ವಿಜಯಪುರ ಜಿಲ್ಲೆ | ಎಂಟು ಕ್ಷೇತ್ರಗಳಲ್ಲೂ ಹಿಡಿತ ಹೊಂದಲು ಪೈಪೋಟಿಗಿಳಿದ ಮೂರು ಪಕ್ಷಗಳಲ್ಲಿ ಗೆಲುವು ಯಾರಿಗೆ?

Date:

ಕಳೆದ ಬಾರಿ ವಿಜಯಪುರ ಜಿಲ್ಲೆಯ ಎಂಟು ಮತಕ್ಷೇತ್ರಗಳ ಪೈಕಿ, ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್‌ ಎರಡು ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಈ ಬಾರಿ ಪ್ರತಿ ಕ್ಷೇತ್ರಗಳ ಮೇಲೂ ತಾವೇ ಹಿಡಿತ ಸಾಧಿಸಬೇಕು ಎಂಬ ಹಠದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪೈಪೋಟಿ ನಡೆಸಿವೆ. ವಿಜಯಪುರ ಜಿಲ್ಲೆಯ ಸದ್ಯದ ಚಿತ್ರಣ ಇಲ್ಲಿದೆ.

ಮೇ 10 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಆರು ದಿನ ಬಾಕಿ ಇದ್ದು, ವಿಜಯಪುರ ಜಿಲ್ಲೆಯಲ್ಲಿ ಚುನಾವಣೆ ಕಣ ರಂಗೇರಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಹಗಲಿರುಳು ಪ್ರಚಾರ ಕಾರ್ಯಕೈಗೊಂಡಿದ್ದಾರೆ.

ಬಹಿರಂಗ ಪ್ರಚಾರಕ್ಕೆ ನಾಲ್ಕು ದಿನ ಮಾತ್ರ ಬಾಕಿಯಿದ್ದು, ಇರುವ ಸಮಯದಲ್ಲೇ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಕ್ಷೇತ್ರಗಳ ಮೇಲೂ ತಾವೇ ಹಿಡಿತ ಸಾಧಿಸಬೇಕು ಎಂಬ ಹಠದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪೈಪೋಟಿ ನಡೆಸಿವೆ.

ಕಳೆದ ಬಾರಿ ವಿಜಯಪುರ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ, ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್‌ ಎರಡು ಕ್ಷೇತ್ರದಲ್ಲಿ ಗೆಲವು ಕಂಡಿದೆ. ಮುದ್ದೇಬಿಹಾಳ, ವಿಜಯಪುರ ನಗರ ಹಾಗೂ ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದರೆ, ಬಸವನ ಬಾಗೇವಾಡಿ, ಬಬಲೇಶ್ವರ ಹಾಗೂ ಇಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯ ಸಾಧಿಸಿತ್ತು. ನಾಗಠಾಣ ಮತ್ತು ಸಿಂಧಗಿ ಕ್ಷೇತ್ರವನ್ನು ಜೆಡಿಎಸ್‌ ವಶಪಡಿಸಿಕೊಂಡಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಳೆ ಮುಖ ಮತ್ತು ಹೊಸ ಮುಖದೊಂದಿಗೆ ಅಖಾಡಕ್ಕಿಳಿದಿರುವ ಮೂರು ಪಕ್ಷಗಳು ಆಯಾ ಕ್ಷೇತ್ರಗಳನ್ನು ವಶಪಡಿಸಿಕೊಳ್ಳಲು ಗುದ್ದಾಟ ನಡೆಸಿವೆ. ವಿಜಯಪುರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಹೇಗಿದೆ ನೋಡೋಣ.

