- ಎಚ್ಚರಿಕೆ ನೀಡಿದ ಬಳಿಕವೂ ವಿವಾದಾತ್ಮಕ ಹೇಳಿಕೆ ನೀಡಿದ ಸೂಲಿಬೆಲೆ
- ಸಿಎಂ ಸಿದ್ದರಾಮಯ್ಯ ಹಿಟ್ಲರ್ ವಂಶಸ್ಥರು ಎಂದ ಬಿಜೆಪಿ ಬೆಂಬಲಿಗ
ಕೋಮು ಭಾವನೆಯ ಹೆಸರಲ್ಲಿ ನಾಟಕವಾಡಿದರೆ ಸೂಲಿಬೆಲೆ ಕಂಬಿ ಎಣಿಸಬೇಕಾಗುತ್ತದೆ ಎಂಬ ಸಚಿವ ಎಂ.ಬಿ ಪಾಟೀಲ್ ಅವರ ಹೇಳಿಕೆಗೆ ಸ್ಯಾಂಡಲ್ವುಡ್ನ ಹಿರಿಯ ನಟ, ಬಿಜೆಪಿಯ ರಾಜ್ಯಸಭಾ ಸಂಸದ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, “ಸೂಲಿಬೆಲೆ ಅವರು ಯಾವ ಅಧಿಕಾರದ ಹಿಂದೆ ಹೋಗದೆ ಸಾಂಸ್ಕೃತಿಕ ತತ್ವ, ವಿಚಾರ, ಕೆರೆಕಟ್ಟೆ ಪುನರುಜ್ಜೀವನ, ಪ್ರವಚನದಂತಹ ಸಾತ್ವಿಕ ಚಿಂತಕ. ಅವರನ್ನು ಜೈಲಿಗೆ ಹಾಕುವೆ ಎಂದರೆ, ಅಲ್ಲಿಗೆ ಗೆದ್ದು ತಿಂಗಳಿಗೆ ಈ ಮಾತು ಸನ್ಮಾನ್ಯ ಎಂ.ಬಿ ಪಾಟೀಲ್ ಬಾಯಲ್ಲಿ! ಮಾನ್ಯರೆ ಕಾನೂನು ನಿಮ್ಮ ಜೇಬಲ್ಲಿ ಇದೆಯಾ?ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಅವರ ಬೆನ್ನಿಗೆ!” ಎಂದಿದ್ದಾರೆ.
ಭಾನುವಾರ ವಿಜಯಪುರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಎಂ.ಬಿ ಪಾಟೀಲ್, “ಈ ಹಿಂದೆ ನಾಲ್ಕು ವರ್ಷ ಸೂಲಿಬೆಲೆ ಏನು ಅನಾಹುತ ಮಾಡಿದ್ದಾರೆ ಅಂತ ಕೇಳಿ. ಸೂಲಿಬೆಲೆ ಮಾಡಿದ ಅನಾಹುತಗಳನ್ನು ನಾವು ಸರಿಪಡಿಸುತ್ತಿದ್ದೇವೆ. ಪಠ್ಯಪುಸ್ತಕ, ಹಿಜಾಬ್, ಹಲಾಲ್, ಆಜಾನ್ ಅಂತೇಳಿ ಬಹಳ ನಾಟಕ ಮಾಡಿದ್ದಾರೆ. ಇನ್ಮುಂದೆ ಇಂಥ ನಾಟಕ ಮಾಡಿದ್ರೆ ಸೂಲಿಬೆಲೆಗೆ ಜೈಲು ಗ್ಯಾರಂಟಿ” ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ಕೋಮು ಭಾವನೆ ಹೆಸರಲ್ಲಿ ‘ಸೂಲಿಬೆಲೆ’ ನಾಟಕ ಮಾಡಿದರೆ ಜೈಲು ಗ್ಯಾರಂಟಿ: ಎಂ ಬಿ ಪಾಟೀಲ
ಎಂ.ಬಿ ಪಾಟೀಲ್ ಅವರು ಚಕ್ರವರ್ತಿ ಸೂಲಿಬೆಲೆ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೂಲಿಬೆಲೆ ಕೂಡ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, “ಸಿದ್ದರಾಮಯ್ಯನವರ ಸರ್ಕಾರ ರಾಷ್ಟ್ರೀಯತೆಯ ಮಾತನಾಡುವವರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯನವರು ಹಿಟ್ಲರ್ ವಂಶಸ್ಥರು” ಎಂದು ವಿವಾದಾತ್ಮಕ ಹೇಳಿಕ ನೀಡಿದ್ದಾರೆ.