ಆರ್ಎಸ್ಎಸ್ನ ಕೆಲವು ಕುತಂತ್ರಿಗಳು ನನ್ನ ಹೆಸರಲ್ಲಿ ನಕಲಿ ಪತ್ರವನ್ನು ಸೃಷ್ಟಿಮಾಡಿ ನನಗೆ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ನಡುವೆ ಭಿನ್ನಾಭಿಪ್ರಾಯಗಳನ್ನು ಉಂಟುಮಾಡಲು ಅಥವಾ ಭಿನ್ನಾಭಿಪ್ರಾಯಗಳು ಇವೆ ಎಂದು ಅಪಪ್ರಚಾರ ಮಾಡಲು ಹುನ್ನಾರ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ಹೆಸರಿನಲ್ಲಿ ಬರೆದಿರುವ ಪತ್ರವನ್ನು ತಮ್ಮದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
“ನನ್ನ ಹೆಸರಿನಲ್ಲಿ ಎಐಸಿಸಿ ಅಧ್ಯಕ್ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಕಲಿ ಪತ್ರ ಬರೆಯಲಾಗಿದೆ. ಇದು ನಾನು ಬರೆದ ಪತ್ರ ಅಲ್ಲ. ಕೆಲವು ಕುತಂತ್ರಿಗಳು ನಕಲಿ ಪತ್ರವನ್ನು ಸೃಷ್ಟಿಮಾಡಿದ್ದಾರೆ. ನಾನು ಮತ್ತೊಮ್ಮೆ ಸ್ಪಷ್ಟಪಡಿಸಲಿಕ್ಕೆ ಬಯಸುತ್ತೇನೆ, ‘ಇದು ನಕಲಿ ಪತ್ರ, ನಾನು ಬರೆದ ಪತ್ರವಲ್ಲ’. ಇದನ್ನು ಆರ್.ಎಸ್.ಎಸ್ ನ ಕುತಂತ್ರಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಪತ್ರವನ್ನು ತಿರಸ್ಕರಿಸಬೇಕು” ಎಂದು ನಾಡಿನ ಜನತೆಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಚುನಾವಣಾ ಆಯೋಗ ಮತ್ತು ಪೊಲೀಸರಿಗೆ ದೂರು ನೀಡುತ್ತೇನೆ. ಈ ನಕಲಿ ಪತ್ರದ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಲು ಮತ್ತು ಅಂಥವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ದೂರು ಸಲ್ಲಿಸುತ್ತೇನೆ” ಎಂದು ತಿಳಿಸಿದ್ದಾರೆ.
2022ರಲ್ಲೂ ಇದೇ ಮಾದರಿಯ ನಕಲಿ ಪತ್ರವೊಂದನ್ನು ಸಿದ್ದರಾಮಯ್ಯ ಹೆಸರಲ್ಲಿ ಸೋನಿಯಾ ಗಾಂಧಿ ಅವರಿಗೆ ಬರೆಯಲಾಗಿತ್ತು. ಈಗ ಆ ಪತ್ರವನ್ನೇ ತಿದ್ದಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆಯಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಈ ಬಗ್ಗೆ ದೂರು ನೀಡಿದ್ದರು.