ವಿಜಯಪುರ ನಗರ

ಪ್ರತಿ ಚುನಾವಣೆಯಲ್ಲೂ ಧರ್ಮಾಧಾರಿತ ರಾಜಕಾರಣದ ಅಖಾಡವಾಗುವ ವಿಜಯಪುರದಲ್ಲಿ ಬಿಜೆಪಿಯಿಂದ ಬಸನಗೌಡ ಪಾಟೀಲ ಯತ್ನಾಳ ಕಣದಲ್ಲಿ ಇದ್ದಾರೆ. ಕಾಂಗ್ರೆಸ್‌ನಿಂದ ಅಮಿತ್‌ ಮುಶ್ರಫ್‌ ಸ್ಪರ್ಧೆಯಲ್ಲಿ ಇದ್ದಾರೆ. ಜೆಡಿಎಸ್‌ನಿಂದ ಬಂದೇನವಾಜ್‌ ಸ್ಪರ್ಧಿಸಿದ್ದಾರೆ. ಆದರೆ, ಜೆಡಿಎಸ್​ ಅಭ್ಯರ್ಥಿ ನಡೆಯಿಂದಾಗಿ ಧರ್ಮ ರಾಜಕಾರಣ ಮತ್ತಷ್ಟು ಹೊಳಪು ಪಡೆದುಕೊಂಡಿದೆ. ಬಂದೇನವಾಜ್‌ ಕಣದಿಂದ ಹಿಂದೆ ಸರಿದು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಹಿಂದುತ್ವದ ಫೈರ್‌ಬ್ರ್ಯಾಂಡ್‌ ಖ್ಯಾತಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ವಿರುದ್ಧ ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಅಖಾಡಕ್ಕೆ ಇಳಿದಿದೆ ಎನ್ನುವ ವ್ಯಾಖ್ಯಾನ ನಡೆಯುತ್ತಿದೆ.

ಹಿಂದುತ್ವದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಎಲ್ಲ ಹಿಂದೂಗಳು ಒಗ್ಗಟ್ಟಾಗಿ ಎನ್ನುವ ಕೂಗು ವಿಜಯಪುರ ನಗರದಲ್ಲಿ ಬಲವಾಗಿ ಕೇಳಿಬಂದಿದ್ದು, ಧರ್ಮ ಆಧಾರಿತ ರಾಜಕೀಯಕ್ಕೆ ವೇದಿಕೆ ಸಿದ್ಧವಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇರಲಿದ್ದು, ಮುಸ್ಲಿಂ ಮತದಾರರು ಹೆಚ್ಚಿರುವ ಈ ಕ್ಷೇತ್ರದಲ್ಲಿ ಯಾರು ಅಂತಿಮವಾಗಿ ವಿಧಾನಸಭೆ ಪ್ರವೇಶಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಈ ಸುದ್ದಿ ಓದಿದ್ದೀರಾ? ವಿಜಯಪುರ ಕ್ಷೇತ್ರ | ಕಾಂಗ್ರೆಸ್‌ಗೆ ಜೆಡಿಎಸ್​ ಅಭ್ಯರ್ಥಿ ಬೆಂಬಲ; ಯತ್ನಾಳ್‌ ರಾಜಕೀಯ ಮೇಲೆ ಪ್ರಶ್ನಾರ್ಥಕ ಚಿಹ್ನೆ

ಬಬಲೇಶ್ವರ ಕ್ಷೇತ್ರ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಹಾಲಿ ಶಾಸಕ ಎಂ ಬಿ ಪಾಟೀಲ ಪ್ರತಿನಿಧಿಸುವ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಕಾವು ಹೆಚ್ಚಾಗಿದೆ. ಎಂ ಬಿ ಪಾಟೀಲ ಅವರಿಗೆ ಈ ಹಿಂದಿನ ಮೂರು ಚುನಾವಣೆಯಲ್ಲಿ ಸ್ಪರ್ಧೆ ಒಡ್ಡಿ ಸೋಲು ಕಂಡಿರುವ ಹಾಲಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಅವರು ಬಿಜೆಪಿಯಿಂದ ಮತ್ತೆ ಸ್ಪರ್ಧೆಯಲ್ಲಿದ್ದಾರೆ. ಜೆಡಿಎಸ್‌ನಿಂದ ಬಸವರಾಜ ಹೊನೆವಾಡ ಕಣದಲ್ಲಿದ್ದಾರೆ.

ಎಂ ಬಿ ಪಾಟೀಲ ಬಬಲೇಶ್ವರ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದು ಮತ್ತೊಮ್ಮೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಆದರೆ, ಸಾಕಷ್ಟು ಅಭಿವೃದ್ಧಿ ಕೆಲಸದ ಹೊರತಾಗಿಯೂ ಅವರು ಶ್ರಮಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಾರಿ ಬಿಜೆಪಿ ನಿರ್ಣಾಯಕ ಫೈಟ್‌ ನೀಡಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಮತದಾರರು ಅಂತಿಮವಾಗಿ ಯಾರ ಕೈ ಹಿಡಿಯುತ್ತಾರೆ ಎಂಬುದು ಗುಟ್ಟಾಗಿ ಉಳಿದಿದೆ.

