ನಟ, ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯ ಅವರ ವೀಸಾ ರದ್ದುಗೊಳಿಸಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದ ಚೇತನ್ ಇದೀಗ ಹೈಕೋರ್ಟ್ ಮೊರೆ ಹೋಗಲು ಸಜ್ಜಾಗಿದ್ದು, ತಮ್ಮ ಮುಂದಿನ ನಡೆಯ ಬಗ್ಗೆ ಈದಿನ.ಕಾಮ್ ಜೊತೆಗೆ ಮಾತನಾಡಿದ್ದಾರೆ. ಕೇಂದ್ರದಿಂದ ತಮಗೆ ಬಂದ ಆದೇಶ ಪತ್ರದ ಪ್ರತಿಯನ್ನು ಕೂಡ ಹಂಚಿಕೊಂಡಿದ್ದಾರೆ.
ನಿಮ್ಮ ವೀಸಾ ರದ್ದಾಗಲು ಕಾರಣವೇನು?
ಕೇಂದ್ರ ಸರ್ಕಾರ ನನ್ನ ವೀಸಾವನ್ನು ರದ್ದು ಮಾಡಲು ಅಸಲಿ ಕಾರಣ ಏನು ಎಂಬುದು ನನಗೆ ಕೂಡ ತಿಳಿದಿಲ್ಲ. ಅಂಬೇಡ್ಕರ್ ಜಯಂತಿ ದಿನದಂದೇ ವೀಸಾ ರದ್ದು ಮಾಡಿರುವ ನೋಟಿಸ್ ನನ್ನ ಕೈ ಸೇರಿದ್ದು ನಿಜಕ್ಕೂ ವಿಪರ್ಯಾಸ. ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ನಾನು ಸರ್ಕಾರದ ನಿಲುವುಗಳನ್ನು ಪ್ರಶ್ನಿಸಿದ್ದಕ್ಕೆ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೇನೆ ಎನ್ನುತ್ತಿದ್ದಾರೆ.
ವೀಸಾ ರದ್ಧತಿಯ ಹಿಂದಿನ ಉದ್ದೇಶ ಏನೆಂದು ನಿಮಗನ್ನಿಸುತ್ತದೆ?
ನಾನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡೆಯನ್ನು ಪ್ರಶ್ನಿಸುತ್ತಲೇ ಬರುತ್ತಿದ್ದೇನೆ. ಇದೇ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ನನ್ನನ್ನು ಗುರಿಯಾಗಿಸಿ ಹಲವು ಪೊಲೀಸ್ ಪ್ರಕರಣಗಳು ದಾಖಲಾಗುತ್ತಿವೆ. ನನ್ನನ್ನು ಜೈಲಿಗೂ ಕಳುಹಿಸಿದ್ದಾರೆ. ಈಗ ಮುಂದುವರೆದ ಭಾಗವಾಗಿ ನನ್ನ ವೀಸಾ ರದ್ದುಗೊಳಿಸಿ, ʼಓಸಿಐ ಕಾರ್ಡ್ʼ (ಭಾರತೀಯ ಮೂಲದ ವಿದೇಶಿ ಪ್ರಜೆಗೆ ಭಾರತದಲ್ಲಿ ಅನಿರ್ದಿಷ್ಟ ಅವಧಿಯವರೆಗೆ ವಾಸಿಸಲು ಮತ್ತು ಕೆಲಸ ಮಾಡಲು ಇರುವ ವಲಸೆ ವ್ಯವಸ್ಥೆ) ಅನ್ನು ಹಿಂದಿರುಗಿಸಲು 15 ದಿನ ಸಮಯವಕಾಶ ನೀಡಿದ್ದಾರೆ. ಒಟ್ಟಿನಲ್ಲಿ ನನ್ನ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ.
ನಿಮ್ಮ ಮುಂದಿನ ನಡೆ ಏನು?
ವೀಸಾ ರದ್ಧತಿಯ ಪತ್ರ ಕೈಸೇರುತ್ತಲೇ ನಾನು ವಕೀಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಕೇಂದ್ರ ಸರ್ಕಾರದ ವೀಸಾ ರದ್ದತಿಯ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸೋಮವಾರದ ಹೊತ್ತಿಗೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಿದ್ದೇನೆ. ವಕೀಲರ ತಂಡದ ಜೊತೆಗೆ ಸಂಪರ್ಕದಲ್ಲಿದ್ದುಕೊಂಡು ಮನವಿ ಸಲ್ಲಿಸಲು ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ನಾನು ಯಾವುದೇ ಕಾರಣಕ್ಕೂ ಅಮೆರಿಕಕ್ಕೆ ವಾಪಾಸ್ ಹೋಗುವುದಿಲ್ಲ ಕಾನೂನಾತ್ಮಕವಾಗಿ ಹೋರಾಡುತ್ತೇನೆ.
ಕೇಂದ್ರದ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ ಚೇತನ್ ಅವರಿಗೆ ಕಳುಹಿಸಿರುವ ಆದೇಶ ಪ್ರತಿ