- ಈ ಬಾರಿ ಚುನಾವಣೆಗಾಗಿ 58,545 ಮತ ಕೇಂದ್ರಗಳನ್ನ ಸ್ಥಾಪನೆ; ಮೀನಾ
- ವೋಟ್ ಫ್ರಂ ಹೋಮ್ ಅವಕಾಶ ಪಡೆದ 80 ಸಾವಿರ ಮಂದಿ
ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ರಾಜ್ಯದಲ್ಲಿ ಇದುವರೆಗೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ 265 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು.
ಇಂದು ಬೆಂಗಳೂರಿನ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್, ನೀತಿಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಈವರೆಗೆ 265 ಕೋಟಿ ರೂ. ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಗುಂಪು ಘರ್ಷಣೆ ಸಂಬಂಧ 15 ಎಫ್ಐಆರ್ ದಾಖಲಾಗಿದೆ. ದ್ವೇಷ ರಾಜಕಾರಣ ಸಂಬಂಧ 5 ಎಫ್ಐಆರ್ ಸೇರಿ 673 ಎಫ್ಐಆರ್ ದಾಖಲಾಗಿದೆ ಎಂದು ಮೀನಾ ಮಾಹಿತಿ ನೀಡಿದರು.
ಈ ಬಾರಿ ಚುನಾವಣೆಯಲ್ಲಿ 224 ಕ್ಷೇತ್ರಗಳಿಂದ ಒಟ್ಟು 2615 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇದರಲ್ಲಿ 2429 ಪುರುಷ ಅಭ್ಯರ್ಥಿಗಳು 185 ಮಹಿಳಾ ಅಭ್ಯರ್ಥಿಗಳು ಹಾಗೂ ಇತರೆ ಓರ್ವ ಅಭ್ಯರ್ಥಿ ಕಣದಲ್ಲಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ?: ರೌಡಿಶೀಟರ್ ಮಣಿಕಂಠ ಪರ ಮೋದಿ ಪ್ರಚಾರ; ಮೋದಿ-ಅಮಿತ್ ಶಾಗೆ…
ರಾಜ್ಯದಲ್ಲಿ ಒಟ್ಟು 5,30,85,566 ಮತದಾರರಿದ್ದು, ಈ ಪೈಕಿ 2,66,82,156 ಪುರುಷ ಮತದಾರರು, 2,63,98,483 ಮಹಿಳಾ ಮತದಾರರಿದ್ದಾರೆ.
ಇವರೆಲ್ಲರಿಗಾಗಿ ರಾಜ್ಯಾದ್ಯಂತ ಒಟ್ಟು 58,545 ಮತ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿ ವೋಟ್ ಫ್ರಂ ಹೋಮ್ ಅವಕಾಶ ಪಡೆದುಕೊಂಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಹೇಳಿದರು.