- ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ ಬೊಮ್ಮಾಯಿ
- ಲಿಂಗಾಯತರ ಬಗ್ಗೆ ಕಾಂಗ್ರೆಸ್ ಪಕ್ಷದ್ದು ತೋರಿಕೆಯ ಪ್ರೀತಿ
ವಿರೋಧ ಪಕ್ಷ ಕಾಂಗ್ರೆಸ್ಗೆ ಈಗ ಲಿಂಗಾಯತರ ಮೇಲೆ ಪ್ರೀತಿ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಾಗಲಕೋಟೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಪವಾಗುತ್ತಿರುವಂತೆ ಕಾಂಗ್ರೆಸ್ನವರಿಗೆ ಲಿಂಗಾಯತರ ಮೇಲೆ ಪ್ರೀತಿ ಹೆಚ್ಚಾಗಿದೆ. ಇದು ಲಿಂಗಾಯತರ ಪರ ಇರುವ ಕಾಳಜಿಯಿಂದಲ್ಲ, ಬರೀ ತೋರಿಕೆಯ ಪ್ರೀತಿ ಎಂದು ಅವರು ಹೇಳಿದರು.
ಈ ಹಿಂದೆ ಲಿಂಗಾಯತರನ್ನು ಧರ್ಮದ ಹೆಸರಿನಲ್ಲಿ ಛಿದ್ರ ಮಾಡಲು ಹೊರಟಿದ್ದರು. ಇವರ ಕಾಲದಲ್ಲಿ ಲಿಂಗಾಯತರಿಗೆ ಮೀಸಲು ಕೊಡಲು ಹಿಂದೇಟು ಹಾಕಿದರು. ಈಗ ನಾವು ಆ ಬೇಡಿಕೆಯನ್ನು ಈಡೇರಿಸಿ ಮೀಸಲು ನೀಡಿದ್ದೇವೆ.
ಆದರೆ ಈಗ ಕಾಂಗ್ರೆಸ್ ಅದನ್ನೇ ವಿರೋಧಿಸಿ ಕೋರ್ಟ್ಗೆ ದೂರು ದಾಖಲಿಸಿದ್ದಾರೆ ಎಂದು ಬೊಮ್ಮಾಯಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ಕಾಂಗ್ರೆಸ್ ಗೆ ಈಗ ಲಿಂಗಾಯತ ಮೇಲೆ ಪ್ರೀತಿ ಹೆಚ್ಚಿದೆ. ಲಿಂಗಾಯತರನ್ನು ಛಿದ್ರ ಮಾಡಲು ಹೊರಟಿದ್ದವರು ಇವರು. ಇವರ ಕಾಲದಲ್ಲಿ ಮೀಸಲಾತಿ ವಿಚಾರದಲ್ಲಿ ಯಾವುದೇ ದೈರ್ಯ ಮಾಡಲಿಲ್ಲ.
ಈಗ ಲಿಂಗಾಯತರ ಬಗ್ಗೆ ಮಾತನಾಡುತ್ತಿದ್ದಾರೆ. ಇವರೇ ಈಗ ಕೋರ್ಟ್ಗೆ ನಮ್ಮ ವಿರುದ್ದ ದೂರು ದಾಖಲಿಸಿದ್ದಾರೆ. ಮೀಸಲಾತಿ ವಿರೋಧಿಸಿದವರೇ ಇವರು ಎಂದು ಸಿಎಂ ಕಿಡಿಕಾರಿದರು.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಇಲ್ಲಿಯವರೆಗೆ ಅದನ್ನು ಎಷ್ಟರಮಟ್ಟಿಗೆ ಪಾಲಿಸುತ್ತಾ ಬಂದಿದೆ. 1967ರಲ್ಲಿ ವಿರೇಂದ್ರ ಪಾಟೀಲ್ ಬಳಿಕ ಇಲ್ಲಿಯವರೆಗೆ ಲಿಂಗಾಯತರನ್ನು ಇನ್ನೂ ಕಾಂಗ್ರೆಸ್ ನವರು ಸಿಎಂ ಮಾಡಿಲ್ಲ.
ವೀರೇಂದ್ರ ಪಾಟೀಲರನ್ನು , ರಾಜಶೇಖರ್ ಮೂರ್ತಿ ಅವರುಗಳನ್ನು ಇವರು ಹೇಗೆ ನಡೆಸಿಕೊಂಡರೆನ್ನುವುದು ಸಮಾಜಕ್ಕೆ ಗೊತ್ತಿದೆ, ಜನ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದ ಸಿಎಂ ಕಾಂಗ್ರೆಸ್ ಕುಟುಕಿದರು.
ಈ ಸುದ್ದಿ ಓದಿದ್ದೀರಾ? :ಸುದೀಪ್ ನಟನೆಯ ಜಾಹೀರಾತುಗಳಿಗೆ ತಡೆ ನೀಡಿ: ಚುನಾವಣಾ ಆಯೋಗಕ್ಕೆ…
ಅಂದು ಶುರುವಾದ ಕಾಂಗ್ರೆಸ್ನ ಲಿಂಗಾಯತ ವಿರೋಧಿ ಧೋರಣೆ ಇನ್ನೂ ಮರೆಯಾಗಿಲ್ಲ. ಅದಕ್ಕೆ ಈಗ ಮತ್ತೊಂದು ಸಾಕ್ಷಿ ಕಾಂಗ್ರೆಸ್ ಹಿರಿಯ ನಾಯಕ ಎಸ್ ಆರ್ ಪಾಟೀಲ್, ಇವರನ್ನು ಪಕ್ಷ ಈಗ ನಡೆಸಿಕೊಳ್ಳುತ್ತಿದೆ ಎನ್ನುವುದನ್ನು ಜನ ಕಣ್ಣಾರೆ ನೋಡುತ್ತಿದ್ದಾರೆ. ಇವಕ್ಕೆಲ್ಲ ಅವರೇ ಉತ್ತರ ಕೊಡಲಿ ಎಂದರು.
ಕಲ್ಯಾಣ ಹಾಗೂ ಉತ್ತರ ಕರ್ನಾಟಕದ ಅಭಿವೃದಿ ಆದರೆ ಅದು ನಮ್ಮ ಪಕ್ಷದಿಂದ ಮಾತ್ರ ಯಾವ ಭಾಗದಿಂದ ನಾಯಕರು ಹೊರ ಹೋಗಿದ್ದಾರೋ ಅಲ್ಲೇ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬಳಿಕ ಮುಖ್ಯಮಂತ್ರಿಗಳು ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ್ ನಿರಾಣಿ, ಹಾಗೂ ಮಧೋಳ ಅಭ್ಯರ್ಥಿ ಗೋವಿಂದ ಕಾರಜೋಳ ಅವರುಗಳ ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಭಾಗಿಯಾಗಿ ಅವರ ಪರ ಮತಯಾಚನೆ ಮಾಡಿದರು.