರ ಜೊತೆಗೆ ಒಂದು ಸಾವಿರ ಕೃಷಿ ಉತ್ಪಾದನಾ ಕೇಂದ್ರಗಳನ್ನು ತೆರೆಯುವುದು, ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುವ ಸಂಕಲ್ಪ, ಸಿರಿ ಧಾನ್ಯಕ್ಕೆ ಅತಿ ಹೆಚ್ಚು ಒತ್ತುಕೊಡುವ ಕೆಲಸ ಮಾಡಲಾಗಿದೆ” ಎಂದು ಸಿಎಂ ಹೇಳಿದರು.
“ನಗರ ಪ್ರದೇಶದಲ್ಲಿ 5 ಲಕ್ಷ ಮನೆ, ಗ್ರಾಮೀಣ ಪ್ರದೇಶಗಳಲ್ಲಿ 10 ಲಕ್ಷ ಮನೆ ನಿರ್ಮಾಣ ಮಾಡುವ ಯೋಜನೆಯನ್ನು ಉನ್ನತೀಕರಿಸಿದ್ದೇವೆ. ಪ್ರತಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೀಡಲಾಗುತ್ತದೆ” ಎಂದು ಬೊಮ್ಮಾಯಿ ತಿಳಿಸಿದರು.
“ಪಡಿತರದಲ್ಲಿ ಅಕ್ಕಿಯ ಜೊತೆಗೆ ಐದು ಕೆಜಿ ಸಿರಿ ಧಾನ್ಯ ನೀಡಲಾಗುವುದು. ಅರ್ಧ ಲೀಟರ್ ಹಾಲು ಕೊಡಲಾಗುವುದು. ಬಿಪಿಎಲ್ ಕಾರ್ಡ್ದಾರರಿಗೆ ಆಯುಷ್ಮಾನ್ ಭಾರತ ಯೋಜನೆ ಅಡಿ 10 ಲಕ್ಷ ರೂ ವಿಮೆ ನೀಡಲಾಗುವುದು” ಎಂದ ಸಿಎಂ “ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ” ಎಂದರು.
ಈ ಸುದ್ದಿ ಓದಿದ್ದೀರಾ? : ಸತ್ಯ ಎದುರಿಸುವ ತಾಕತ್ತು ಮೋದಿ ಸರ್ಕಾರಕ್ಕೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಕಿಡಿ
“ಜನರಿಂದ ಜನರಿಗೋಸ್ಕರ ಇರುವ ಪ್ರಜಾ ಪ್ರಣಾಳಿಕೆ ಇದಾಗಿದೆ. ಕರ್ನಾಟಕವನ್ನು ಶಕ್ತಿಶಾಲಿ ರಾಜ್ಯವಾಗಿಸುವ ಗುರಿ ಹೊಂದಲಾಗಿದೆ. ಐಟಿ ಬಿಟಿ, ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದು ಜನರ ಜನಪರ ಪ್ರಣಾಳಿಕೆ. ಇದನ್ನು ಕರ್ನಾಟಕದ ಜನ ಗಮನಿಸಿ ಬಿಜೆಪಿಗೆ ಬೆಂಬಲ ಕೊಡುತ್ತಾರೆ ಎನ್ನುವ ನಂಬಿಕೆ ಇದೆ” ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.