ಮುದ್ದೇಬಿಹಾಳ ಕ್ಷೇತ್ರ

ಮುದ್ದೇಬಿಹಾಳ ಕ್ಷೇತ್ರದದಲ್ಲಿ ದೇಶಮುಖ್​ ಮತ್ತು ನಾಡಗೌಡ ಕುಟುಂಬಗಳೇ ಹೆಚ್ಚು ಕಾಲ ಪಾರುಪತ್ಯ ಮೆರೆದಿದ್ದು ಕ್ಷೇತ್ರದ ವೈಶಿಷ್ಟ್ಯ. ಕಳೆದ ಬಾರಿಯಷ್ಟೇ ಬಿಜೆಪಿ ಮೊದಲ ಬಾರಿ ಗೆದ್ದು ಬೀಗಿತ್ತು.‌ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅಪ್ಪಾಜಿ ನಾಡಗೌಡ ತಮ್ಮ ಕೊನೆ ಚುನಾವಣೆ ಎಂದು ಘೋಷಿಸಿಕೊಂಡು ಕಣಕ್ಕೆ ಇಳಿದಿದ್ದಾರೆ. ಎ ಎಸ್ ಪಾಟೀಲ ನಡಹಳ್ಳಿ ಕೂಡ ಬಿಜೆಪಿಯಿಂದ ಸ್ಪರ್ಧಿಸಿ ಮತ್ತೊಮ್ಮೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಸವರಾಜ ಭಜಂತ್ರಿ ಹೆಚ್ಚು ಮತದಾರರಿಗೆ ಪರಿಚಯವಿಲ್ಲದಿದ್ದರೂ ರಾಜಕೀಯ ಅನುಭವ ಹೊಂದಿದ್ದಾರೆ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು.

ಬಿಜೆಪಿಯ ಹಾಲಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಮತ್ತು ಕಾಂಗ್ರೆಸ್‌ನ ಮಾಜಿ ಶಾಸಕ ಸಿ ಎಸ್ ನಾಡಗೌಡ ಅವರ ನಡುವೆ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಲಕ್ಷಣ ದಟ್ಟವಾಗಿದೆ. ಹಾಲಿ ಶಾಸಕ ನಡಹಳ್ಳಿ ಅವರು ಸರ್ಕಾರದಿಂದ ಅತೀ ಹೆಚ್ಚು ಅನುದಾನ ತಂದು ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಕಣ್ಣಿಗೆ ಕಟ್ಟುವಂತೆ ಮಾಡಿ ತೋರಿಸಿದ್ದು ಅವರ ಪ್ಲಸ್‌ ಪಾಯಿಂಟ್‌ ಆಗಿದೆ.

ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ದೇವರ ಹಿಪ್ಪರಗಿ ಕ್ಷೇತ್ರ

ಈ ಬಾರಿ ಬಿಜೆಪಿಯಿಂದ ಸೋಮನಗೌಡ ಪಾಟೀಲ (ಸಾಸನೂರ) ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಶರಣಪ್ಪ ಟಿ.ಸುಣಗಾರ ಸ್ಪರ್ಧೆಯಲ್ಲಿದ್ದಾರೆ. 2018ರಲ್ಲಿ ಸೋಮನಗೌಡ ಪಾಟೀಲ್ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ್ ಅವರಿಗೆ ತೀವ್ರ ಪೈಪೋಟಿ ನೀಡಿ ಕೇವಲ 3,353 ಮತಗಳ ಅಂತರದಲ್ಲಿ ದೇವರ ಹಿಪ್ಪರಿಗಿಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದರು.

ಜೆಡಿಎಸ್‌ ಅಭ್ಯರ್ಥಿ ರಾಜುಗೌಡ ಪಾಟೀಲ ಕಳೆದ ಬಾರಿ ಸೋಲನ್ನೇ ಮೆಟ್ಟಿಲಾಗಿಸಿಕೊಂಡು ಬಿಜೆಪಿಗೆ ತೀವ್ರ ಪೈಪೋಟಿ ನೀಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸಲಗಾರ ಕೂಡ ಗೆಲ್ಲಲು ತಮ್ಮದೇ ಆದ ರಣತಂತ್ರಗಳನ್ನು ಹೆಣೆದಿದ್ದು, ದೇವರ ಹಿಪ್ಪರಗಿಯಲ್ಲಿ ಈ ಬಾರಿಯೂ ತ್ರಿಕೋನ ಸ್ಪರ್ಧೆ ಇರಲಿದೆ. ಅಂತಿಮವಾಗಿ ಯಾರು ಗೆಲ್ಲುತ್ತಾರೆ ಎಂಬುದು ಕಾದು ನೋಡಬೇಕು.

