ಬಿಜೆಪಿ ಅಭ್ಯರ್ಥಿಯ ಪರ ಮತ ಚಲಾಯಿಸಲು ನಕಲಿ ಮತದಾರರನ್ನು ವಿಜಯಪುರ ನಗರ ವಿಧಾನಸಭಾ ಕ್ಷೇತ್ರಕ್ಕೆ ಕರೆತಂದಿರುವುದಾಗಿ ಶಿವಸೇನಾ ಪಕ್ಷದ ಅಭ್ಯರ್ಥಿ ಸತೀಶ್ ಅಶೋಕ್ ಪಾಟೀಲ ಆರೋಪಿಸಿದ್ದಾರೆ.
ಇಂದು (ಮೇ 10) ಮತದಾನ ಶುರುವಾದ ಸಮಯದಲ್ಲಿ ವಿಜಯಪುರ ನಗರದ ಬೂತನಾಳ ರಸ್ತೆಯಿಂದ ನಗರ ಪ್ರವೇಶಿಸುತ್ತಿದ್ದ ಕೆಲ ನಕಲಿ ಮತದಾರರನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ವಿಡಿಯೋದಲ್ಲಿ, ಇಬ್ಬರು ಮಾತನಾಡಿದ್ದು ತಾವು ಚಿಂಚೋಳಿಯಲ್ಲಿಇರುವ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಲು ಬಂದಿರುವುದಾಗಿ ವಿಡಿಯೋದಲ್ಲಿದೆ.
ʻʻಸುಮಾರು 120ಕ್ಕೂ ಹೆಚ್ಚು ಮಂದಿ ನಕಲಿ ಮತದಾರರು, ಮತ ಚಲಾಯಿಸಲು ಬಂದಿದ್ದು, ನಮ್ಮನ್ನು ನೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಇಬ್ಬರನ್ನು ಪ್ರಸ್ತುತ ಪೊಲೀಸರ ವಶಕ್ಕೆ ನೀಡಲಾಗಿದೆʼʼ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಿಳಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೋಮವಾರ (ಮೇ 8)ದಂದೇ ಮನವಿ ಪತ್ರ ಸಲ್ಲಿಸಿರುವ ಅವರು, ʻʻಸೋಮವಾರ ನಡೆದ ಬಿಜೆಪಿ ಪಕ್ಷದ ರ್ಯಾಲಿಯಲ್ಲಿ ಭಾಗವಹಿಸಿದ್ದ ʼಸಿದ್ಧಸಿರಿʼ ಬ್ಯಾಂಕಿನ ಮ್ಯಾನೇಜರ್ಗಳು ಮತ್ತು ಸಿಬ್ಬಂದಿ ವರ್ಗದವರು ಬೇರೆ ಜಿಲ್ಲೆ ಮತ್ತು ತಾಲೂಕುಗಳಿಂದ ನಕಲಿ ಮತ ಹಾಕಲು ಬಂದಿದ್ದು, ಅಂತವರಿಗೆ ಮತ ಹಾಕಲು ಅವಕಾಶ ಕೊಡಬಾರದುʼʼ ಎಂದು ಆಗ್ರಹಿಸಿದ್ದರು.
ಕಳೆದ ಚುನಾವಣೆಯಲ್ಲಿಯೂ ಹೀಗೆ ಬೇರೆ ಮತಕ್ಷೇತ್ರದ ಜನರು ಬಂದು ಸುಮಾರು 3,000ದಿಂದ 4,000ವರೆಗೆ ನಕಲಿ ಮತ ಚಲಾಯಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದರು. ಈ ಬಾರಿ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದರು.