ಈ ಬಾರಿಯ ಚಿತ್ರೋತ್ಸವದಲ್ಲಿ ಕನ್ನಡದ ಚಿತ್ರಗಳಿಗೆ ಹೆಚ್ಚು ಆದ್ಯತೆ
ಪ್ರದರ್ಶನ ಕಾಣಲಿವೆ 50 ದೇಶಗಳ 200ಕ್ಕೂ ಹೆಚ್ಚು ಚಿತ್ರಗಳು
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 14ನೇ ಆವೃತ್ತಿಗೆ ಗುರುವಾರ (ಮಾರ್ಚ್ 23) ಸಂಜೆ ಅದ್ದೂರಿ ಚಾಲನೆ ದೊರೆತಿದೆ. ವಿಧಾನಸೌಧದ ಆವರಣದಲ್ಲಿ ಆಯೋಜನೆಗೊಂಡಿದ್ದ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ತೆಲುಗಿನ ಖ್ಯಾತ ಚಿತ್ರ ಸಾಹಿತಿ, ರಾಜ್ಯಸಭಾ ಸದಸ್ಯ ವಿಜಯ್ ಪ್ರಸಾದ್ ಅವರು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದು, ಬಾಲಿವುಡ್ನ ಹಿರಿಯ ನಿರ್ದೇಶಕ ಗೋವಿಂದ್ ನಿಹಲಾನಿ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ ಹರೀಶ್, ಅಭಿಷೇಕ್ ಅಂಬರೀಶ್, ಸಪ್ತಮಿ ಗೌಡ, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಅಶೋಕ್ ಕಶ್ಯಪ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಮಾ. 23ರಿಂದ 30ರ ವರೆಗೆ 7 ದಿನಗಳ ಕಾಲ ಚಿತ್ರೋತ್ಸವ ನಡೆಯಲಿದ್ದು, ಬೆಂಗಳೂರಿನ ಒರಾಯನ್ ಮಾಲ್, ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘ ಮತ್ತು ಬನಶಂಕರಿ ಬಡಾವಣೆಯ ಬಳಿ ಇರುವ ʼಸುಚಿತ್ರಾ ಫಿಲ್ಮ್ ಸೊಸೈಟಿʼಯಲ್ಲಿ 50 ದೇಶಗಳ 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನ ಕಾಣಲಿವೆ.
ಚಿತ್ರೋತ್ಸವದ 14ನೇ ಆವೃತ್ತಿಯ ಉದ್ಘಾಟನಾ ಚಿತ್ರವಾಗಿ ರಿಷಬ್ ಶೆಟ್ಟಿ ಮುಖ್ಯಭೂಮಿಕೆಯ ʼಕಾಂತಾರʼ ಸಿನಿಮಾ ಕಲಾವಿದರ ಸಂಘದ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಇತ್ತೀಚೆಗೆ ತೆರೆಕಂಡ ಮಂಸೋರೆ ನಿರ್ದೇಶನದ ‘19.20.21’, ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ತೆರೆಕಂಡಿದ್ದ ʼಗಾರ್ಗಿʼ, ʼಗಂಧದಗುಡಿʼ, ʼಗುರು ಶಿಶ್ಯರುʼ, ʼಹೆಡ್ ಬುಷ್ʼ, ʼಆರ್ಕೆಸ್ಟ್ರಾ ಮೈಸೂರುʼ, ʼವೇದʼ, ʼಗಾಳಿಪಟ-2ʼ, ʼವಿಕ್ರಾಂತ್ ರೋಣʼ, ʼಹಕ್ಕಿಗಳ ಕನಸುʼ, ʼಕಾಮಧೇನುʼ, ʼದಿ ಫಿಲಂ ಮೇಕರ್ʼ, ʼಪದವಿ ಪೂರ್ವʼ, ʼಮಾವು ಬೇವುʼ, ʼನಲ್ಕೆʼ, ʼಮೇಡ್ ಇನ್ ಬೆಂಗಳೂರುʼ, ʼಫೋಟೋʼ, ʼನಾನು ಕುಸುಮʼ, ʼಕೋಳಿ ಎಸ್ರುʼ, ʼಕೌಡಿಕಳಿʼ, ʼಬೈ ಟು ಲವ್ʼ ಮಂತಾದ ಚಿತ್ರಗಳು ಈ ಬಾರಿಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿವೆ.