ಮಂಗಳೂರು ವಿಧಾನಸಭಾ ಕ್ಷೇತ್ರ
ಬಿಜೆಪಿಗೆ ಸವಾಲಾಗಿರುವ ಕರಾವಳಿಯ ಏಕೈಕ ಕ್ಷೇತ್ರ
ಮುಸ್ಲಿಂ ಬಾಹುಳ್ಯ ಮಂಗಳೂರು ಕ್ಷೇತ್ರ ಹಿಂದೆ ಉಲ್ಲಾಳ ಕ್ಷೇತ್ರವಾಗಿತ್ತು. 2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಮಂಗಳೂರು ಕ್ಷೇತ್ರವಾಯಿತು. 2018ರಲ್ಲಿ ಇಡೀ ಕರಾವಳಿಯ ಎಂಟರಲ್ಲಿ ಏಳು ಕ್ಷೇತ್ರಗಳೂ ಕೇಸರಿ ಪಾಳಯದ ಕೈವಶವಾದಾಗ ಮಂಗಳೂರು ಕ್ಷೇತ್ರ ಮಾತ್ರ ಗೆಲ್ಲುವುದು ಸಾಧ್ಯವಾಗಿರಲಿಲ್ಲ. ಇಲ್ಲಿ ಶಾಸಕ ಯು ಟಿ ಫರೀದ್ ಅವರ ಸಾವಿನ ನಂತರ ನಡೆದ ಉಪಚುನಾವಣೆ ಸೇರಿ ನಾಲ್ಕು ಬಾರಿಗೆ ಗೆದ್ದಿರುವ ಅವರ ಪುತ್ರ ಯು ಟಿ ಖಾದರ್ ಕ್ಷೇತ್ರದ ಎಲ್ಲ ಧರ್ಮ, ಸಮುದಾಯದ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಅವರ ಸತತ ಮೂರು ಚುನಾವಣೆಗಳ ಗೆಲುವಿಗೆ ಕಾರಣವಾಗಿದೆ.
ದಕ್ಷಿಣ ಕನ್ನಡದಲ್ಲಿ ಸಂಘ ಪರಿವಾರದ ಕಣ್ಣು ನೆಟ್ಟಿರುವುದು ಮಂಗಳೂರು ವಿಧಾನಸಭಾ ಕ್ಷೇತ್ರದ ಮೇಲೆ. 1978 ರಿಂದ ಇಲ್ಲಿಯವರೆಗೆ ಬಿಜೆಪಿ ಒಂದು ಬಾರಿಯಷ್ಟೆ ಗೆಲುವು ಸಾಧಿಸಿದೆ. 2018ರ ಚುನಾವಣೆಯಲ್ಲಿ ಇಡೀ ಜಿಲ್ಲೆಯಲ್ಲಿ ಕಮಲ ಅರಳಿದಾಗ ಬಿಜೆಪಿಗೆ ಗೆಲ್ಲಲಾಗದ ಒಂದೇ ಒಂದು ಕ್ಷೇತ್ರವಿದು. ಮಂಗಳೂರು ಕ್ಷೇತ್ರದ ಶಾಸಕ ಯು ಟಿ ಖಾದರ್ ಮತ್ತೊಮ್ಮೆ ʼಕೈʼ ಎತ್ತಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ ಗೆದ್ದ ಏಕೈಕ ಶಾಸಕ ಅನಿಸಿದ್ದಾರೆ.
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಮುಸ್ಲಿಮರೇ ಹೆಚ್ಚು ಇರುವ ಪ್ರದೇಶ ಉಲ್ಲಾಳ. ಮಂಗಳೂರು ಕ್ಷೇತ್ರ ವಿಭಜನೆಯಾಗುವುದಕ್ಕೂ ಮುನ್ನ ಉಲ್ಲಾಳ ಕ್ಷೇತ್ರವಿತ್ತು. 2008ರ ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಉಲ್ಲಾಳ ಕ್ಷೇತ್ರ ಮಂಗಳೂರು ಕ್ಷೇತ್ರಯಾಯಿತು. 1999 ಮತ್ತು 2004ರಲ್ಲಿ ಉಲ್ಲಾಳ ಕ್ಷೇತ್ರದಿಂದ ಯು ಟಿ ಖಾದರ್ ಅವರ ತಂದೆ ಯು ಟಿ ಫರೀದ್ ಶಾಸಕರಾಗಿದ್ದರು. ಶಾಸಕರಾಗಿದ್ದಾಗಲೇ ಅವರು ನಿಧನರಾದ ನಂತರ 2007ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಯು ಟಿ ಖಾದರ್ ಗೆದ್ದು ಬರುತ್ತಾರೆ. ಆನಂತರ ನಡೆದ ಮೂರು ಚುನಾವಣೆಯಲ್ಲೂ ಖಾದರ್ ಜಯಗಳಿಸಿದ್ದಾರೆ.