ಬಸವನ ಬಾಗೇವಾಡಿ ಕ್ಷೇತ್ರ

ಜಗಜ್ಯೋತಿ ಬಸವಣ್ಣ ಜನಿಸಿದ ನಾಡು ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದೆ. ಸತತ ಎರಡು ಬಾರಿ ಗೆಲುವು ಕಂಡಿರುವ ಕಾಂಗ್ರೆಸ್‌ ಅಭ್ಯರ್ಥಿ ಶಿವಾನಂದ ಪಾಟೀಲ ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಬಾರಿ ಕಮಲ ಅರಳಿಸಲು ಈ ಕ್ಷೇತ್ರದಲ್ಲಿ ಬಿಜೆಪಿ ತೀವ್ರ ಪೈಪೋಟಿ ನಡೆಸುತ್ತಿದ್ದು, ಎಸ್‌ ಕೆ ಬೆಳ್ಳುಬ್ಬಿ ಅವರನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಎರಡನೇ ಸ್ಥಾನ ಪಡೆದಿದ್ದ ಜೆಡಿಎಸ್‌ ಈ ಬಾರಿಯೂ ಪ್ರತಿತಂತ್ರ ರೂಪಿಸಿದ್ದು, ಸೋಮನಗೌಡ ಪಾಟೀಲ ಅವರನ್ನು ಕಣಕ್ಕಿಳಿಸಿದೆ. ಮೂರೂ ಪಕ್ಷಗಳು ಅಷ್ಟೇ ಪ್ರಮಾಣದ ಬಲಾಬಲ ಹೊಂದಿದ್ದು ಕ್ಷೇತ್ರ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ. ಅಂತಿಮವಾಗಿ ಮತದಾರ ಯಾರಿಗೆ ಮಣೆ ಹಾಕುತ್ತಾರೆ ಎಂಬ ಕುತೂಹಲ ಕ್ಷೇತ್ರದಲ್ಲಿ ಮನೆ ಮಾಡಿದೆ.

ನಾಗಠಾಣ (ಎಸ್ಸಿ) ಕ್ಷೇತ್ರ

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲೂ ಚುನಾವಣೆ ಕಣ ರಂಗು ಪಡೆದಿದೆ. ವಿಜಯಪುರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಇದಾಗಿದೆ.

2018ರ ಚುನಾವಣೆಯಲ್ಲೂ ತ್ರಿಕೋನ ಸ್ಪರ್ಧೆಗೆ ನಾಗಠಾಣ ಸುದ್ದಿಯಾಗಿತ್ತು. ಜೆಡಿಎಸ್‌ನ ಡಾ.ದೇವಾನಂದ ಚವ್ಹಾಣ ಅವರು 59,709 ಮತಗಳನ್ನು ಗಳಿಸಿ ಜಯ ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿಠಲ ಕಟಕದೊಂಡ 54,108, ಬಿಜೆಪಿ ಅಭ್ಯರ್ಥಿ ಡಾ.ಗೋಪಾಲ ಕಾರಜೋಳ 53,562 ಮತ ಪಡೆದುಕೊಂಡಿದ್ದರು.

ಈ ಬಾರಿಯೂ ನಾಗಠಾಣ ತ್ರಿಕೋನ ಸ್ಪರ್ಧೆಯ ಅಖಾಡವಾಗಿ ಗುರುತಿಸಿಕೊಂಡಿದೆ. ಜೆಡಿಎಎಸ್‌ನಿಂದ ಹಳೆ ಹುಲಿ ದೇವಾನಂದ ಚವ್ಹಾಣ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದಲೂ ವಿಠಲ ಕಟಕದೊಂಡ ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿ ಹೊಸ ಮುಖ ಪರಿಚಯಿಸಿದ್ದು, ಸಂಜೀವ್‌ ಐಹೊಳೆ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್​ ಹಿಡಿತ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸಿರುವುದರಿಂದ ಹಾಲಿ ‌ಶಾಸಕ ದೇವಾನಂದ‌ ಚವ್ಹಾಣ ಅವರಿಗೆ ಗೆಲುವು ಅಷ್ಟೊಂದು‌ ಸುಲಭವಲ್ಲ ಎನ್ನುವ ಮಾತುಗಳು ಹೆಚ್ಚು ಕೇಳಿಬಂದಿವೆ.

