ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯದ ಮತ ಬ್ಯಾಂಕ್ ಅನ್ನು ಸೆಳೆಯುವಲ್ಲಿ ಕೊನೆಗೂ ವಿಫಲರಾಗಿದ್ದಾರೆ. ಕೊನೆ ಕ್ಷಣದಲ್ಲಿ ಹೂಡಿದ ಮೀಸಲಾತಿ ರಾಜಕಾರಣದ ಬಾಣಕ್ಕೆ ಬಿಜೆಪಿಯೇ ಬಲಿಯಾಗಿದೆ
ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂತ ಪ್ರಕಟವಾಗಿದ್ದು, ರಾಜ್ಯದ ಮತದಾರರು ಕಾಂಗ್ರೆಸ್ಗೆ ದೊಡ್ಡ ಮಟ್ಟದ ಗೆಲುವನ್ನು ಉಡುಗೊರೆಯಾಗಿ ನೀಡಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಲಾಭ ಹುಡುಕಲು ಹೊರಟಿದ್ದ ಬಿಜೆಪಿಗೆ ಮುಖಭಂಗ ಆಗಿದೆ.
ಚುನಾವಣೆಗೂ ಮುನ್ನ ಮುಸ್ಲಿಂ ಸಮುದಾಯದ ಶೇ. 4ರಷ್ಟು ಮೀಸಲಾತಿ ಪ್ರಮಾಣ ರದ್ದು ಮಾಡಿ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಸಮವಾಗಿ ಶೇ.2ರಷ್ಟು ಮೀಸಲಾತಿ ಹೆಚ್ಚಿಸಿ ಮತ ಬ್ಯಾಂಕ್ ಸೆಳೆಯಲು ಬಿಜೆಪಿ ಮುಂದಾಗಿತ್ತು. ಆದರೆ, ಪಂಚಮಸಾಲಿ ಸಮುದಾಯ ಬಿಜೆಪಿಯ ಕೊನೆ ಕ್ಷಣದ ನಾಟಕವನ್ನು ಅರ್ಥ ಮಾಡಿಕೊಂಡು, ಏನು ಮಾಡಬೇಕು ಅದನ್ನೇ ಮಾಡಿದೆ.
ಈ ಬಾರಿಯ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯದಿಂದ ಸುಮಾರು 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೂರು ಪಕ್ಷಗಳಿಂದ ಕಣದಲ್ಲಿದ್ದರು. ಮೀಸಲಾತಿಯ ಲಾಭದ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಪಂಚಮಸಾಲಿ ಸಮುದಾಯದ ಕೇವಲ 9 ಅಭ್ಯರ್ಥಿಗಳನ್ನು, ಕಾಂಗ್ರೆಸ್ನ 28 ಪಂಚಮಸಾಲಿ ಅಭ್ಯರ್ಥಿಗಳನ್ನು ಹಾಗೂ ಜೆಡಿಎಸ್ನ ಒಬ್ಬರನ್ನು ಗೆಲ್ಲಿಸುವ ಮೂಲಕ, ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ.
ಆ ಮೂಲಕ ತಮ್ಮ ಆದ್ಯತೆಗಳು ಬೇರೆಯೇ ಇವೆ ಎಂಬುದನ್ನು ಪಂಚಮಸಾಲಿ ಸಮುದಾಯ ನೇರವಾಗಿ ಬಿಜೆಪಿಗೆ ಉತ್ತರಿಸಿದೆ. ಅಂತಿಮವಾಗಿ ಬಿಜೆಪಿ ಪಕ್ಷ ಮುಖ್ಯ ಅಲ್ಲ, ಲಿಂಗಾಯತರು ಬಿಜೆಪಿಯ ಕಾಲಾಳುಗಳಲ್ಲ ಎಂಬುದನ್ನು ಸಾರಿ ಹೇಳಿದೆ.
ಮೀಸಲಾತಿ ಪ್ರಮಾಣ ಹೆಚ್ಚಳವಾಗುತ್ತಿದ್ದಂತೆ ಸುದೀರ್ಘವಾಗಿ ಹೋರಾಟ ಮಾಡಿಕೊಂಡು ಬಂದ ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರದ ನಿಲುವನ್ನು ಸ್ವಾಗತಿಸಿದ್ದರು. ಆದರೆ, ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯ ಮೀಸಲಾತಿಗಿಂತಲೂ ತಮ್ಮ ಆದ್ಯತೆಗಳು ಬೇರೆ ಇವೆ ಎಂಬುದನ್ನು ಮನಗಂಡು, ಹೊಸ ಅವಕಾಶವೊಂದನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಈ ಸಮುದಾಯ ನೀಡಿದಂತೆ ಕಾಣುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯದ ಮತ ಬ್ಯಾಂಕ್ ಅನ್ನು ಸೆಳೆಯುವಲ್ಲಿ ಕೊನೆಗೂ ವಿಫಲರಾಗಿದ್ದಾರೆ. ತಾವು ಹೂಡಿದ ಮೀಸಲಾತಿ ರಾಜಕಾರಣದ ಬಾಣಕ್ಕೆ ಕೊನೆಗೂ ಬಿಜೆಪಿಯೇ ಬಲಿಯಾಗಿದೆ.
ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದು ಸವದಿ ಪ್ರಮುಖವಾಗಿ ಬಿಜೆಪಿಯಿಂದ ಗೆದ್ದಿದ್ದು, ಇವರು ಸಾಮಾನ್ಯವಾಗಿ ಗೆಲ್ಲುವ ಮುಖಗಳೇ ಆಗಿವೆ. ಇನ್ನು ಕಾಂಗ್ರೆಸ್ನಲ್ಲಿ ಕೂಡಲಸಂಗಮ ಸ್ವಾಮೀಜಿಯ ನಿಲುವನ್ನು ವಿರೋಧಿಸಿ ಹೊರಬಂದಿದ್ದ ಹುನಗುಂದ ಕ್ಷೇತ್ರದ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ. ಹಾಗೆಯೇ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಗೆಲುವು ಕಂಡಿದ್ದಾರೆ.