- ಕೋವಿಡ್ ಲಸಿಕೆ ಕೊಟ್ಟಿದ್ದರಿಂದ ನಾವು ಕೋವಿಡ್ ಮುಕ್ತರಾಗಿದ್ದೇವೆ
- ಪ್ರವಾಹ ಬಂದಾಗ ಬೆಳೆ ಹಾನಿಗೆ ಡಬಲ್ ಪರಿಹಾರ ಕೊಟ್ಟಿದ್ದೇವೆ
ಇದು ಕನ್ನಡ ನಾಡಿನ ಭವಿಷ್ಯ ನಿರ್ಧರಿಸುವ ಚುನಾವಣೆ. ನಿಮ್ಮ ಉತ್ಸಾಹ ನೋಡಿದರೆ ಕನಕಪುರದಲ್ಲಿ ಬಿಜೆಪಿಯ ಕಮಲ ಅರಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಕನಕಪುರದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಪರ ಪ್ರಚಾರ ನಡೆಸಿದ ಬಳಿಕ ಮಾತನಾಡಿ, ಕನಕಪುರದಲ್ಲಿ ಆರ್ ಅಶೋಕ ಅವರ ಕೈ ಬಲ ಪಡಿಸಿ, ಗೆಲ್ಲಿಸಿಕೊಂಡು ಬನ್ನಿ. ಕನಕಪುರ ಕ್ಷೇತ್ರಕ್ಕೆ ಎಷ್ಟು ಅನುದಾನ ಬೇಕೋ, ಅಷ್ಟು ನಾನು ಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಅಶ್ವತ್ಥ್ ನಾರಾಯಣ್ ಅವರು ಈ ಭಾಗದಲ್ಲಿ ಸಾಕಷ್ಟು ಪಕ್ಷ ಸಂಘಟನೆ ಮಾಡಿದ್ದಾರೆ. ಇಲ್ಲಿ ಶಕ್ತಿ ಬರಬೇಕಾದರೆ ಸಾಮ್ರಾಟ್ ಅಶೊಕ್ ಅವರೇ ಬರಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು.
ಅಶೋಕ್ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಕ್ರಾಂತಿ ಮಾಡಿದ್ದೇವೆ. ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗ್ರಾಮಗಳಲ್ಲಿನ ಜನರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಇಂತಹ ವ್ಯಕ್ತಿ ಇಲ್ಲಿ ಶಾಸಕರಾಗಬೇಕೊ? ಬೇಡ್ವೊ. ನಾನು ಸಿಎಂ ಆದ ತಕ್ಷಣ ವಿದ್ಯಾನಿಧಿ ಯೋಜನೆ ಕೊಟ್ಟಿದ್ದೇನೆ. ಇದರಿಂದ 11 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ ಎಂದು ಹೇಳಿದರು.
ಕಾಂಗ್ರೆಸ್ಗೆ ಈಗ ಗ್ಯಾರೆಂಟಿ ಇಲ್ಲ
ಕಾಂಗ್ರೆಸ್ ನವರು ಗ್ಯಾರೆಂಟಿ ಅಂತ ಬರುತ್ತಿದ್ದಾರೆ. ಯಾವುದು ಮಾರಾಟವಾಗುವುದಿಲ್ಲವೋ, ಅದಕ್ಕೆ ಗ್ಯಾರೆಂಟಿ ಕೊಡುತ್ತಾರೆ. ಕಾಂಗ್ರೆಸ್ಗೆ ಈಗ ಗ್ಯಾರೆಂಟಿ ಇಲ್ಲ. ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಈಗ ಹೇಳುತ್ತಿದ್ದಾರೆ. ನಾವು 2013 ರಲ್ಲಿಯೇ ಕೊಡುತ್ತಿದ್ದೇವೆ. ಅದನ್ನು ಕಡಿಮೆ ಮಾಡಿದವರು ಇವರೇ ಎಂದರು.
ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಅವರು ಭ್ರಷ್ಟಾಚಾರ ಮಾಡಿ ನಮ್ಮ ಕಡೆ ಬೆರಳು ತೋರುತ್ತಿದ್ದಾರೆ. ಆದರೆ ಮೂರು ಬೆರಳು ಅವರ ಕಡೆ ತೋರಿಸುತ್ತವೆ ಎಂದು ತಿರುಗೇಟು ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಬಂಧನಕ್ಕೆ ದಲಿತ ಮುಖಂಡರ ಆಗ್ರಹ
ಕಾಂಗ್ರೆಸ್ ಸಮಾಜ ಒಡೆಯುವ ಪಕ್ಷ. ಸಮುದಾಯಗಳನ್ನು ಒಡೆದು ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಸಮಾಜವನ್ನೂ ಒಗ್ಗೂಡಿಸುವುದು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಹಾಗಾಗಿ ಸಮಾಜ ಒಡೆಯುವವರು ಬೇಕೊ, ಸಮಾಜ ಒಗ್ಗೂಡಿಸುವ ಬಿಜೆಪಿ ಬೇಕೋ? ನಿರ್ಧರಿಸಿ ಎಂದರು.
ಡಬಲ್ ಎಂಜಿನ್ ಸರ್ಕಾರ, ಮೋದಿಯವರು ವ್ಯಾಕ್ಸಿನೇಷನ್ ಕೊಟ್ಟಿದ್ದರಿಂದ ನಾವೆಲ್ಲ ಕೋವಿಡ್ ಮುಕ್ತರಾಗಿದ್ದೇವೆ. ಕಾಂಗ್ರೆಸ್ ನವರು ಲಸಿಕೆ ವಿರುದ್ಧ ಅಪಪ್ರಚಾರ ಮಾಡಿದ್ದರು. ಪ್ರವಾಹ ಬಂದಾಗ ಬೆಳೆ ಹಾಣಿಗೆ ಡಬಲ್ ಪರಿಹಾರ ಕೊಟ್ಟಿದ್ದೇವೆ ಎಂದು ಸಮರ್ಥಿಸಿಕೊಂಡರು.