ಇಂಡಿ ಮತಕ್ಷೇತ್ರ

ಭೀಮಾತೀರದ ಮತಕ್ಷೇತ್ರ ಎಂದು ಖ್ಯಾತಿ ಪಡೆದಿರುವ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ರಂಗು ಪಡೆದಿದೆ. ಕಾಂಗ್ರೆಸ್​​ನಿಂದ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ್​ಗೆ ಕಣದಲ್ಲಿದ್ದರೆ, ಬಿಜೆಪಿಯಿಂದ ಕಾಸುಗೌಡ ಬಿರಾದಾರ್ ಸ್ಪರ್ಧಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿಯಾಗಿ ಬಿ ಡಿ ಪಾಟೀಲ್​ ಕಣಕ್ಕಿಳಿದಿದ್ದಾರೆ.

ಇಂಡಿ ಮತಕ್ಷೇತ್ರದಲ್ಲಿ ಈ ಬಾರಿ ಮತ್ತೆ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್​ನ ಹಾಲಿ ಶಾಸಕರ ಗೆಲುವಿಗೆ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್​ ಪ್ರಬಲ ಅಭ್ಯರ್ಥಿಗಳು ಪೈಪೋಟಿ ನೀಡಲಿದ್ದಾರೆ ಎಂಬ ಮಾತುಗಳಿವೆ. ಯಶವಂತರಾಯಗೌಡ ಪಾಟೀಲ್​ಗೆ ಈ ಬಾರಿ ಗೆಲುವು ಪ್ರತಿಷ್ಠೆಯಾಗಿದೆ.

ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ್​ ಕೂಡ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದ್ದಾರೆ. ಇದರ ನಡುವೆ ಕಳೆದ ಬಾರಿ ಅತೀ ಕಡಿಮೆ ಮತದಿಂದ ಸೋತಿರುವ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲ್ ಕೂಡ​, ಈ ಬಾರಿ ತಮ್ಮನ್ನು ಮತದಾರ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ.

ಪಕ್ಷೇತರ ಅಭ್ಯರ್ಥಿಯೊಬ್ಬರು ಹ್ಯಾಟ್ರಿಕ್‌ ಗೆಲುವು ದಾಖಲಿಸುವುದು ಅಪರೂಪ. ಈ ದಾಖಲೆ ಬರೆದಿದ್ದು, ಇಂಡಿ ವಿಧಾನಸಭಾ ಕ್ಷೇತ್ರ ಎಂಬುದು ಇದರ ವಿಶೇಷ. ರವಿಕಾಂತ್‌ ಪಾಟೀಲ್‌ ಮೂರು ಬಾರಿ ಇಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ. ರವಿಕಾಂತ್‌ ಈಗ ಅವರು ಜೆಡಿಎಸ್‌ ಸೇರಿರುವುದರಿಂದ ಆ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಕ್ಷೇತ್ರದ ಮತದಾರರ ಯಾರಿಗೆ ವಿಜಯದ ಮಾಲೆ ಹಾಕಲಿದ್ದಾನೆ ಎಂಬುದು ಕಾದು ನೋಡಬೇಕು.

ಸಿಂದಗಿ ಕ್ಷೇತ್ರ

ಸಿಂದಗಿ ವಿಧಾನಸಭಾ ಕ್ಷೇತ್ರ ವಿಜಯಪುರ ವಿಶಿಷ್ಟ ಕ್ಷೇತ್ರ. ಇಲ್ಲಿಯ ಮತದಾರರು ಒಮ್ಮೆ ಗೆದ್ದವರನ್ನು ಮತ್ತೆ ಗೆಲ್ಲಿಸುವುದಿಲ್ಲ ಎಂಬ ಮಾತೂ ಇದೆ. ಮತದಾರರು ಗುಟ್ಟು ಬಿಟ್ಟು ಕೊಡದೇ ಚುನಾವಣಾ ಸಮೀಕ್ಷೆಗಳನ್ನು ತಲೆ ಕೆಲಗೆ ಮಾಡಿರುವ ಉದಾಹರಣೆ ಕೂಡ ಸಾಕಷ್ಟಿದೆ.

ಕಳೆದ ಬಾರಿ ಜೆಡಿಎಸ್‌ ಅಭ್ಯರ್ಥಿ ಎಂ ಸಿ ಮನಗೂಳಿ ಗೆಲವು ಕಂಡಿದ್ದರು. ಎಂ ಸಿ ಮನಗೂಳಿ ಏಳು ಸಲ ಸ್ಪರ್ಧೆ ಮಾಡಿ ಎರಡು ಬಾರಿ ಶಾಸಕರಾದರು. 1994 ರಲ್ಲಿ ಜೆ ಎಚ್ ಪಟೇಲ್ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದರು. ಮತ್ತೆ 2018 ರಲ್ಲಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾದರು.

ಆದರೆ, ಮನಗೂಳಿ 2021 ಜನವರಿ 28 ರಂದು ನಿಧನರಾದ ಕಾರಣ ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ರಮೇಶ ಭೂಸನೂರ ಎಂ ಸಿ ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ(ಕಾಂಗ್ರೆಸ್ ಅಭ್ಯರ್ಥಿ) ಸೋಲಿಸಿದ್ದರು. ಆ ಮೂಲಕ ರಮೇಶ ಭೂಸನೂರ ಮೂರು ಬಾರಿ ವಿಧಾನಸಭೆಗೆ ಪ್ರವೇಶ ಮಾಡಿರುವುದು ಸಿಂದಗಿ ವಿಧಾನಸಭೆ ಮತಕ್ಷೇತ್ರದ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ರಮೇಶ ಭೂಸನೂರ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಅಶೋಕ ಮನಗೂಳಿ ಸ್ಪರ್ಧಿಸಿದ್ದಾರೆ.  ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ ಅಭ್ಯರ್ಥಿಯಾಗಿ ಈ ಹಿಂದೆಯೇ ಘೋಷಣೆಯಾಗಿದ್ದ ಶಿವಾನಂದ ಪಾಟೀಲ ಜನವರಿಯಲ್ಲಿ ನಿಧನರಾಗಿದ್ದು, ಅವರ ಪತ್ನಿ ವಿಜಯಶ್ರೀ ಪಾಟೀಲ ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿದೆ.

ಹಾಲಿ ಶಾಸಕ ಭೂಸನೂರ್​ ಉತ್ತಮ ಜನಸಂಪರ್ಕ ಹೊಂದಿರುವುದು ಅವರ ಪ್ಲಸ್‌ ಪಾಯಿಂಟ್.‌ ಇತ್ತ ಕಾಂಗ್ರೆಸ್ ನಾಯಕರು ಕೂಡ ಕ್ಷೇತ್ರದಲ್ಲಿ ನಿರಂತರ ಓಡಾಟ ಮಾಡುತ್ತಾ ಪಕ್ಷ ಸಂಘಟನೆ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿಗೆ ಅನುಕಂಪ ಕೈ ಹಿಡಿಯುತ್ತಾ ನೋಡಬೇಕು. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇರಲಿದೆ. ಅಂತಿಮವಾಗಿ ಮತದಾರ ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಇಲ್ಲಿ ಈಗಲೇ ಹೇಳುವುದು ಕಷ್ಟ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣೆ ಈಗಾಗಲೇ ಮೋದಿ ಕೈ ತಪ್ಪಿದೆ, ಇದು ಅವರಿಗೂ ತಿಳಿದಿದೆ: ರಾಹುಲ್ ಗಾಂಧಿ

ಕಾಂಗ್ರೆಸ್‌ನ ಗ್ಯಾರಂಟಿ ಮತ್ತು ಮೋದಿ ಕಿ ಗ್ಯಾರಂಟಿಯ ನಡುವೆ ಅಗಾಧ ವ್ಯತ್ಯಾಸವಿದೆ...

ಮುಸ್ಲಿಮರು ಮತ್ತು ಮೋದಿ ಸುಳ್ಳು; ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಆಯೋಗಗಳು ಹೇಳಿದ್ದೇನು? ಡೀಟೇಲ್ಸ್‌

ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್‌ ಸರ್ಕಾರಗಳು ಮುಸ್ಲಿಮರಿಗೆ ಮೀಸಲಾತಿಯನ್ನ ನೀಡಿವೆ. ಅದಕ್ಕಾಗಿ, ಹಿಂದುಳಿದವರು...

ಬೆಂಗಳೂರು | ರೈಲಿಗೆ ಸಿಲುಕಿ ಮೂವರು ಯುವಕರು ದುರ್ಮರಣ

ರೈಲಿಗೆ ಸಿಲುಕಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು...

ಯಾವ ಟ್ಯಾಕ್ಸ್ಯೂ ಇಲ್ಲ; ಪಿತ್ರೋಡಾ ಹೇಳಿಕೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ: ಡಿ ಕೆ ಶಿವಕುಮಾರ್

"ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಡೆತ್ ಟ್ಯಾಕ್ಸ್ ಹಾಕಲ್ಲ, ಬರ್ತ್ ಟ್ಯಾಕ್ಸ್...