ಹಿನ್ನೋಟ: 1978ರಲ್ಲಿ ಕಾಂಗ್ರೆಸ್ನಿಂದ ಪಿ ಎಫ್ ರೋಡ್ರಿಗಸ್, 1983 ರಲ್ಲಿ ಸಿಪಿಐಎಂನಿಂದ ಪಿ ರಾಮಚಂದ್ರ ರಾವ್ ಶಾಸಕರಾಗಿದ್ದರು. 85 ಮತ್ತು 89ರಲ್ಲಿ ಕಾಂಗ್ರೆಸ್ನಿಂದ ಬ್ಲೇಸಿಯಸ್ ಎಂ ಡಿಸೋಜಾ ಗೆದ್ದಿದ್ದರು. 1994ರಲ್ಲಿ ಬಿಜೆಪಿಯಿಂದ ಕೆ ಜಯರಾಮ ಶೆಟ್ಟಿ ಗೆದ್ದಿದ್ದರು. ನಂತರ ಸತತವಾಗಿ ಇಲ್ಲಿ 1999, 2004 ಎರಡು ಅವಧಿಗೆ ಯು ಟಿ ಫರೀದ್ ಶಾಸಕರಾಗಿದ್ದರು. ಎರಡನೇ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರು ನಿಧನರಾದ ಕಾರಣ 2007ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ಯು ಟಿ ಖಾದರ್ ಶಾಸಕರಾಗಿ ಆಯ್ಕೆಯಾಗುತ್ತಾರೆ. ನಂತರ ನಡೆದ ಮೂರೂ
ಚುನಾವಣೆಗಳಲ್ಲಿ ಸತತವಾಗಿ ಖಾದರ್ ಗೆಲುವು ಸಾಧಿಸಿದ್ದಾರೆ.
2018ರ ಚುನಾವಣೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಒಟ್ಟು ಐವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದರೂ, ಅತೀ ಹೆಚ್ಚು ಮತ ಗಳಿಸಿದವರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳೇ ಮುಂಚೂಣಿಯಲ್ಲಿದ್ದಾರೆ.
ಕ್ಷೇತ್ರದಲ್ಲಿ ಕೇವಲ ಮುಸ್ಲಿಂ ಮತಗಳಿಂದಲೇ ಗೆಲುವು ಸಾಧಿಸಲು ಆಗುವುದಿಲ್ಲ. ಹಿಂದೂ ಹಾಗೂ ಕ್ರಿಶ್ಚಿಯನ್ನರ ಮತಗಳೂ ನಿರ್ಣಾಯಕ ಪಾತ್ರ ವಹಿಸುತ್ತವೆ. ಯು.ಟಿ ಖಾದರ್ ಜಾತಿ, ಧರ್ಮ ಮೀರಿ ಬೆಳೆದ ರಾಜಕಾರಣಿಯಾಗಿದ್ದು, ತಮ್ಮ ಸರಳತೆ ಮೂಲಕವೇ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಹಾಗಾಗಿ ಅವರಿಗೆ ಗೆಲುವು ಸಿಕ್ಕಿದೆ.
ಮುಸ್ಲಿಂ- 87,000, ಬಿಲ್ಲವ- 24,000, ಮಲಯಾಳ ಬಿಲ್ಲವ- 23,500, ಕ್ರೈಸ್ತ- 19,000, ಎಸ್ಸಿ/ಎಸ್ಟಿ- 14,000, ಬಂಟ- 12,000, ಮೊಗವೀರ- 2,500, ಬ್ರಾಹ್ಮಣ/ಕೊಂಕಣಿ- 1,000, ಇತರರು- 10,000 ಮಂದಿ ಮತದಾರರಿದ್ದು, ಒಟ್ಟು- 1,93,000 ಮಂದಿ ಮತದಾರರಿದ್ದಾರೆ.