ಕರ್ನಾಟಕ ರಾಜಕೀಯ ಚಿತ್ರಣವನ್ನು ಗಮನಿಸಿದರೆ 1960ರ ದಶಕದಿಂದ ರಾಜ್ಯದ ಎರಡು ಕ್ಷೇತ್ರಗಳು ಒಂದು ಕುಟುಂಬದ ಹಿಡಿತದಲ್ಲಿವೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರ 1962ರಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬದ ಹಿಡಿತದಲ್ಲಿದೆ. 1962ರಿಂದ 1985ರವರೆಗೂ ಸತತ ಆರು ಚುನಾವಣೆಗಳಲ್ಲಿ ಹೆಚ್ ಡಿ ದೇವೇಗೌಡರು ಸ್ವತಂತ್ರ, ಕಾಂಗ್ರೆಸ್ ಹಾಗೂ ಜನತಾ ಪರಿವಾರದಿಂದ ಶಾಸಕರಾಗಿದ್ದರು. 1989ರಲ್ಲಿ ಮೊದಲ ಬಾರಿಗೆ ದೇವೇಗೌಡ ಅವರು ಸೋತ ನಂತರ ಜಿ ಪುಟ್ಟಸ್ವಾಮಿಗೌಡ ಶಾಸಕರಾಗಿದ್ದರು. ನಂತರ 1994ರಲ್ಲಿ ದೇವೇಗೌಡರ ಪುತ್ರ ಹೆಚ್ ಡಿ ರೇವಣ್ಣ ಗೆಲುವು ಸಾಧಿಸಿದರು.
1999ರಲ್ಲಿ ಕಾಂಗ್ರೆಸಿನಿಂದ ಎ ದೊಡ್ಡೇಗೌಡ ಅವರು ರೇವಣ್ಣ ಅವರನ್ನು ಸೋಲಿಸಿ ಶಾಸಕರಾಗಿದ್ದರು. ನಂತರದ 2004ರ ಚುನಾವಣೆಯಿಂದ 2018ರವರೆಗೂ ನಾಲ್ಕು ಚುನಾವಣೆಗಳಲ್ಲೂ ರೇವಣ್ಣ ಅವರೇ ಆಯ್ಕೆಯಾಗುತ್ತಿದ್ದಾರೆ. ಈ ಕ್ಷೇತ್ರದಲ್ಲಿ ದೇವೇಗೌಡ ಅವರ ಕುಟುಂಬ ಒಟ್ಟು 11 ಬಾರಿ ಗೆಲುವು ಸಾಧಿಸಿದೆ. 2023ರ ಚುನಾವಣೆಯಲ್ಲಿಯೂ ಹೆಚ್ ಡಿ ರೇವಣ್ಣ ಸ್ಪರ್ಧಿಸಿದ್ದಾರೆ.
ಸೊರಬ ಕ್ಷೇತ್ರ
ಶಿವಮೊಗ್ಗದ ಸೊರಬ ಕ್ಷೇತ್ರ 1967ರರಿಂದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಕುಟುಂಬದ ಹಿಡಿತದಲ್ಲಿದೆ. ಬಂಗಾರಪ್ಪನವರು 1967ರಿಂದ 1994ರವರೆಗೂ ಸತತ 7 ಚುನಾವಣೆಗಳಲ್ಲಿ ಕಾಂಗ್ರೆಸ್, ಜನತಾ ಪಕ್ಷ ಸೇರಿದಂತೆ ವಿವಿಧ ಪಕ್ಷಗಳಿಂದ ಜಯ ಗಳಿಸಿದ್ದರು. 1996ರಿಂದ 2004ರವರೆಗೆ ಬಂಗಾರಪ್ಪನವರ ಪುತ್ರ ಕುಮಾರ್ ಬಂಗಾರಪ್ಪ ಮೂರು ಬಾರಿ ಕಾಂಗ್ರೆಸಿನಿಂದ ಆಯ್ಕೆಯಾಗಿದ್ದರು. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹರತಾಳು ಹಾಲಪ್ಪ ಒಮ್ಮೆ ಮಾತ್ರ ಸೊರಬವನ್ನು ಕಸಿದುಕೊಂಡಿದ್ದರು. 2013ರಲ್ಲಿ ಜೆಡಿಎಸ್ನಿಂದ ಬಂಗಾರಪ್ಪನವರ ಮತ್ತೊಬ್ಬ ಪುತ್ರ ಮಧು ಬಂಗಾರಪ್ಪ ಶಾಸಕರಾಗಿದ್ದರು. 2018ರಲ್ಲಿ ಕುಮಾರ್ ಬಂಗಾರಪ್ಪ ಬಿಜೆಪಿಯಿಂದ ಆಯ್ಕೆಯಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿಯೂ ಬಂಗಾರಪ್ಪನವರ ಇಬ್ಬರು ಪುತ್ರರು ಸ್ಪರ್ಧಿಸಿದ್ದಾರೆ. ಮಧು ಬಂಗಾರಪ್ಪ ಕಾಂಗ್ರೆಸ್ನಿಂದ, ಕುಮಾರ್ ಬಂಗಾರಪ್ಪ ಬಿಜೆಪಿಯಿಂದ ಕಣದಲ್ಲಿದ್ದಾರೆ.