ಬಾಲಿವುಡ್ನ ಹಿರಿಯ ನಿರ್ದೇಶಕ ಪ್ರದೀಪ್ ಸರ್ಕಾರ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. 66 ವರ್ಷದ ಹಿರಿಯ ನಿರ್ದೇಶಕ ದೀರ್ಘ ಕಾಲದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಗುರುವಾರ ತಡರಾತ್ರಿ ಪ್ರದೀಪ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಮಧ್ಯರಾತ್ರಿ 2:30ರ ಸುಮಾರಿಗೆ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲೇ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಕೊಲ್ಕತ್ತಾ ಮೂಲದ ಪ್ರದೀಪ್ ಸರ್ಕಾರ್, 2003ರಲ್ಲಿ ಸಂಜಯ್ ದತ್ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಮುನ್ನಾ ಭಾಯ್ ಎಂಬಿಬಿಎಸ್ʼ ಚಿತ್ರದಲ್ಲಿ ಸಂಕಲನಕಾರರಾಗಿ ಕೆಲಸ ಮಾಡುವ ಮೂಲಕ ಬಾಲಿವುಡ್ ಪ್ರವೇಶಿಸಿದರು. ನಂತರ 2005ರಲ್ಲಿ ಸೈಫ್ ಅಲಿಖಾನ್ ಮತ್ತು ವಿದ್ಯಾಬಾಲನ್ ಮುಖ್ಯಭೂಮಿಕೆಯಲ್ಲಿ ಬಿಡುಗಡೆಯಾದ ʼಪರಿಣೀತಾʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ʼಲಗಾ ಚುನರಿ ಮೇ ದಾಗ್ʼ , ʼಲಫಂಗೆ ಪರಿಂದೆʼ, ʼಮರ್ದಾನಿʼ, ʼಹೆಲಿಕಾಪ್ಟರ್ ಈಲಾʼ ಮುಂತಾದ ಚಿತ್ರಗಳು ಹಾಗೂ ಕೆಲವು ವೆಬ್ ಸರಣಿಗಳನ್ನು ನಿರ್ದೇಶಿಸಿದ್ದರು.
ಅಭಿಷೇಕ್ ಬಚ್ಚನ್, ಮನೋಜ್ ಬಾಜಪೇಯಿ, ಅಜಯ್ ದೇವಗನ್, ನೀಲ್ ನಿತಿನ್ ಮುಕೇಶ್ ಸೇರಿದಂತೆ ಬಾಲಿವುಡ್ನ ಹಲವು ಗಣ್ಯರು ಪ್ರದೀಪ್ ಅವರ ದಿಢೀರ್ ಅಗಲಿಕೆ ಕಂಬನಿ ಮಿಡಿದು, ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ್ದಾರೆ. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಮುಂಬೈನ ಶಾಸ್ತ್ರಿ ನಗರದಲ್ಲಿರುವ ಸಾಂತಾಕ್ರೂಸ್ ಹಿಂದೂ ರುದ್ರಭೂಮಿಯಲ್ಲಿ ಪ್ರದೀಪ್ ಅವರ ಅಂತ್ಯಕ್ರಿಯೆ ನೆರವೇರಲಿದೆ.