ಚುನಾವಣಾ ಪ್ರಚಾರದ ಮೇಳೆ ಗ್ರಾಮಸ್ಥರೊಬ್ಬರು ದಲಿತರನ್ನು ಗ್ರಾಮದಿಂದ ಬೇರೆಡೆ ಕಳಿಸಿ ಎಂದು ಹೇಳಿದ್ದು, ಎಲ್ಲರಿಗೂ ಬದುಕುವ ಹಕ್ಕಿದೆ. ಹಿಂಗೆಲ್ಲ ಮಾತಾಡಿದ್ರೆ ಕೇಸ್ ಹಾಕ್ತಾರೆ ಹುಷಾರಾಗಿರುವ ಎಂದು ಪಕ್ಷೇತರ ಅಭ್ಯರ್ಥಿ ಎಚ್ಚರಿಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕುಪ್ಪಳಿ ಗ್ರಾಮದಲ್ಲಿ ನಡೆದಿದೆ.
ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಚಂದನ್ಗೌಡ ಪ್ರಚಾರಕ್ಕೆಂದು ಕುಪ್ಪಳ್ಳಿಗೆ ತೆರಳಿದ್ದರು. ಗ್ರಾಮಸ್ಥರೊಂದಿಗೆ ಮಾತನಾಡುವ ವೇಳೆ, ಮೈಕ್ ಪಡೆದುಕೊಂಡ ವ್ಯಕ್ತಿಯೊಬ್ಬ, “ದಲಿತರನ್ನು ಊರಿಂದ ಬೇರೆ ಜಾಗಕ್ಕೆ ಕಳಿಸಿಕೊಡಿ ಸಾಕು. ಅವರು ನಮ್ಮ ಮನೆಗಳ ಸುತ್ತಲೂ ಇದ್ದು, ನಾವು ಮಧ್ಯದಲ್ಲಿದ್ದೇವೆ” ಎಂದು ಹೇಳಿದ್ದಾರೆ.
ಯಾಕಪ್ಪ ಅವರನ್ನು ಬೇರೆ ಕಳಿಸಬೇಕು ಎಂದು ಚಂದನ್ ಗೌಡ ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ವ್ಯಕ್ತಿ, “ನಮಗೆ ದನ-ಕರ ಕಟ್ಟಿಕೊಳ್ಳೇಕೆ ತೊಂದರೆ ಆಗ್ತಾ ಇದೆ” ಎಂದು ಹೇಳಿದ್ದಾರೆ.
ಹಾಗೆ ಹೇಳಿದ ವ್ಯಕ್ತಿಗೆ ಬುದ್ದಿ ಹೇಳಿದ ಚಂದನ್ ಗೌಡ, “ಸಾಮಾಜಿಕವಾಗಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಅದನ್ನ ಕಸಿದುಕೊಳ್ಳೋಕೆ ಆಗಲ್ಲ. ಯಾರನ್ನು ಎಲ್ಲಿಂದಲೂ ಕಳಿಸೋಕೆ ಯಾರಿಗೂ ಹಕ್ಕಿಲ್ಲ. ಹೀಗೆಲ್ಲ ಮಾತಾಡಿದ್ರೆ ಕೇಸ್ ಬೀಳ್ತವೆ” ಎಂದು ಎಚ್ಚರಿಸಿದ್ದಾರೆ.
“ನಿಮಗೆ ಅವರನ್ನ ಬೇರೆಡೆ ಕಳಿಸಲೇಬೇಕೆಂದಿದ್ದರೆ, ನನ್ನಿಂದ ಆಗಲ್ಲ. ನನಗೆ ನೀವ್ಯಾರೂ ಮತ ಹಾಕಬೇಡಿ. ಓಟು ಕೇಳೋಕೆ ಬರುವ ಎಂಪಿ ಅಥವಾ ಶಾಸಕನ ಬಳಿ ಕೇಳಿ, ಸ್ಥಳಾಂತರ ಮಾಡಿಸಿಕೊಳ್ಳಿ” ಎಂದು ಕಿಡಿಕಾರಿದ್ದಾರೆ.