ಇತ್ತೀಚೆಗೆ, ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ, ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಟಿಕೆಟ್ಅನ್ನು ವಿಜುಗೌಡ ಪಾಟೀಲ್ ಅವರಿಗೆ ನೀಡಿತ್ತು. ಈ ಸಂದರ್ಭದಲ್ಲಿ ವಿಜುಗೌಡ ಅವರ ಪುತ್ರ ಸಮರ್ಥಗೌಡ ಗಾಳಿಯಲ್ಲಿ ಗುಂಡುಹಾರಿಸಿ ಸಂಭ್ರಮಿಸಿದ್ದರು ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಕೆಪಿಸಿಸಿ ವಕ್ತಾರ ಸಂಗಮೇಶ್ ಅವರು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. “ಬಿಜೆಪಿ ಟಿಕೆಟ್ ಸಿಕ್ಕಿದ್ದಕ್ಕೆ ಗುಂಡು ಹಾರಿಸಿ ಸಂಭ್ರಮಿಸಿರುವ ಬಿಜೆಪಿ ಅಭ್ಯರ್ಥಿ ವಿಜುಗೌಡ ಮತ್ತು ಅವರ ಪುತ್ರನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
“ಸಂಪ್ರದಾಯ, ಸಂಸ್ಕೃತಿಗಳ ಬಗ್ಗೆ ಬೋಂಗುಬಿಡುವ ಬಿಜೆಪಿ ಮತ್ತು ಸಂಘಪರಿವಾರ ಗೂಂಡಾಗಳಿಗೆ ಟಿಕೆಟ್ ನೀಡಿದೆ. ಬಿಜೆಪಿಯ ನೈತಿಕ ಅಧಃಪಥನಕ್ಕೆ ವಿಜುಗೌಡ ಪಾಟೀಲರ ಗೂಂಡಾ ವರ್ತನೆ ಸಾಕ್ಷಿಯಾಗಿದೆ” ಎಂದು ಕಿಡಿಕಾರಿದ್ದಾರೆ.
“ವಿಜುಗೌಡ ಪಾಟೀಲ ಜನರ ಮುಂದೆ ಮೊಸೆಳೆ ಕಣ್ಣೀರು ಸುರಿಸುತ್ತಾರೆ. ಹಿಂದೆ ಗುಂಡು ಹಾರಿಸಿ ಸಂಭ್ರಮಿಸುತ್ತಾರೆ. ಗೂಂಡಾ ನಡವಳಿಕೆಯ ವಿಜುಗೌಡಗೆ ಟಿಕೆಟ್ ಕೊಡಿಸಿದ ಬಿ.ಎಸ್ ಯಡಿಯೂರಪ್ಪ, ಬಿ.ಎಲ್ ಸಂತೋಷ್ ಮತ್ತು ಟಿಕೆಟ್ ನೀಡಿರುವ ಪ್ರಧಾನಿ ಮೋದಿ, ಅಮಿತ್ ಶಾ ತಮ್ಮ ಅಭ್ಯರ್ಥಿಯ ಕೃತ್ಯದ ಬಗ್ಗೆ ಉತ್ತರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.